ವಿಡಿಯೋ; ಬಂಡೀಪುರದಲ್ಲಿ ಫೋಟೊ ತೆಗೆದವರ ವಾಹನ ಅಟ್ಟಾಡಿಸಿಕೊಂಡು ಬಂತು ಆನೆ
Recommended Video
ಚಾಮರಾಜನಗರ, ಆಗಸ್ಟ್ 21: ಫೋಟೊ ತೆಗೆಯುತ್ತಿದ್ದ ಪ್ರವಾಸಿಗರ ವಾಹನದ ಮೇಲೆ ಆನೆ ದಾಳಿ ನಡೆಸಲು ಮುಂದಾದ ಘಟನೆ ಬಂಡೀಪುರ ಅರಣ್ಯದೊಳಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೈಟೆಕ್ ಕಣ್ಗಾವಲು
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ರಸ್ತೆಯಲ್ಲಿ ತನ್ನ ಮರಿ ಆನೆಯೊಂದಿಗೆ ಎರಡು ಆನೆಗಳು ಕೆರೆಯಲ್ಲಿ ನೀರು ಕುಡಿದು ಸ್ವಸ್ಥಾನಕ್ಕೆ ಹಿಂದಿರುಗುತ್ತಿದ್ದವು. ಬಳಿಕ ರಸ್ತೆ ದಾಟುತ್ತಿದ್ದ ವೇಳೆ ತವೇರಾ ವಾಹನದಲ್ಲಿ ಅರಣ್ಯದೊಳಗೆ ಬಂದ ಪ್ರವಾಸಿಗರು ಆನೆಗಳ ಫೋಟೋ ತೆಗೆಯಲು ವಾಹನವನ್ನು ಸ್ವಲ್ಪ ನಿಧಾನಿಸಿದ್ದಾರೆ. ಆದರೆ ವಾಹನದ ಸದ್ದು ಕೇಳಿಸುತ್ತಿದ್ದಂತೆ ಹೆದ್ದಾರಿಯನ್ನು ದಾಟಿ ಮುಂದೆ ಹೋಗುತ್ತಿದ್ದ ಹೆಣ್ಣಾನೆಯು ಕೋಪಗೊಂಡು ದಿಢೀರನೆ ಹಿಂದಿರುಗಿ ಓಡಿ ಬಂದು ದಾಳಿಗೆ ಯತ್ನಿಸಿದೆ.
ಆನೆ ಓಡಿಬರುತ್ತಿದ್ದುದನ್ನು ಕಂಡು ವಾಹನದೊಳಗಿದ್ದವರು ಕಿರುಚಿಕೊಂಡಿದ್ದಾರೆ. ಚಾಲಕ ತಕ್ಷಣ ವಾಹನವನ್ನು ವೇಗವಾಗಿ ಮುಂದಕ್ಕೆ ಓಡಿಸಿಕೊಂಡು ಹೋಗಿದ್ದಾನೆ. ನಂತರ ಆನೆ ಮರಿಯತ್ತ ಹಿಂದಿರುಗಿದೆ. ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪದೇ ಪದೇ ಇಂತಹ ಘಟನೆಗಳು ಬಂಡೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿದ್ದು, ಇನ್ನಾದರೂ ಪ್ರವಾಸಿಗರು ಪ್ರಾಣಿಗಳಿಗೆ ಕಿರಿಕಿರಿಯುಂಟು ಮಾಡದಂತೆ ನಡೆದುಕೊಳ್ಳಬೇಕಿದೆ.