ಅಪಾಯಕಾರಿ ಕಲ್ಲು ಕ್ವಾರಿಯಲ್ಲಿ 'ಪ್ರಬುದ್ಧ' ಚಿತ್ರೀಕರಣ!
ಗುಂಡ್ಲುಪೇಟೆ, ಡಿಸೆಂಬರ್ 27 : ಪ್ರಬುದ್ಧ ಚಿತ್ರಕ್ಕಾಗಿ ಸಾಹಸಮಯ ದೃಶ್ಯವೊಂದನ್ನು ಥ್ರಿಲ್ಲರ್ ಮಂಜು ಮತ್ತು ತಂಡ ತಾಲೂಕಿನ ಹಿರಿಕಾಟಿಯ ಕಲ್ಲು ಕ್ವಾರಿಯಲ್ಲಿ ಚಿತ್ರೀಕರಣ ಮಾಡುತ್ತಿದ್ದು, ಅಸುರಕ್ಷಿತವಾಗಿರುವ ಈ ಪ್ರದೇಶದಲ್ಲಿ ಚಿತ್ರೀಕರಣ ಮಾಡುತ್ತಿರುವುದು ಅನಾಹುತಕ್ಕೆ ಆಹ್ವಾನ ನೀಡಿದಂತೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ಭಾರೀ ಆಳದ ಪ್ರದೇಶದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಇದನ್ನು ನೋಡಲು ಜನ ಮುಗಿ ಬೀಳುತ್ತಿದ್ದಾರೆ. ಸ್ವಲ್ಪ ಎಡವಿದರೂ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಚಿತ್ರೀಕರಣವನ್ನು ಯಾವುದೇ ಭದ್ರತೆಯಿಲ್ಲದೆ ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಹಿರಿಕಾಟಿಯ ಸರ್ವೆನಂ 108ರಲ್ಲಿ ಬಿಳಿಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದ್ದು ಇಲ್ಲಿನ ಸುಮಾರು 300 ರಿಂದ 400 ಅಡಿ ಆಳದ ಪ್ರದೇಶದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರೀಕರಣ ನಡೆಸಲು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದಿಂದ ಹಾಗೂ ಇಲಾಖೆಯ ಅನುಮತಿ ಪಡೆದಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಚಿತ್ರೀಕರಣ ನಡೆಯುತ್ತಿರುವ ವಿಷಯ ತಿಳಿದ ಅಕ್ಕಪಕ್ಕದ ಗ್ರಾಮದ ನೂರಾರು ಸಾರ್ವಜನಿಕರು ಆಗಮಿಸುತ್ತಿದ್ದು ಕುತೂಹಲದಿಂದ ಮೇಲ್ಭಾಗದಿಂದ ಇಣುಕಿ ನೋಡುತ್ತಿದ್ದು ಭಾರೀ ಆಳವಿರುವ ಕಾರಣ ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಿದೆ.
ಈ ಪ್ರದೇಶದಲ್ಲಿ ಚಿತ್ರೀಕರಣ ನೋಡುತ್ತಿರುವ ಸಾರ್ವಜನಿಕರಿಗಾಗಲಿ ಅಥವಾ ಚಿತ್ರೀಕರಣ ನಡೆಸುತ್ತಿರುವ ಸಿಬ್ಬಂದಿಗಳಿಗಾಗಲೀ ಯಾವುದೆ ಭದ್ರತೆಯಾಗಲೀ, ಸುರಕ್ಷತೆಯಾಗಲೀ ಇಲ್ಲ ಆದ್ದರಿಂದ ಈ ಬಗ್ಗೆ ಸಂಬಂಧಿಸಿದವರು ಗಮನಹರಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.