ಹನೂರು ವ್ಯಾಪ್ತಿಯಲ್ಲಿ ಮುಂದುವರೆದ ಮಳೆಯಬ್ಬರ: ಹಸು, ಕುರಿಗಳು ಬಲಿ
ಚಾಮರಾಜನಗರ, ಸೆಪ್ಟೆಂಬರ್.30: ಜಿಲ್ಲೆಯ ಹನೂರು ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿದ ಪರಿಣಾಮ ರೈತರೊಬ್ಬರ ಮನೆ ಗೋಡೆ ಕುಸಿದು ಬಿದ್ದು ಹಸು ಮತ್ತು ಮೂರು ಕುರಿಗಳು ಸಾವನ್ನಪ್ಪಿವೆ.
ಹನೂರು ವ್ಯಾಪ್ತಿಯಲ್ಲಿ ಪ್ರತಿ ವರ್ಷವೂ ಹಿಂಗಾರು ಮಳೆ ಅಬ್ಬರಿಸುವುದು ಮಾಮೂಲಾಗಿದ್ದು, ಶನಿವಾರ ರಾತ್ರಿಯಿಡೀ ಮಳೆ ಸುರಿದಿದೆ. ಇದರಿಂದ ಕಣ್ಣೂರು ಗ್ರಾಮದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ನೀರು ಹರಿದು ಹಲವು ಮನೆಗಳಿಗೆ ನುಗ್ಗಿದ್ದರಿಂದ ಹೆದರಿದ ಜನ ನಿದ್ದೆ ಮಾಡದೆ ನೀರನ್ನು ಹೊರ ಹಾಕುವ ಕಾರ್ಯದಲ್ಲಿ ತೊಡಗುವಂತಾಯಿತು.
ಹನೂರು ವ್ಯಾಪ್ತಿಯಲ್ಲಿ ಭಾರೀ ಗಾಳಿ, ಮಳೆ: ಕೆರೆಯಂತಾದ ಪ್ರೌಢಶಾಲಾ ಆವರಣ
ಈ ನಡುವೆ ಮಳೆಗೆ ಗ್ರಾಮದ ನಂಜಯ್ಯ ಎಂಬುವವರ ಮನೆಯ ಗೋಡೆ ಕುಸಿದು ಬಿದ್ದಿದ್ದರಿಂದ ಅಲ್ಲಿಯೇ ಕಟ್ಟಿದ ಹಸು ಮತ್ತು ಮೂರು ಕುರಿಗಳು ಬಲಿಯಾಗಿವೆ. ಮತ್ತೊಬ್ಬ ರೈತ ಚಿಕ್ಕಹೊಂಗಯ್ಯ ಎಂಬುವವರ ಮನೆ ಗೋಡೆ ಕುಸಿದು ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ರಾಜೇಶ್ ಎಂಬುವವರ ರೇಷ್ಮೆ ಗೂಡು ನೀರಿನಲ್ಲಿ ಮುಳುಗಿದ್ದು, ಗೋಡೆ ಕುಸಿದು ಬಿದ್ದಿದೆ. ಇದರಿಂದ ಲಕ್ಷಾಂತರ ರೂ. ಆಸ್ತಿ ಹಾನಿಯಾಗಿದೆ. ಮಳೆಯಿಂದ ಹಾನಿ ಸಂಭವಿಸಿದ ಕಣ್ಣೂರು ಗ್ರಾಮಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ನೀರನ್ನು ತೆಗೆದು ಹೊರ ಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಮಂಗಳೂರಲ್ಲಿ ಮತ್ತೆ ಮಳೆ ಆರಂಭ:ಸಮುದ್ರ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ
ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣದಿಂದ ಮಳೆ ನೀರು ಹೊರಹೋಗಲಾಗದೆ ಮನೆಯೊಳಕ್ಕೆ ನುಗ್ಗಿದ್ದು, ಇದರಿಂದ ಹೆಚ್ಚಿನ ಹಾನಿ ಸಂಭವಿಸಿದೆ. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಗ್ರಾಮಸ್ಥರ ಸಹಕಾರದೊಂದಿಗೆ ನೀರು ಹರಿಯುವ ಕಾಲುವೆಗಳನ್ನು ಸರಿಪಡಿಸಿ, ಕುಸಿದ ಗೋಡೆಗಳನ್ನು ತೆರವುಗೊಳಿಸಿ ನೀರು ಹರಿದು ಹೋಗುವಂತೆ ಮಾಡಿದ್ದಾರೆ.
ಇದರಿಂದ ಗ್ರಾಮಸ್ಥರು ನೆಮ್ಮದಿಯುಸಿರು ಬಿಡುವಂತಾಗಿದೆ. ಈ ನಡುವೆ ಗ್ರಾಮದಲ್ಲಿ ಮಳೆಯಿಂದ ಅನಾಹುತ ಸಂಭವಿಸಲು ಮೂಲ ಸೌಲಭ್ಯದಲ್ಲೊಂದಾದ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರಾಜಧಾನಿಯಲ್ಲಿ ಮತ್ತೆ ಮಳೆ: ಎಚ್ಚರಿಕೆ ವಹಿಸಲು ಸಿಎಂ ಮನವಿ
ಸ್ಥಳಕ್ಕೆ ತಹಸೀಲ್ದಾರ್ ಹಾಗೂ ಗ್ರಾಮ ಲೆಕ್ಕಾಧಿಕಾರಿ, ಇನ್ನಿತರ ಅಧಿಕಾರಿಗಳು ಭೇಟಿ ನೀಡಿ ಮಳೆಯಿಂದ ಆಗಿರುವ ಅನಾಹುತದ ಮಾಹಿತಿ ಪಡೆದಿದ್ದಾರೆ. ಅಲ್ಲದೆ ಮಳೆಯ ನಷ್ಟ ಇನ್ನಿತರ ಹಾನಿಯ ಲೆಕ್ಕಚಾರ ಮಾಡಿ ಪ್ರಕೃತಿ ವಿಕೋಪದಡಿ ಪರಿಹಾರ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.