ಬಂಡೀಪುರ ಅರಣ್ಯದ ಕಾಡ್ಗಿಚ್ಚಿನ ಮೇಲೆ 'ಡ್ರೋನ್' ಕಣ್ಣು!
ಚಾಮರಾಜನಗರ, ಡಿಸೆಂಬರ್.15: ಪ್ರತಿವರ್ಷ ಬೇಸಿಗೆ ಸಮಯದಲ್ಲಿ ಬಂಡೀಪುರದ ಅರಣ್ಯವನ್ನು ಕಾಡ್ಗಿಚ್ಚಿನಿಂದ ರಕ್ಷಿಸುವುದೇ ಅರಣ್ಯ ಇಲಾಖೆಗೆ ಸವಾಲ್ ಆಗಿದೆ. ಎಷ್ಟೇ ನಿಗಾವಹಿಸಿದರೂ ಅಗ್ನಿ ಅನಾಹುತದಿಂದ ಅರಣ್ಯವನ್ನು ರಕ್ಷಿಸಲು ಆಗುತ್ತಿಲ್ಲ. ಹೀಗಾಗಿ ಅಗ್ನಿ ಅನಾಹುತದಿಂದ ಅರಣ್ಯವನ್ನು ರಕ್ಷಿಸಿಕೊಳ್ಳಲು ಹಠಕ್ಕೆ ಬಿದ್ದಿರುವ ಅರಣ್ಯಾಧಿಕಾರಿಗಳು ದ್ರೋನ್ ಕ್ಯಾಮರಾ ಬಳಕೆಗೆ ಮುಂದಾಗಿದ್ದಾರೆ.
ಬೇಸಿಗೆ ಮುನ್ನ ಅರಣ್ಯದಲ್ಲಿ ಬೆಂಕಿ ತಡೆ ರೇಖೆಯನ್ನು ನಿರ್ಮಿಸಿ ಕಾಡ್ಗಿಚ್ಚು ತಡೆಗೆ ಕ್ರಮ ಕೈಗೊಳ್ಳಲಾಗಿತ್ತು. ಹೀಗಿದ್ದರೂ ಆಕಸ್ಮಿಕವಾಗಿ ಸಂಭವಿಸುವ ಅಗ್ನಿ ಅನಾಹುತಕ್ಕಿಂತ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚುವಂತಹ ಕೃತ್ಯಗಳನ್ನು ಮಾಡುತ್ತಿದ್ದಾರೆ.
ಬಂಡೀಪುರದಲ್ಲಿ ಅಗ್ನಿ ಅನಾಹುತ ತಡೆಗೆ "ಬೆಂಕಿ ರೇಖೆ"
ಬೇಸಿಗೆ ಸಮಯದಲ್ಲಿ ಅರಣ್ಯದ ಒಂದು ವಲಯದಲ್ಲಿ ಬೆಂಕಿ ಹಚ್ಚಿ ಇಡೀ ಅರಣ್ಯ ಸಿಬ್ಬಂದಿಯನ್ನು ಅತ್ತ ಗಮನಸೆಳೆಯುವಂತೆ ಮಾಡಿ ಮತ್ತೊಂದು ಕಡೆ ತಮ್ಮ ಕೃತ್ಯಗಳನ್ನು ಸರಾಗವಾಗಿ ಮಾಡಲು ಕೆಲವು ಕಿಡಿಗೇಡಿಗಳು ತಂತ್ರ ರೂಪಿಸುತ್ತಾರೆ ಎಂಬ ಆರೋಪವೂ ಇದೆ.
ಬಂಡೀಪುರ ಅರಣ್ಯದಲ್ಲಿ ಡ್ರೋನ್ ಕಣ್ಣು
ಕಿಡಿಗೇಡಿ ಕೃತ್ಯಗಳ ಬಗ್ಗೆ ಅರಿತ ಅರಣ್ಯ ಇಲಾಖೆ ಅಧಿಕಾರಿಗಳು ಬೇಸಿಗೆಯಲ್ಲಿ ಸಂಭವಿಸುವ ಕಾಡ್ಗಿಚ್ಚು ನಿಯಂತ್ರಿಸುವ ಸಲುವಾಗಿ ಇದೀಗ ಬೆಂಕಿ ತಡೆ ರೇಖೆಯನ್ನು ನಿರ್ಮಿಸಲಾಗುತ್ತಿದೆ. ಬಹುತೇಕ ಕಾಮಗಾರಿ ಈಗಾಗಲೇ ಮುಗಿದಿದೆ. ಆದರೂ ಬೇಸಿಗೆ ಸಮಯದಲ್ಲಿ ಅರಣ್ಯವನ್ನು ಹದ್ದಿನ ಕಣ್ಣಿಟ್ಟು ಕಾಯುವ ಸಲುವಾಗಿ ದ್ರೋನ್ ಕ್ಯಾಮರಾ ಬಳಸುತ್ತಿರುವುದು ಈ ಬಾರಿಯ ವಿಶೇಷತೆಯಾಗಿದೆ.
ಬೆಂಕಿ ನಂದಿಸಲು ಹೆಲಿಕಾಪ್ಟರ್ ಬಳಕೆಗೆ ತೀರ್ಮಾನ
ಕಳೆದ ವರ್ಷ ಬಂಡೀಪುರ ಅರಣ್ಯದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಸುಮಾರು 15 ಸಾವಿರಾರು ಎಕರೆ ಅರಣ್ಯಪ್ರದೇಶ ಸುಟ್ಟು ಭಸ್ಮವಾಗಿತ್ತು. ಅಲ್ಲದೆ, ಬೆಂಕಿ ಆರಿಸುವ ಸಲುವಾಗಿ ಹೆಲಿಕಾಪ್ಟರ್ ಗಳನ್ನು ಬಳಸಲಾಗಿತ್ತು. ಇಂತಹ ದುರಂತ ಮರುಕಳಿಸಬಾರದೆಂಬ ಕಾರಣಕ್ಕೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯ, ಕುಂದಕರೆ ವಲಯ ಹಾಗೂ ಮದ್ದೂರು ವಲಯಗಳ ಕಾಡಂಚಿನಲ್ಲಿ ಮೂರರಿಂದ ನಾಲ್ಕು ಡ್ರೋನ್ ಕ್ಯಾಮರಾ ಅಳವಡಿಸಲು ತೀರ್ಮಾನಿಸಲಾಗಿದೆ.
13 ವಲಯಗಳಲ್ಲಿ 800 ಮಂದಿ ಫೈರ್ ವಾಚರ್ಸ್
ಇನ್ನು, ಪ್ರತಿ ವಲಯಕ್ಕೂ 40 ರಿಂದ 50 ಸಿಬ್ಬಂದಿ ನೇಮಕ ಮಾಡುವ ಜೊತೆಗೆ ದಿನದ 24 ಗಂಟೆಗಳ ಕಾಲ ಅರಣ್ಯದಲ್ಲಿ ಅಗ್ನಿ ಅವಘಡ ಸಂಭವಿಸದಂತೆ ನಿಗಾ ವಹಿಸಲಾಗುತ್ತಿದೆ. ಬಂಡಿಪುರದ ಒಟ್ಟು 13 ವಲಯಕ್ಕೆ ಸುಮಾರು 800ಕ್ಕೂ ಹೆಚ್ಚು ಸಿಬ್ಬಂದಿಯನ್ನು ಫೈರ್ ವಾಚರ್ಸ್ ಎಂದು ನೇಮಕ ಮಾಡಲಾಗುತ್ತಿದೆ. ಇದರ ಜೊತೆಗೆ ದ್ರೋನ್ ಕ್ಯಾಮರಾ ಮತ್ತು ಅಗ್ನಿಶಾಮಕ ದಳ, ಸ್ಥಳೀಯ ಸೋಲಿಗ ಸಮುದಾಯದ ಸಹಕಾರವನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.
ಈ ಬಾರಿ ಫೈರ್ ವಾಚರ್ಸ್ ಗೆ ಇಲಾಖೆಯಿಂದಲೇ ಜೀವವಿಮೆ
ಈ ಬಾರಿ ಫೈರ್ ವಾಚರ್ಸ್ ಆಗಿ ಕೆಲಸ ಮಾಡುವ ಎಲ್ಲರಿಗೂ ಇನ್ಶುರೆನ್ಸ್ ಮಾಡಿಸುತ್ತಿರುವುದು ವಿಶೇಷವಾಗಿದೆ. ಏಕೆಂದರೆ ಹಿಂದೆ ನಡೆದ ಅಗ್ನಿ ದುರಂತದ ಸಂದರ್ಭ ಜೀವ ತೆತ್ತ ನಿದರ್ಶನಗಳಿವೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಅರಣ್ಯ ಇಲಾಖೆ ಸಿಬ್ಬಂದಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಅರಣ್ಯ ರಕ್ಷಣೆಗೆ ಮುಂದಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.