ಗಾಜನೂರಿಗೆ ಬಂದ ಅಣ್ಣಾವ್ರ ಅಭಿಮಾನಿಗಳು ಮಾಡಿದ್ದೇನು?
ಚಾಮರಾಜನಗರ, ಏಪ್ರಿಲ್ 22: ವರನಟ ಡಾ. ರಾಜಕುಮಾರ್ ಅವರ 90 ನೇ ಜಯಂತಿ ಅಂಗವಾಗಿ ಅವರ ಜನ್ಮಭೂಮಿ ಗಾಜನೂರಿನಿಗೆ ಆಗಮಿಸಿದ ಬೆಂಗಳೂರಿನ 90 ಮಂದಿ ಡಾ. ರಾಜ್ ಅಭಿಮಾನಿಗಳು ನೇತ್ರದಾನ ಮಾಡುವ ಅರ್ಜಿಗೆ ಸಹಿ ಹಾಕಿ ಗಮನ ಸೆಳೆದಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬೆಂಗಳೂರಿನ ಮುತ್ತು ರಾಜು ಅಭಿಮಾನಿ ಬಳಗ ಹಾಗೂ ವಿಶ್ವ ಮಾನವ ಡಾ. ರಾಜಕುಮಾರ್ ಸೇವಾ ಸಮಿತಿ ಪದಾಧಿಕಾರಿಗಳು ಬೆಂಗಳೂರಿನಿಂದ ಖಾಸಗಿ ಬಸ್ನಲ್ಲಿ ಗಾಜನೂರಿಗೆ ಆಗಮಿಸಿ, ಡಾ.ರಾಜ್ ಅವರು ಜನ್ಮ ನೀಡಿದ ಗಾಜನೂರಿನ ಮನೆಯ ಮುಂದೆ ನೇತ್ರದಾನ ಮಾಡುವ ಸಂಕಲ್ಪ ಮಾಡಿ, ಜೈಕಾರ ಕೂಗಿದ್ದಾರೆ. ಅಲ್ಲದೇ ಇತರರೂ ನೇತ್ರದಾನ ಮಾಡುವ ಜಾಗೃತಿ ಮೂಡಿಸಿದ್ದಾರೆ.
ರಾಜ್ ಬಯೋಪಿಕ್ ಬರಬೇಕೆ? : ಏನೆಂದರು ಕನ್ನಡಿಗರು?
ಬೆಂಗಳೂರಿನಿಂದ ಚಾಮರಾಜನಗರದ ತಾಳವಾಡಿ ಸಮೀಪದ ಗಾಜನೂರಿಗೆ ಆಗಮಿಸಿದ ಅಭಿಮಾನಿಗಳು ಡಾ. ರಾಜ್ ಕುಮಾರ್ ಅವರ ಮನೆಗೆ ಭೇಟಿ ನೀಡಿ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಅವರ ತಂದೆ, ತಾಯಿ ಭಾವಚಿತ್ರ ಮತ್ತು ರಾಜಕುಮಾರ್ ಅವರ ವಿಭಿನ್ನ ಭಾವಚಿತ್ರಗಳ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡರು. ನಂತರ ಅವರು ಓಡಾಡಿದ ಜಾಗದಲ್ಲಿ ತಾವು ಓಡಾಡಿ ಸಂಭ್ರಮಪಟ್ಟರು. ಇದೇ ವೇಳೆ ವೀರಪ್ಪನ್ ರಾಜ್ ಅವರನ್ನು ಅಪಹರಿಸಿದ ಜಾಗ ಮತ್ತು ಕರೆದುಕೊಂಡು ಹೋದ ಮಾರ್ಗದ ಕುರಿತಂತೆ ತಿಳಿದು ಕೊಂಡರು.
ಡಾ. ರಾಜ್ ಮನೆಯಲ್ಲಿದ್ದ ಅವರ ಸಹೋದರಿ ನಾಗಮ್ಮ, ರಾಜ್ ಸಂಬಂಧಿ ಗೋಪಾಲ್ ಮತ್ತು ಅವರ ಪತ್ನಿಗೆ ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿದರು. ಡಾ. ರಾಜ್ ಅವರ ತಂಗಿ ನಾಗಮ್ಮ ಅವರಿಂದ ಆಶೀರ್ವಾದ ಪಡೆದುಕೊಂಡರು. ಬಳಿಕ ಗಾಜನೂರಿನಲ್ಲಿ ಮಧ್ಯಭಾಗದಲ್ಲಿರುವ ಡಾ. ರಾಜ್ ಹುಟ್ಟಿ ಬೆಳೆದ ನಾಡಂಚಿನ ಮನೆಗೆ ತೆರಳಿ ಮನೆಯೊಳಗೆ ವೀಕ್ಷಿಸಿ ಬಳಿಕ ಒಂದಷ್ಟು ಸಮಯವನ್ನು ಅಲ್ಲಿ ಕಳೆದು ಬಳಿಕ ಬೆಂಗಳೂರಿಗೆ ಹಿಂತಿರುಗಿದರು.