ಯೋಗಿ ಮಾದರಿ ಸರ್ಕಾರ ಜಾರಿಗೆ ಬರಲು ಬಿಡಲ್ಲ: ಚಾಮರಾಜನಗರದಲ್ಲಿ ವಾಟಾಳ್ ನಾಗರಾಜ್ ಗರಂ
ಚಾಮರಾಜನಗರ, ಆಗಸ್ಟ್ 07: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೊದಲು ಜಾತಿ ರಾಜಕಾರಣ ಬಿಡಬೇಕು ಎಂದು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಚಾಮರಾಜನಗರದಲ್ಲಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಜಾತಿ, ಕೋಮುಗಳ ಸಂಘರ್ಷ ನಿಲ್ಲಲಿ. ಒಬ್ಬರ ನಂತರ ಒಬ್ಬರು ಸರಣಿ ಕೊಲೆಯಾಗುತ್ತಿದ್ದು, ಕರ್ನಾಟಕ ಕೊಲೆಗಳ ರಾಜ್ಯ ಆಗುತ್ತಿದೆ. ಇದು ಜಾತಿ, ಕೋಮು ರಾಜ್ಯವಲ್ಲ. ಎಲ್ಲ ರಾಜಕಾರಣಿಗಳು ಮೊದಲು ಜಾತಿ ರಾಜಕಾರಣ ಬಿಡಿ ಎಂದು ಕಿಡಿಕಾರಿದರು.
ಯೋಗಿ ಮಾದರಿ ಸರ್ಕಾರ ಎಂದರೆ ಸೇಬು, ಮಾವಿನಹಣ್ಣು ತಿನ್ನುವುದಲ್ಲ. ಬುಲ್ಡೋಜರ್, ಜೆಸಿಬಿ ತಂದು ಮನೆಗಳನ್ನು ಉರುಳಿಸುವುದು. ಬಡವರು, ಹಿಂದುಳಿದವರು ಹಾಗೂ ಮುಸಲ್ಮಾನರ ಮನೆಗಳು ಒಡೆಯುವುದು ಇದು ಆರ್ಎಸ್ಎಸ್, ಬಿಜೆಪಿಯವರ ನೀತಿ ಆಗಿದೆ. ಆರ್ಎಸ್ಎಸ್, ಬಿಜೆಪಿಯವರು ರಾಜ್ಯವನ್ನು ಹಾಳು ಮಾಡುತ್ತಿದ್ದಾರೆ. ಅದರಲ್ಲಿ ಎರಡು ಮಾತಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಳ್ಳೆಯ ವ್ಯಕ್ತಿ. ಆದರೆ ಪಾಪ ಅವರು ರಾಜಕಾರಣದಲ್ಲಿ ತೇಲಾಡುತ್ತಿದ್ದಾರೆ. ರಾಜ್ಯದಲ್ಲಿ ಯೋಗಿ ಮಾದರಿ ಸರ್ಕಾರ ಮಾಡುತ್ತೇನೆ ಎಂದಿರುವುದು ಗೌರವವಲ್ಲ ಎಂದರು. ಯೋಗಿ ಸರ್ಕಾರ ಎಂದರೆ ಭಾರತ ಸರ್ಕಾರನಾ? ಅಥವಾ ಪಾರ್ಲಿಮೆಂಟ್ ತೀರ್ಮಾನವಾ?, ಅವರು ಬಡವರ ಮನೆಗಳನ್ನು ಒಡೆಯಲು ಬಂದರೆ ಕನ್ನಡ ಚಳವಳಿ ವಾಟಾಳ್ ಪಕ್ಷ ಬುಲ್ಡೋಜರ್, ಜೆಸಿಬಿ ಮುಂದೆ ನಿಲ್ಲುತ್ತವೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಹಿಂದೆಂದೂ ಕಾಣದಂತೆ ಭೀಕರ ಮಳೆ ಸುರಿದಿದೆ. ನದಿ, ಕೆರೆ, ಕಟ್ಟೆಗಳು ತುಂಬಿ ಹರಿದಿವೆ. ಇದರಿಂದ ಸಾವಿರಾರು ಕೋಟಿ ರೂಪಾಯಿ ಬೆಳೆ ನಷ್ಟವಾಗಿದೆ. ಇದನ್ನು ವೀಕ್ಷಿಸಲು ಪ್ರಧಾನಿಮಂತ್ರಿಗಳು ಬರಬೇಕಾಗಿತ್ತು. ಕೇಂದ್ರ ಸರ್ಕಾರ ಕೂಡಲೇ ನಷ್ಠವಾಗಿರುವ ಹಣವನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಕರ್ನಾಟಕಕ್ಕೆ ಅನ್ಯಾಯ ಮಾಡಿದಂತೆ ಆಗಲಿದೆ ಎಂದರು. ಪಾಲಿಮರ್ ಧ್ವಜ ಬಳಕೆಗೆ ಅವಕಾಶ ಕೊಟ್ಟಿರುವುದನ್ನು ವಿರೊಧಿಸಿದ ಅವರು ಖಾದಿ ಧ್ವಜವೇ ಶ್ರೇಷ್ಠ, ಅದನ್ನೇ ಬಳಸಬೇಕು ಎಂದು ಒತ್ತಾಯಿಸಿದರು.