ಬಂಡಿಪುರದಲ್ಲಿ ವಾಹನದ ಗಾಜನ್ನು ಪುಡಿಪುಡಿಯಾಗಿಸಿದ ಸಾಕಾನೆ ಪುಂಡಾಟ!
ಚಾಮರಾಜನಗರ, ಫೆಬ್ರವರಿ 22: ಬಂಡೀಪುರದ ಸಾಕಾನೆ ಶಿಬಿರದಲ್ಲಿರುವ ಆನೆಯೊಂದು ದಾಂಧಲೆ ನಡೆಸಿ ಅರಣ್ಯಾಧಿಕಾರಿಗಳ ವಾಹನವನ್ನು ಜಖಂ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಪೊಲೀಸ್ ಉಪಠಾಣೆ ಹಿಂಭಾಗದಲ್ಲಿರುವ ಆನೆ ಶಿಬಿರದಲ್ಲಿ ಈ ಘಟನೆ ನಡೆದಿದೆ. ರೊಚ್ಚಿಗೆದ್ದ ಸಾಕಾನೆ ಚೈತ್ರ, ಹುಲಿಯೋಜನೆಯ ನಿದೇರ್ಶಕ ಅಂಬಾಡಿ ಮಾಧವ್ ರವರಿಗೆ ಸೇರಿದ ಕಪ್ಪು ಬಣ್ಣದ ಸ್ಕ್ಯಾರ್ಫಿಯೊಗೆ ಗುದ್ದಿ ಗಾಜುಗಳನ್ನು ಸಂಪೂರ್ಣವಾಗಿ ಜಖಂ ಮಾಡಿದೆ. ಇದರಿಂದ ವಾಹನದ ಕೆಲ ಭಾಗ ಜಖಂ ಗೊಂಡಿದೆ. ಸಾಕಾನೆಯ ರೌದ್ರತೆ ನೋಡಿದ ಅರಣ್ಯ ಇಲಾಖೆಯ ಸಿಬ್ಬಂದಿ ಇದೀಗ ಆತಂಕಗೊಂಡಿದ್ದಾರೆ.
ಬಂಡೀಪುರ ಶಿಬಿರದಿಂದ ಸಾಕಾನೆಗಳ ಸ್ಥಳಾಂತರ?
ಬಂಡೀಪುರ ಶಿಬಿರದಲ್ಲಿ ಚೈತ್ರ ಮತ್ತು ಜಯಪ್ರಕಾಶ್ ಎಂಬ ಎರಡು ಸಾಕಾನೆಗಳಿದ್ದು, ಇವುಗಳನ್ನು ನೋಡಿಕೊಳ್ಳುವುದೇ ಅರಣ್ಯ ಸಿಬ್ಬಂದಿಗೆ ಕಷ್ಟವಾಗಿ ಪರಿಣಮಿಸಿದೆ. ಇವುಗಳನ್ನು ಯಾವುದೇ ಕಾರ್ಯಕ್ಕೂ ಬಳಸಿಕೊಳ್ಳಲಾಗುತ್ತಿಲ್ಲ. ಜತೆಗೆ ಇವುಗಳಿಗೆ ಬೇಕಾದ ಆಹಾರ ಪದಾರ್ಥಗಳನ್ನು ಸಮರ್ಪಕವಾಗಿ ಒದಗಿಸಲು ಸಾಧ್ಯವಾಗುತ್ತಿಲ್ಲ. ಅರಣ್ಯದಲ್ಲಿ ಬಿದಿರು ನಾಶವಾದ ಬಳಿಕ ಹಸಿರು ಮೇವು ಕೂಡ ಸಿಗುತ್ತಿಲ್ಲ ಹೀಗಾಗಿ ಅವು ರೊಚ್ಚಿಗೇಳುತ್ತಿವೆ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.
ಇದೆಲ್ಲದರ ನಡುವೆ ಈ ಎರಡು ಸಾಕಾನೆಗಳನ್ನು ಬೇರೆ ಅರಣ್ಯ ಶಿಬಿರಗಳಿಗೆ ಸ್ಥಳಾಂತರಿಸಲು ಚಿಂತನೆ ನಡೆದಿದೆ. ಇದನ್ನು ಹುಲಿಯೋಜನೆಯ ನಿರ್ದೇಶಕರು ಖಚಿತ ಪಡಿಸಿದ್ದಾರೆ. ಸಾಕಾನೆ ದಾಳಿಯಿಂದ ಯಾವುದೇ ರೀತಿಯ ಪ್ರಾಣಪಾಯವಾಗಿಲ್ಲ ಎಂದು ಸಹ ಅವರು ಸ್ಪಷ್ಟಪಡಿಸಿದ್ದಾರೆ.
ಚಾಮರಾಜನಗರ: ಬಂಡೀಪುರದಲ್ಲಿ ಆನೆ ಸಫಾರಿಗೆ ನಡೆದಿದೆಯಾ ಸಿದ್ಧತೆ?
ಕಳೆದ ಜನವರಿ 27ರ ರಾತ್ರಿ ಬಂಡೀಪುರದ ವಸತಿ ಗೃಹದ ಮುಂದೆ ಇದೇ ಸಾಕಾನೆಗಳು ಪ್ರವಾಸಿಗರ ಕಾರನ್ನು ಎತ್ತಿ ಬಿಸಾಕಿದ್ದಲ್ಲದೆ, ಅಲ್ಲೇ ಇದ್ದ ನೀರಿನ ಟ್ಯಾಂಕ್ ಅನ್ನೂ ಧ್ವಂಸ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.