ದೊಡ್ಡಾಣೆ ಗ್ರಾಮದ ಜನಕ್ಕೆ ಡೋಲಿಯೇ ಅನಿವಾರ್ಯ ಏಕೆ?
ಚಾಮರಾಜನಗರ, ಜುಲೈ 1: ಕಳೆದ ಆರು ತಿಂಗಳ ಹಿಂದೆ ಜಿಲ್ಲೆಯ ಮಲೆ ಮಹದೇಶ್ವರಬೆಟ್ಟ ಗ್ರಾಮ ಪಂಚಾಯಿತಿ ಮತ್ತು ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ದೊಡ್ಡಾಣೆ ಗ್ರಾಮದಲ್ಲಿ ಸಾಮೂಹಿಕ ಜ್ವರ ಕಾಣಿಸಿಕೊಂಡು ಜನ ನರಳುತ್ತಿರುವ ಬಗ್ಗೆ ಸುದ್ದಿಯಾಗಿತ್ತು. ಇದೀಗ ಮತ್ತೆ ದೊಡ್ಡಾಣಿ ಗ್ರಾಮ ಸುದ್ದಿಯಾಗಿದೆ. ಹೆರಿಗೆ ನೋವಿನಿಂದ ನರಳುತ್ತಿದ್ದ ಗರ್ಭಿಣಿಯನ್ನು ಎಂಟತ್ತು ಕಿ.ಮೀ. ದೂರದ ಆಸ್ಪತ್ರೆಗೆ ಡೋಲಿಯಲ್ಲಿ ಹೊತ್ತು ತಂದ ಮನಕಲಕುವ ಘಟನೆ ನಡೆದಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಹಾಗೆ ನೋಡಿದರೆ ದೊಡ್ಡಾಣೆ ಗ್ರಾಮದ ಜನರು ಗರ್ಭಿಣಿಯಿರಲಿ, ರೋಗಿಯಿರಲಿ ಆಸ್ಪತ್ರೆಗೆ ಕರೆದೊಯ್ಯಬೇಕಾದರೆ ಡೋಲಿಯಲ್ಲಿ ಹೊತ್ತು ತರುವುದು ಇವತ್ತು ನಿನ್ನೆಯದಲ್ಲ. ಇದು ಹಿಂದಿನಿಂದಲೂ ನಡೆದು ಬಂದಿದೆ. ಹೀಗೇಕೆ ಎಂದು ನೋಡಿದರೆ ಈ ಗ್ರಾಮವು ಯಾವುದೇ ಸೌಲಭ್ಯವಿಲ್ಲದ ಕುಗ್ರಾಮವಾಗಿರುವುದೇ ಮುಖ್ಯ ಕಾರಣ ಎನ್ನುವುದು ನಮ್ಮ ಪ್ರಶ್ನೆಗೆ ಸಿಗುವ ಸುಲಭದ ಉತ್ತರವಾಗಿದೆ.
ದೊಡ್ಡಾಣೆ ಗ್ರಾಮದ ಶಾಂತಲಾ ಎಂಬ ಗರ್ಭಿಣಿಗೆ ಮಧ್ಯರಾತ್ರಿ ಎರಡು ಗಂಟೆ ಸಮಯದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿತು. ಆ ಸಂದರ್ಭದಲ್ಲಿ ಆಕೆಯನ್ನು ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯ ಬೇಕಾಗಿತ್ತು. ಆದರೆ ಮಧ್ಯರಾತ್ರಿ ಎರಡರ ಸಮಯದಲ್ಲಿ ಗರ್ಭಿಣಿ ಯನ್ನು ಆಸ್ಪತ್ರೆ ಕರೆದೊಯ್ಯಲು ವಾಹನಗಳಿಲ್ಲದೆ ವಿಧಿ ಇಲ್ಲದೆ ಡೋಲಿ ಕಟ್ಟುಕೊಂಡು ಗರ್ಭಿಣಿಯನ್ನು ಅದರಲ್ಲಿರಿಸಿ ದೊಡ್ಡಾಣೆ ಗ್ರಾಮದಿಂದ ಕಾಲ್ನಡಿಗೆ ಹೊರಟ ಗ್ರಾಮಸ್ಥರು ಬೆಳಗ್ಗೆ 6ರ ವೇಳೆಗೆ ಸುಳ್ವಾಡಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಲುಪಿದ್ದಾರೆ.
ರೋಗ ಬಂದರೆ ಡೋಲಿ ಅನಿವಾರ್ಯ
ಬೆಟ್ಟ ಪ್ರದೇಶದಲ್ಲಿರುವ ದೊಡ್ಡಾಣೆ ಗ್ರಾಮಕ್ಕೆ ತೆರಳಲು ರಸ್ತೆ ಸಂಪರ್ಕವೂ ಇಲ್ಲದಾಗಿದೆ. ಬೆಟ್ಟ ಗುಡ್ಡಗಳ ಕಡಿದಾದ ಹೊಂಡ ಗುಂಡಿಗಳ ರಸ್ತೆಯಲ್ಲಿ ಸಾಗಬೇಕು. ಗ್ರಾಮಸ್ಥರು ನಡೆದುಕೊಂಡೇ ಇಲ್ಲಿಗೆ ತೆರಳುತ್ತಾರೆ. ಸಣ್ಣಪುಟ್ಟ ರೋಗಗಳಿಗೆ ಸ್ಥಳೀಯ ನಾಟಿ ಔಷಧಿಗಳನ್ನೇ ಮಾಡಿಕೊಳ್ಳುವ ಗ್ರಾಮಸ್ಥರು. ಕಾಯಿಲೆ ಉಲ್ಭಣಗೊಂಡಾಗ ರೋಗಿಯನ್ನು ಗ್ರಾಮದಿಂದ ಎಂಟು ಕಿ.ಮೀ. ದೂರದಲ್ಲಿರುವ ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಥವಾ ಸುಮಾರು 12 ಕಿ.ಮೀ ದೂರದಲ್ಲಿರುವ ಮಾರ್ಟಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡೋಲಿ ಕಟ್ಟಿ ಹೊತ್ತು ತರುತ್ತಾರೆ.
ಕಾಡು ಮೃಗಗಳ ಭಯದಲ್ಲೇ ಪಯಣ
ಹೀಗೆ ಒಬ್ಬ ರೋಗಿಯನ್ನು ಹೊತ್ತು ಆಸ್ಪತ್ರೆಗೆ ತರಬೇಕಾದರೆ ಸುಮಾರು ಹತ್ತು ಮಂದಿಯಾದರೂ ಬೇಕಾಗುತ್ತಾರೆ. ಇಲ್ಲಿ ಒಗ್ಗಟ್ಟು ಇರುವುದರಿಂದ ಗ್ರಾಮಸ್ಥರು ಒಬ್ಬರಿಗೊಬ್ಬರು ಕಷ್ಟಕ್ಕೆ ಸ್ಪಂದಿಸುತ್ತಾ ಸಹ ಜೀವಿಗಳಾಗಿ ಬದುಕುತ್ತಿದ್ದಾರೆ. ಇದೀಗ ಗರ್ಭಿಣಿಯನ್ನು ಕೂಡ ಅದೇ ರೀತಿ ಹೊತ್ತು ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತರಲಾಗಿದೆ. ರಾತ್ರೋರಾತ್ರಿ ಹೊತ್ತು ತರುವುದು ಅಷ್ಟು ಸುಲಭದ ಕೆಲಸವಲ್ಲ. ರಸ್ತೆಯೇ ಅಲ್ಲದ ರಸ್ತೆಗಳಲ್ಲಿ ದಟ್ಟಾರಣ್ಯದ ನಡುವೆ ಕಲ್ಲು ಮುಳ್ಳುಗಳನ್ನು ತುಳಿಯುತ್ತಾ ಕಗ್ಗತ್ತಲೆಯಲ್ಲಿ ಕಾಡು ಮೃಗಗಳ ಭಯದಲ್ಲೇ ತಮ್ಮ ಜೀವವನ್ನು ಒತ್ತೆಯಿಟ್ಟು ರೋಗಿ ಅಥವಾ ಗರ್ಭಿಣಿಯರ ಜೀವವನ್ನು ಕಾಪಾಡಬೇಕಾಗುತ್ತದೆ.
ಇದೀಗ ನಡೆದಿದ್ದು ಕೂಡ ಅದೇ ರೀತಿಯ ಘಟನೆಯೇ. ಇಂತಹ ಘಟನೆಗಳು ನಡೆದ ಕೆಲವು ದಿನಗಳ ಕಾಲ ಸುದ್ದಿಯಲ್ಲಿರುತ್ತದೆ. ಆ ನಂತರ ಎಲ್ಲರೂ ಮರೆತು ಬಿಡುತ್ತಾರೆ. ಗ್ರಾಮದ ಜನ ಕೂಡ ಕಷ್ಟವೋ ಸುಖವೋ ತಮ್ಮ ಪಾಡಿಗೆ ತಾವು ಎಂಬಂತೆ ಕಷ್ಟಗಳಿಗೆ ಹೊಂದಿಕೊಂಡು ಜೀವನ ನಡೆಸಿಕೊಂಡು ಹೋಗುತ್ತಾರೆ.
ಡಾಂಬರೀಕರಣ್ಕೆ ಕಾನೂನು ಅಡ್ಡಿ
ಆಧುನಿಕ ಕಾಲದಲ್ಲಿಯೂ ದೊಡ್ಡಾಣೆ ಗ್ರಾಮಕ್ಕೆ ವಾಹನ ಸೌಲಭ್ಯವಿಲ್ಲವೆ? ಡೋಲಿಯಲ್ಲಿ ಏಕೆ ಹೊತ್ತು ತರಬೇಕು ಎಂಬ ಪ್ರಶ್ನೆಗಳು ಪ್ರತಿಯೊಬ್ಬರನ್ನು ಕಾಡದಿರದು. ಆದರೆ ಬೆಟ್ಟಗುಡ್ಡದ ಹಾದಿಯಲ್ಲಿ ರಸ್ತೆಯಿದೆಯಾದರೂ ಆ ರಸ್ತೆಯಲ್ಲಿ ಜೀಪುಗಳು ಹೊರತುಪಡಿಸಿ ಬೇರೆ ಯಾವುದೇ ವಾಹನಗಳು ಸಂಚರಿಸಲಾರವು. ಜತೆಗೆ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಗೆ ಒಳಪಡುವುದರಿಂದ ಖಾಸಗಿ ವಾಹನಗಳು ಒಳಗೆ ಹೋಗುವಂತಿಲ್ಲ. ಅರಣ್ಯ ವ್ಯಾಪ್ತಿಯಲ್ಲಿರುವ ಕಾರಣ ರಸ್ತೆಗೆ ಡಾಂಬರೀಕರಣ ಮಾಡಲು ಕಾನೂನು ತೊಡಕಿದೆ. ಹಾಗಾಗಿ ಮಳೆಗೆ ಕುಸಿದ, ಬಿಸಿಲಿಗೆ ಬಿರುಕು ಬಿಟ್ಟ ಕಚ್ಚಾ ರಸ್ತೆಯೇ ಸಂಚಾರ ಮಾಡಲೇ ಬೇಕಾಗಿದೆ.
Recommended Video
ಅರಣ್ಯ ಇಲಾಖೆಯ ಜನಮನ ಸಾರಿಗೆ
ಇನ್ನು ಮಹದೇಶ್ವರಬೆಟ್ಟ ಅರಣ್ಯ ಪ್ರದೇಶದ ಗ್ರಾಮಸ್ಥರ ಅನುಕೂಲಕ್ಕಾಗಿ ಗರ್ಭಿಣಿಯರು, ಅನಾರೋಗ್ಯ ಪೀಡಿತರು, ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ತುರ್ತು ಬಳಕೆಗಾಗಿ ಅರಣ್ಯ ಇಲಾಖೆ ಜನವನ ಸಾರಿಗೆ ವ್ಯವಸ್ಥೆ ಆರಂಭಿಸಿದೆ. ಆದರೆ ಅದು ಎಲ್ಲರಿಗೂ ಎಲ್ಲ ಸಂದರ್ಭದಲ್ಲಿ ಉಪಯೋಗಕ್ಕೆ ಬರುತ್ತದೆ ಎಂದು ಹೇಳುವುದೇ ಕಷ್ಟವಾಗಿದೆ.
ದೊಡ್ಡಾಣೆ ಗ್ರಾಮದ ಗರ್ಭಿಣಿ ಶಾಂತಲಾ ವಿಚಾರದಲ್ಲಿ ಅದೇ ಆಗಿದೆ. ಆಸ್ಪತ್ರೆಗೆ ಕರೆದೊಯ್ಯಲು ಗ್ರಾಮಸ್ಥರು ಜನವನ ಸಾರಿಗೆ ವಾಹನ ಚಾಲಕರಿಗೆ ಹಾಗೂ ಅರಣ್ಯಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಎಂಬ ಪ್ರತಿಕ್ರಿಯೆ ಬಂದಿದೆ, ಪರಿಣಾಮ ಡೋಲಿಯ ಮೊರೆ ಹೋಗಿದ್ದಾರೆ. ನಾಗರಿಕ ಸಮಾಜದಲ್ಲಿ ಇನ್ನು ಮುಂದೆಯಾದರೂ ಆ ರೀತಿ ಆಗದಿರಲಿ ಎನ್ನುವುದೇ ಜನರ ಆಶಯವಾಗಿದೆ.