ಕಾಂಗ್ರೆಸ್ ನಿಂದ ಹಣ ಪಡೀರಿ, ಲಿಂಗಾಯಿತ್ರ ಮನೆಗೆ ಹೋಗ್ಬೇಡಿ: ಈಶ್ವರಪ್ಪ
ಇಂಧನ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಹಣ ಹಂಚುತ್ತಿರುವ ಆರೋಪ. ಪ್ರತಿ ಮತ್ತಕ್ಕೆ ನಾಲ್ಕು ಸಾವಿರ ನೀಡುತ್ತಿದ್ದಾರೆಂದು ಹೇಳಿದ ಬಿಜೆಪಿ ಹಿರಿಯ ನಾಯಕ.
ಮೈಸೂರು, ಮಾರ್ಚ್ 30: ಕಾಂಗ್ರೆಸ್ ಪಕ್ಷ ಪ್ರತಿ ವೋಟಿಗೆ 4 ಸಾವಿರ ಕೊಡ್ತಾ ಇದಾರಂತೆ. ಅದನ್ನು ಪಡೆದು ಮತ ಹಾಕಿರಿ ಅಂತ ಹೇಳುವ ಮೂಲಕ ಬಿಜೆಪಿ ಧುರೀಣ ಕೆ.ಎಸ್. ಈಶ್ವರಪ್ಪ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ.
ಗುಂಡ್ಲುಪೇಟೆ ಉಪಚುನಾವಣೆಯ ಹಿನ್ನೆಲೆಯಲ್ಲಿ ಕ್ಷೇತ್ರದ ಚಿಕ್ಕಾಟಿ ಗ್ರಾಮಕ್ಕೆ ಪ್ರಚಾರಕ್ಕಾಗಿ ಆಗಮಿಸಿದ ಈಶ್ವರಪ್ಪ ಇಂಥದ್ದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಅವರು ಮತದಾರರಿಗೆ ದುಡ್ಡು ಹಂಚುತ್ತಿದ್ದಾರೆಂಬ ಆರೋಪವಿದೆ. ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಹಣ ಒದಗಿಸುತ್ತಿದ್ದಾರೆ. ಒಂದು ಮತಕ್ಕೆ ನಾಲ್ಕು ಸಾವಿರ ರು. ಹಣ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ತಮ್ಮ ಮಾತುಗಳನ್ನು ಮುಂದುವರಿಸಿ, ''ಕಾಂಗ್ರೆಸ್ಸಿನವರು ದುಡ್ಡು ಹಂಚುತ್ತಿರುವುದು ಯಾರ ದುಡ್ಡು? ಅವರೇನು ಅವರ ಮನೆಯಿಂದ ತಂದು ಹಣ ಕೊಡುತ್ತಿದ್ದಾರಾ?'' ಎಂದು ಪ್ರಶ್ನಿಸಿದ್ದಾರೆ.
ಆನಂತರ, ''ನೆನ್ನೆ (ಮಾರ್ಚ್ 29) ಯುಗಾದಿ. ಹಾಗಾಗಿ, ಇಂದು (ಮಾರ್ಚ್ 30) ಕರಿ. ಹಾಗಾಗಿ, ಇಂದು ಲಿಂಗಾಯಿತರ ಮನೆಗೆ ಹೋಗಬೇಡಿ. ಅವರು ಕೋಳಿ, ಕುರಿ ಮಾಡಲ್ಲ. ಹಾಗಾಗಿ, ನಾನ್ವೆಜ್ ತಿನ್ನುವವರ ಮನೆಗೆ ಹೋಗಿ. ಚೆನ್ನಾಗಿ ಊಟ ಮಾಡಿ. ಆನಂತರ ಬಿಜೆಪಿಗೆ ಮತ ಹಾಕಲು ಹೇಳಿ'' ಎಂದು ಚಟಾಕಿ ಹಾರಿಸಿದ್ದಾರೆ.
ಇದೇ ವೇಳೆ, ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ ಪ್ರಸಾದ್ ಮಾಡಿರುವ ಆರೋಪಕ್ಕೆ ಅಭಿಪ್ರಾಯ ಕೇಳಿದ್ದಕ್ಕೆ, ''ನಾನು ಹೆಣ್ಮಕ್ಕಳ ಬಗ್ಗೆ ಮಾತನಾಡೋದಿಲ್ಲ'' ಎಂದರು.