ಚಾಮರಾಜನಗರದ ದೇಗುಲ, ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ನಿಷೇಧ!
ಚಾಮರಾಜನಗರ, ಮಾರ್ಚ್ 1: ಚಾಮರಾಜನಗರ ಜಿಲ್ಲೆಯಲ್ಲಿರುವ ದೇಗುಲ ಮತ್ತು ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದ್ದರಿಂದ ಇನ್ಮುಂದೆ ಚಾಮರಾಜನಗರದತ್ತ ತೆರಳುವ ಪ್ರವಾಸಿಗರು ಮತ್ತು ಭಕ್ತರು ಪ್ಲಾಸ್ಟಿಕ್ ಬದಿಗಿಟ್ಟು ತೆರಳುವುದು ಅನಿವಾರ್ಯವಾಗಿದೆ.
ಬಿಳಿಗಿರಿ ರಂಗನಾಥಸ್ವಾಮಿ. ಮಲೆಮಹದೇಶ್ವರ ಮತ್ತು ಹಿಮವದ್ ಗೋಪಾಲಸ್ವಾಮಿ ದೇವಾಲಯಗಳು ಸುಂದರ ಬೆಟ್ಟಗಳ ನಡುವೆ ನೆಲೆ ನಿಂತಿದ್ದು, ಅರಣ್ಯ ಪ್ರದೇಶಗಳಿಂದ ಆವೃತವಾಗಿವೆ. ಇಲ್ಲಿರುವ ದೇವಾಲಯಗಳಿಗೆ ಸಹಸ್ರಾರು ಭಕ್ತರು ಬರುತ್ತಿರುವುದರಿಂದ ಮತ್ತು ಕೆಲವರ ಎಲ್ಲೆ ಮೀರಿದ ವರ್ತನೆಗಳಿಂದ ಪರಿಸರದ ಮೇಲೆಯೂ ಪರಿಣಾಮ ಬೀರುತ್ತಿದೆ. ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಮಾಡಿಕೊಂಡು ತೆರಳಿದರೆ ಯಾವುದೇ ರೀತಿಯ ಸಮಸ್ಯೆ ಉದ್ಭವಿಸುವುದಿಲ್ಲ. ಆದರೆ ಕೆಲವರು ಪರಿಸರಕ್ಕೆ ಧಕ್ಕೆ ತರುವ ಮತ್ತು ವನ್ಯ ಪ್ರಾಣಿಗಳ ಸ್ವಚ್ಛಂಧ ಬದುಕಿಗೆ ಮಾರಕವಾಗುವಂತೆ ನಡೆದುಕೊಳ್ಳುತ್ತಿರುವುದು ಎದ್ದು ಕಾಣುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಹಲವು ಕ್ರಮಗಳಿಗೆ ಮುಂದಾಗಿದೆ.
ಮೈಸೂರು: ಕೆರೆ ನೀರು ಸಂರಕ್ಷಣೆಗೆ ಮೊಸಂಬಾಯನಹಳ್ಳಿ ಜನ ಮಾಡಿದ್ದೇನು?
ಸುಂದರ ಪರಿಸರದ ಮೇಲೆ ಪರಿಣಾಮ
ಸಾಮಾನ್ಯವಾಗಿ ಮಲೆಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಿದ್ದು, ದೇಗುಲದಲ್ಲಿ ಕೋಟ್ಯಂತರ ರೂ. ಕಾಣಿಕೆ ಸಂಗ್ರಹವಾಗುತ್ತದೆ. ಸ್ಥಳೀಯರಲ್ಲದೆ ಹೊರ ಜಿಲ್ಲೆ ಮತ್ತು ರಾಜ್ಯಗಳ ಭಕ್ತರು ಆಗಮಿಸುತ್ತಾರೆ. ಹೀಗೆ ಬರುವ ಭಕ್ತರು ಸುತ್ತಮುತ್ತಲ ಪ್ರವಾಸಿ ತಾಣಗಳಿಗೂ ಭೇಟಿ ನೀಡುತ್ತಾರೆ. ಪ್ರವಾಸಿಗರು ಬರುವುದರಿಂದ ಯಾವುದೇ ಸಮಸ್ಯೆಯಾಗುತ್ತಿಲ್ಲ. ಆದರೆ ತಮ್ಮೊಂದಿಗೆ ತರುವ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದು ಸುಂದರ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ.
ಪರಿಸರ (ಸಂರಕ್ಷಣೆ) ಕಾಯ್ದೆಯನ್ವಯ ನಿಷೇಧ
ಇಷ್ಟೇ ಅಲ್ಲದೆ ದೇವಸ್ಥಾನಗಳಲ್ಲಿ ಮತ್ತು ಸಾರ್ವಜನಿಕವಾಗಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ ಅವುಗಳನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಅವು ಕೊಳೆಯದೆ ಅರಣ್ಯಗಳಲ್ಲಿ ಹರಡಿ ಅಶುಚಿತ್ವಕ್ಕೆ ದಾರಿ ಮಾಡಿಕೊಡುತ್ತಿದೆ. ಇವುಗಳನ್ನು ಒಂದೆಡೆ ಸಂಗ್ರಹಿಸಿ ಬಳಿಕ ವಿಲೇವಾರಿ ಮಾಡುವ ಕೆಲಸಗಳು ನಡೆಯುತ್ತಿಲ್ಲ. ಜತೆಗೆ ಪ್ರಾಣಿ, ಪಕ್ಷಿಗಳು ಸಾರ್ವಜನಿಕರು ಎಸೆಯುತ್ತಿರುವ ತ್ಯಾಜ್ಯಗಳನ್ನು ಸೇವಿಸಿ ಸಾವಿಗೆ ಶರಣಾಗುತ್ತಿವೆ ಎಂಬ ಆರೋಪವೂ ಇಲ್ಲದಿಲ್ಲ.
ಪರಿಸರವನ್ನು ಕಾಪಾಡುವ ಮತ್ತು ವನ್ಯಪ್ರಾಣಿಗಳಿಗಾಗುತ್ತಿರುವ ತೊಂದರೆ ತಪ್ಪಿಸುವ, ಉದ್ದೇಶದಿಂದ ಪರಿಸರ (ಸಂರಕ್ಷಣೆ) ಕಾಯ್ದೆ 1986ರ ಸೆಕ್ಷನ್ 18 ಮತ್ತು 19ರನ್ವಯ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಮತ್ತು ಹನೂರು ತಾಲೂಕಿನ ಶ್ರೀ ಮಲೈಮಹದೇಶ್ವರ ಬೆಟ್ಟದಲ್ಲಿ ಹಲವು ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವುದರೊಂದಿಗೆ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿ ಆಯಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಆದೇಶ ಹೊರಡಿಸಿದ್ದಾರೆ.
ಕಡ್ಡಾಯ ಪಾಲನೆಗೆ ಆದೇಶ
ಜತೆಗೆ ಬಿಳಿಗಿರಿ ರಂಗನಾಥಸ್ವಾಮಿ ಮತ್ತು ಸಮೂಹ ದೇವಾಲಯಗಳು, ಹಿಮವದ್ ಗೋಪಾಲಸ್ವಾಮಿ ದೇವಾಲಯ, ಚಾಮರಾಜೇಶ್ವರ ದೇವಾಲಯ ಮತ್ತು ಇತರೆ ಮುಜರಾಯಿ ದೇವಸ್ಥಾನಗಳು, ಧಾರ್ಮಿಕ ಕೇಂದ್ರಗಳು ಹಾಗೂ ಪ್ರವಾಸಿ ಸ್ಥಳಗಳಾದ ಹೊಗೆನಕಲ್, ಭರಚುಕ್ಕಿ ಜಲಪಾತಗಳು, ಕೆ. ಗುಡಿ ಅರಣ್ಯ ಪ್ರದೇಶಗಳು ಹಾಗೂ ಜಿಲ್ಲೆಯ ಇತರೆ ಎಲ್ಲಾ ಪ್ರವಾಸ್ಯೋದ್ಯಮ ಸ್ಥಳಗಳಲ್ಲಿಯೂ ಹಲವು ನಿರ್ದೇಶನಗಳೊಂದಿಗೆ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದ್ದು, ಕಡ್ಡಾಯವಾಗಿ ಪಾಲನೆ ಮಾಡುವಂತೆ ಅವರು ಸೂಚಿಸಿದ್ದಾರೆ.
ಜಿಲ್ಲಾಡಳಿತದ ಆದೇಶದಲ್ಲಿರುವಂತೆ ದೇವಾಲಯದ ಆವರಣ ಹಾಗೂ ಹೊರಗಡೆ, ಧಾರ್ಮಿಕ ಕೇಂದ್ರ, ಪ್ರವಾಸೋದ್ಯಮ ಸ್ಥಳಗಳ ಆವರಣದಲ್ಲಿ ಮತ್ತು ಹೊರಗಡೆ ನಿಷೇಧಿತ ಪ್ಲಾಸ್ಟಿಕ್ನಿಂದ ತಯಾರಿಸಲಾದ ಕ್ಯಾರಿ ಬ್ಯಾಗ್, ತಟ್ಟೆ, ಲೋಟ, ಬಟ್ಟಲು, ಬ್ಯಾನರ್, ಬಂಟಿಂಗ್ಸ್ ಮುಂತಾದ ನಿಷೇಧಿತ ಪ್ಲಾಸ್ಟಿಕ್ ವಸ್ತಗಳನ್ನು ಯಾವುದೇ ರೀತಿಯಲ್ಲಿ ಬಳಕೆ ಮಾಡಬಾರದು. ದೇವಾಲಯ, ಧಾರ್ಮಿಕ, ಪ್ರವಾಸೋದ್ಯಮ ಸ್ಥಳಗಳ ಪ್ರಾಂಗಣದಲ್ಲಿ ಪ್ಲಾಸ್ಟಿಕ್ ಬಳಕೆಗೆ ಅವಕಾಶವಿಲ್ಲ. ಇದೆಲ್ಲವೂ ಭಕ್ತರ ಅರಿವಿಗೆ ಬರುವಂತೆ ಮಂದಿರ ದೇವಾಸ್ಥಾನ, ಪ್ರವಾಸೋದ್ಯಮ ಸ್ಥಳಗಳಲ್ಲಿ ಅಲ್ಲಲ್ಲಿ ಸೂಚನಾ ಫಲಕವನ್ನು ಅಳವಡಿಸುಂತೆ ಸಂಬಂಧಿಸಿದವರಿಗೆ ಆದೇಶ ನೀಡಲಾಗಿದೆ.
ಪ್ಲಾಸ್ಟಿಕ್ ತಟ್ಟೆ, ಲೋಟ ಬಳಕೆ ಇಲ್ಲ
ಇನ್ನು ದೇವಸ್ಥಾನದಲ್ಲಿ ಪ್ರತಿದಿನ ಪ್ರಸಾದವನ್ನು ವಿತರಿಸಲು ಹಾಗೂ ಊಟ ತಿಂಡಿಗಾಗಿ ಯಾವುದೇ ರೀತಿಯ, ಪ್ಲಾಸ್ಟಿಕ್ ತಟ್ಟೆ, ಕಪ್ ಅಥವಾ ಬಟ್ಟಲನ್ನು ಉಪಯೋಗಿಸಬಾರದು. ಪ್ರವಾಸೋದ್ಯಮ ಸ್ಥಳಗಳಲ್ಲಿಯೂ ಸಹ ಊಟ ತಿಂಡಿಗಾಗಿ ಯಾವುದೇ ರೀತಿಯ, ಪ್ಲಾಸ್ಟಿಕ್ ತಟ್ಟೆ, ಕಪ್ ಅಥವಾ ಬಟ್ಟಲನ್ನು ಬಳಕೆ ಮಾಡದಂತೆ, ಪೂಜಾ ಸಾಮಗ್ರಿಗಳನ್ನು ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳಲ್ಲಿ ತರದಂತೆ ಭಕ್ತರಿಗೆ ಸೂಚನೆ ನೀಡಬೇಕು.
ದೇವರ ಪೂಜೆ ಮತ್ತು ಅಭಿಷೇಕಕ್ಕೆ ಪ್ರಸಾದ, ದೀಪದ ಎಣ್ಣೆ, ಹಾಲು, ತುಪ್ಪ ಊದುಬತ್ತಿ, ಅರಿಶಿಣ, ಕುಂಕುಮ, ಕರ್ಪೂರ, ಹೂವು ಇನ್ನಿತರ ಅಗತ್ಯ ಪೂಜಾ ಸಾಮಗ್ರಿಗಳನ್ನು ತರಲು ಯಾವುದೇ ಪ್ಲಾಸ್ಟಿಕ್ ಕವರ್ ಬಳಸದೇ ಭಕ್ತರು ತಮ್ಮದೇ ಬಟ್ಟೆ, ಕಾಗದದ ಕೈಚೀಲಗಳಲ್ಲಿ, ಸ್ಟೀಲ್ ಅಥವಾ ಇನ್ನಿತರ ಲೋಹ, ಮಣ್ಣಿನ ಪಾತ್ರೆಗಳಲ್ಲಿ ತರುವಂತೆ ಕಡ್ಡಾಯ ಸೂಚನೆ ನೀಡುವಂತೆ ಮತ್ತು ಹಬ್ಬ ಹರಿದಿನಗಳಲ್ಲಿ ಅಥವಾ ವಿಶೇಷ ಸಂದರ್ಭಗಳಲ್ಲಿ ಜಾಹಿರಾತು ನೀಡಲು ಯಾವುದೇ ಪ್ಲಾಸ್ಟಿಕ್ನಿಂದ ತಯಾರಿಸಿದ ಬ್ಯಾನರ್ ಮತ್ತು ಬಂಟಿಂಗ್ಸ್ ಬಳಸದಂತೆ ಕ್ರಮವಹಿಸಬೇಕು. ಯಾವುದೇ ರೀತಿಯ ಪ್ಲಾಸ್ಟಿಕ್ನಿಂದ ತಯಾರಿಸಿದ ಅಲಂಕಾರಿಕ ಹೂವು, ತೋರಣ ಮುಂತಾದವುಗಳನ್ನು ದೇವಸ್ಥಾನದಲ್ಲಿ ಬಳಸದಂತೆ ಜಾಗ್ರತೆ ವಹಿಸುವಂತೆ ತಿಳಿಸಲಾಗಿದೆ.
ಪ್ರವಾಸಿ ತಾಣಗಳಿಗೂ ಆದೇಶ ಅನ್ವಯ
ಬಂಡೀಪುರ ಹುಲಿ ಅರಣ್ಯ ಸಂರಕ್ಷಿತ ಪ್ರದೇಶ, ಹೊಗೆನಕಲ್ ಜಲಪಾತದ ಪ್ರದೇಶದಲ್ಲಿಯೂ ಮತ್ತು ದೇವಾಲಯ, ಪ್ರವಾಸೋದ್ಯಮ ಸ್ಥಳಗಳಲ್ಲಿಯೂ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ ಎಂಬ ಫಲಕ ಅಳವಡಿಸಿ ಸಾರ್ವಜನಿಕರು ಹಾಗೂ ಭಕ್ತರಲ್ಲಿ ಜಾಗೃತಿ ಮೂಡಿಸಬೇಕು. ನಿಷೇಧಾಜ್ಞೆಯನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಈ ಆದೇಶ ಪ್ರವಾಸಿ ತಾಣಗಳ ಶುಚಿತ್ವ ಕಾಪಾಡುವಲ್ಲಿ ಸಹಕಾರಿಯಾಗಿದ್ದು, ಪರಿಸರ ಪ್ರೇಮಿಗಳಲ್ಲಿ ಹರ್ಷವನ್ನುಂಟು ಮಾಡಿದೆ.
Recommended Video