ಚಾಮರಾಜನಗರ ಜಿಲ್ಲಾಡಳಿತ ಭವನ ಜಲಾವೃತ, ಹನೂರಲ್ಲಿ ಸಂಪರ್ಕ ಕಡಿತ
ಚಾಮರಾಜನಗರ, ಆಗಸ್ಟ್, 04: ನಿರಂತರವಾಗಿ ಬಿಟ್ಟು ಬಿಡದೇ ಸುರಿದ ಭಾರೀ ಮಳೆಗೆ ಚಾಮರಾಜನಗರ ಜಿಲ್ಲಾಕೇಂದ್ರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ನೀರು ನಿಂತಿದ್ದು, ಜಿಲ್ಲಾಡಳಿತ ಭವನ ದ್ವೀಪದಂತೆ ಆಗಿದೆ.
ರಸ್ತೆಗಳ ಮೇಲೆ ನೀರು ನದಿಯಂತೆ ಹರಿಯುತ್ತಿರುವುದು, ಬೈಕ್ಗಳು ಮುಳುಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಜತ ಮಹೋತ್ಸವ ಆಚರಿಸಿಕೊಳ್ಳುವ ಜಿಲ್ಲೆಯಲ್ಲಿನ ಒಳಚರಂಡಿ ಅವ್ಯವಸ್ಥೆಗೆ ನೆಟ್ಟಿಗರು ಕಿಡಿಕಾರಿದ್ದಾರೆ. ಇನ್ನು ಜಿಲ್ಲಾಡಳಿತ ಭವನ ಅಕ್ಷರಶಃ ದ್ವೀಪದಂತಾಗಿದ್ದು, ಜಿಲ್ಲಾಡಳಿತ ಭವನದ ಆವರಣದಲ್ಲಿ 4 ಅಡಿ ನೀರು ನಿಂತು ಅವಾಂತರವೇ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ನೀರಿನ ಮಟ್ಟ ಹೆಚ್ಚುತ್ತಲೇ ಇದೆ. ಆದ ಕಾರಣ ವಾಹನ ಸವಾರರು ರಸ್ತೆಯಲ್ಲಿ ಸಿಲುಕಿಕೊಂಡು ಪರಡಾಡಿದ್ದಾರೆ.
ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿಯ ರಸ್ತೆ ಮೇಲೆ ನೀರು ಉಕ್ಕಿ ಹರಿಯುತ್ತಿರುವುದರಿಂದ ಹಬ್ಬದ ಖರೀದಿ ಭರಾಟೆಯಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನೂಂದೆಡೆ ವ್ಯಾಪಾರವಿಲ್ಲದೇ ಅಂಗಡಿ ಮಾಲೀಕರ ಜೀವನ ಹೇಳತೀದಾಗಿದೆ. ಬೀದಿಬದಿ ವ್ಯಾಪರಸ್ಥರು, ಹೂವಿನ ವ್ಯಾಪರಿಗಳು ಮಳೆಯಿಂದಾಗಿ ನಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹನೂರಲ್ಲಿ ಅವಾಂತರ:
ಹನೂರು ತಾಲೂಕಿನ ಕೊರಮನ ಕತ್ರಿ ಸೇತುವೆ ಮೇಲೆ ನೀರು ಹರಿದಿದ್ದರಿಂದ ಕಳೆದ 3 ದಿನಗಳಿಂದಲೂ ತಮಿಳುನಾಡಿನ ಸತ್ಯಮಂಗಲಂಗೆ ತೆರಳುವ ರಸ್ತೆ ಸಂಪರ್ಕ ನಿತ್ಯ 5-6 ತಾಸು ಕಡಿತಗೊಳ್ಳುತ್ತಿದೆ. ಬಸ್ಸುಗಳ ಸಂಚಾರವು ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಮಳೆ ಆರ್ಭಟದಿಂದ ಇಲ್ಲಿನ ಜನರ ಕಂಗಾಲಾಗಿ ಹೋಗಿದ್ದಾರೆ. ಇದುವರೆಗೂ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗೆ ಯಾವುದೇ ರೀತಿಯ ಪರಿಹಾರದ ವ್ಯವಸ್ಥೆ ಇಲ್ಲದಂತಾಗಿದೆ.
ಇದು ವ್ಯಾಪಾರಿಗಳಿಗೆ ಸೂಕ್ತ ಸಮಯವಾಗಿದ್ದು, ಲಾಭ ಗಳಿಸಲು ತುದಿಗಾಲಲ್ಲಿ ನಿಂತಿರುತ್ತಾರೆ. ಇಂತಹ ಸಮಯದಲ್ಲೇ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಇದರಿಂದ ರಸ್ತೆಗಳ ಪಕ್ಕದಲ್ಲಿ ಹಬ್ಬದ ನಿಮಿತ್ತ ಹೂವು, ಹಣ್ಣುಗಳನ್ನು ಮಾರುವವರ ಬದುಕು ಅತಂತ್ರವಾಗಿದೆ. ಅವರಿಗೆ ವ್ಯಾಪಾರ ಮಾಡಲು ಬಿಡುವು ಕೊಡದೇ ಮಳೆರಾಯ ಕಾಡುತ್ತಲೇ ಇದ್ದಾನೆ. ಇನ್ನೊಂದೆಡೆ ಹಬ್ಬದ ಖರೀದಿ ಭರಾಟಯಲ್ಲಿದ್ದ ಜನರು ಕೂಡ ಪರದಾಡುವಂತಾಗಿದೆ.