ಚಾಮರಾಜನಗರ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ
ಚಾಮರಾಜನಗರ, ಫೆಬ್ರವರಿ 22: ಜಿಲ್ಲೆಯ ಸ್ಥಳೀಯ ನಾಯಕರುಗಳ ಒಳಜಗಳದಿಂದ ಬೇಸತ್ತ ಬಿಜೆಪಿ ಮಾಜಿ ಶಾಸಕ ವಿ.ಸೋಮಣ್ಣ ಅವರು ಪಕ್ಷದ ರಾಜ್ಯ ಮುಖಂಡರಿಗೆ ಪತ್ರ ಬರೆದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಚಾಮರಾಜನಗರ ಬಿಜೆಪಿ ಜಿಲ್ಲಾ ಉಸ್ತುವಾರಿಯಾಗಿರುವ ಮಾಜಿ ಸಚಿವ ವಿ.ಸೋಮಣ್ಣ ಅವರು ಯಡಿಯೂರಪ್ಪ ಅವರಿಗೆ ಪತ್ರ ಬರೆದು ತಮ್ಮನ್ನು ಉಸ್ತುವಾರಿ ಸ್ಥಾನದಿಂದ ವಜಾ ಮಾಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಕಾರಣ ಜಿಲ್ಲೆಯಲ್ಲಿನ ಬಿಜೆಪಿ ಒಳಜಗಳ.
ಗುಂಡ್ಲುಪೇಟೆಯಲ್ಲಿ ಸ್ಫೋಟಗೊಂಡ ಸುದ್ದಿ ದಿಟವಾದರೆ ಬಿಜೆಪಿಗೆ ಕಷ್ಟಕಷ್ಟ
ಪಕ್ಷದ ಸೂಚನೆ ಮೇರೆಗೆ ನಾನು ಹಾಸನ ಹಾಗೂ ಚಾಮರಾಜನಗರ ಜಿಲ್ಲೆಯ ಉಸ್ತುವಾರಿಯನ್ನು ಪ್ರಮಾಣಿಕವಾಗಿ ನಿರ್ವಹಿಸುತ್ತಿದ್ದೆ. ಆದರೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಪ್ಪ ತಮ್ಮ ತೇಜೋವಧೆ ಮಾಡುತ್ತಿದ್ದಾರೆ. ಸುಳ್ಳನ್ನೇ ಬಂಡವಾಳ ಮಾಡಿಕೊಂಡು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಹೀಗಾಗಿ ತಮ್ಮನ್ನು ಜಿಲ್ಲಾ ಉಸ್ತುವಾರಿಯಿಂದ ಬಿಡುಗಡೆ ಮಾಡಿ ಎಂದು ಯಡಿಯೂರಪ್ಪ ಅವರಿಗೆ ಪತ್ರದಲ್ಲಿ ಕೋರಿದ್ದಾರೆ.
'ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿರುವ ಕಾಂಗ್ರೆಸ್ನ ರಾಮಚಂದ್ರಪ್ಪ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ವಿಚಾರದಲ್ಲಿ ತನ್ನನ್ನು ಖಳನಾಯಕನಂತೆ ಬಿಂಬಿಸುತ್ತಿದ್ದಾರೆ. ಅಲ್ಲದೇ, ನನ್ನನ್ನು ಉಸ್ತುವಾರಿಯಿಂದ ಕೆಳಗಿಳಿಸುವಂತೆ ಮಲ್ಲಿಕಾರ್ಜುನಪ್ಪ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ತನಗೆ ತೀವ್ರ ನೋವಾಗಿದ್ದು, ಚಾಮರಾಜನಗರ ಉಸ್ತುವಾರಿಯಿಂದ ತನ್ನನ್ನು ಬಿಡುಗಡೆ ಮಾಡಬೇಕೆಂದು ಕೋರುತ್ತೇನೆ ಎಂದು ಪತ್ರದಲ್ಲಿ ಸೋಮಣ್ಣ ತಿಳಿಸಿದ್ದಾರೆ.