ದೀಪಾವಳಿಗೆ ಕೊಂಗಳ್ಳಿ ಮಲ್ಲಪ್ಪನ ಬೆಟ್ಟಕ್ಕೆ ಭಕ್ತರಿಗೆ ನಿರ್ಬಂಧ
ಚಾಮರಾಜನಗರ, ನವೆಂಬರ್ 12: ದೀಪಾವಳಿ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ಗುಂಡ್ಲುಪೇಟೆ ತಾಲೂಕಿನ ಗಡಿಭಾಗದ ತಾಳವಾಡಿ ಸಮೀಪದ ಕೊಂಗಳ್ಳಿ ಮಲ್ಲಪ್ಪನ ಬೆಟ್ಟದ ಮಲ್ಲಿಕಾರ್ಜುನ ದೇವಾಲಯಕ್ಕೆ ತೆರಳುವ ಭಕ್ತರಿಗೆ ನಿರ್ಬಂಧ ಹೇರಲಾಗಿದೆ.
ಪ್ರತಿ ವರ್ಷವೂ ದೀಪಾವಳಿಯಂದು ಭಕ್ತರು ಬೆಟ್ಟಕ್ಕೆ ತೆರಳಿ ಮಲ್ಲಿಕಾರ್ಜುನ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಆದರೆ ಈ ಬಾರಿ ಕೊರೊನಾ ಹರಡುವ ಭೀತಿ ಇರುವ ಹಿನ್ನೆಲೆಯಲ್ಲಿ ನವೆಂಬರ್ 15 ರಿಂದ ಜನವರಿ 12 ರವರೆಗೆ ಸುಮಾರು 58 ದಿನಗಳ ಕಾಲ ಭಕ್ತರಿಗೆ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಮುಂದೆ ಓದಿ...
ದೀಪಾವಳಿಯಂದು ವಿಶೇಷ ಪೂಜೆ
ಕೊಂಗಳ್ಳಿಬೆಟ್ಟಕ್ಕೆ ಕಾರ್ತಿಕ ಮಾಸ ಹಾಗೂ ಧನುರ್ ಮಾಸದಲ್ಲಿ ಕನ್ನಡಿಗರು ಸೇರಿದಂತೆ ಲಕ್ಷಾಂತರ ಭಕ್ತರು ಭೇಟಿ ನೀಡಿ ಇಲ್ಲಿರುವ ಮಲ್ಲಿಕಾರ್ಜುನ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಇಲ್ಲಿಯೇ ವಾಸ್ತವ್ಯ ಹೂಡಿ ಪರ ಮಾಡುತ್ತಾರೆ. ಜತೆಗೆ ಹುಲಿವಾಹನ ಸೇವೆಯನ್ನು ನಡೆಸುತ್ತಾರೆ. ಆದರೆ ಈ ಬಾರಿ ಕೊರೊನಾ ಸೋಂಕು ಹೆಚ್ಚಿರುವ ಕಾರಣ ಸಾಮಾಜಿಕ ಅಂತರ ಕಾಪಾಡುವ ಸಲುವಾಗಿ ಕೋವಿಡ್-19 ನಿಯಮಗಳನ್ನು ಪಾಲಿಸುವುದು ಕಷ್ಟ ಸಾಧ್ಯವಾಗುವುದರಿಂದ ಭಕ್ತರ ಪ್ರವೇಶ ನಿಷೇಧಿಸಿ ತಮಿಳುನಾಡು ಸರ್ಕಾರ ಆದೇಶ ನೀಡಿದೆ. ಹೀಗಾಗಿ ಮಲ್ಲಿಕಾರ್ಜುನನ ಭಕ್ತರು ನಿರಾಸೆಗೊಂಡಿದ್ದಾರೆ.
ಗೋಲ್ಡನ್ ಟೆಂಪಲ್ಗೆ ಪ್ರವಾಸಿಗರ ಭೇಟಿ ನಿಷೇಧ
ರಾತ್ರಿ ವಾಸ್ತವ್ಯಕ್ಕೆ ಅವಕಾಶವಿಲ್ಲ
ಗುಂಡ್ಲುಪೇಟೆಯಿಂದ ಸುಮಾರು 32 ಕಿ.ಮೀ. ದೂರದ ಕೊಂಗಳ್ಳಿ ಬೆಟ್ಟವು ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಂತಿದ್ದರೂ ತಮಿಳುನಾಡಿಗೆ ಸೇರಿದ್ದು, ತಾಳವಾಡಿ ಪಿರ್ಕಾಕ್ಕೆ ಒಳಪಟ್ಟಿದೆ. ಈ ಬೆಟ್ಟಕ್ಕೆ ದೀಪಾವಳಿ ಹಬ್ಬ ಹಾಗೂ ಕಾರ್ತಿಕ ಮಾಸಗಳಲ್ಲಿ ಅತಿ ಹೆಚ್ಚಿನ ಭಕ್ತರು ಆಗಮಿಸಿ ವಿಶೇಷ ಪೂಜೆಗಳನ್ನು ಮಾಡಿ ಅಲ್ಲಿಯೇ ಒಂದು ರಾತ್ರಿ ಕಳೆದು ತಮ್ಮ ಹರಕೆಯನ್ನು ತೀರಿಸಿಕೊಂಡು ಹೋಗುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಆದರೆ ಕೊಂಗಳ್ಳಿ ಬೆಟ್ಟ ಪ್ರದೇಶವು ತಮಿಳುನಾಡು ಅರಣ್ಯ ಸಂರಕ್ಷಣಾ ವಲಯಕ್ಕೆ ಸೇರಿದ್ದು, ಕಳೆದೊಂದು ವರ್ಷದಿಂದ ಇಲ್ಲಿ ರಾತ್ರಿ ತಂಗುವುದಾಗಲೀ, ಸಂಜೆ 6 ಗಂಟೆ ನಂತರ ಪ್ರವೇಶ ಮಾಡುವುದನ್ನು ನಿಷೇಧಿಸಲಾಗಿದೆ. ಹುಲಿಸಂರಕ್ಷಣಾ ಪ್ರದೇಶವಾಗಿರುವ ಇಲ್ಲಿ ಹುಲಿ, ಕರಡಿ, ಕಾಡಾನೆ ಸೇರಿದಂತೆ ಹಲವು ಪ್ರಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಹೀಗಾಗಿ ನಿಗದಿತ ಅವಧಿಯಲ್ಲಿ ಮಾತ್ರ ದೇಗುಲಕ್ಕೆ ತೆರಳಲು ಅವಕಾಶ ನೀಡಲಾಗಿತ್ತು. ಆದರೆ ಈ ಬಾರಿ ಅದಕ್ಕೂ ಅವಕಾಶ ಇಲ್ಲದಂತಾಗಿದೆ.
ಜಾನುವಾರುಗಳ ರಕ್ಷಣೆಗೆ ಹರಕೆ ಸಲ್ಲಿಕೆ
ಮೊದಲೆಲ್ಲ ದೀಪಾವಳಿ ಸಂದರ್ಭ ಚಾಮರಾಜನಗರ ಜಿಲ್ಲೆಯ ಜನರಲ್ಲದೆ, ಹೊರ ಊರುಗಳಿಂದಲೂ ಭಕ್ತರು ಕೊಂಗಳ್ಳಿ ಮಲ್ಲಿಕಾರ್ಜುನನಿಗೆ ವಿಶೇಷ ಪೂಜೆ ಸಲ್ಲಿಸಲು ದ್ವಿಚಕ್ರ ವಾಹನಗಳು, ಆಟೋ, ಕಾರು, ಟೆಂಪೋಗಳಲ್ಲಿ ಗುಂಪುಗುಂಪಾಗಿ ತೆರಳಿ ಹರಕೆ ಸಲ್ಲಿಸಿ, ಪೂಜೆ ನೆರವೇರಿಸಿ ಸಾಮೂಹಿಕ ಭೋಜನ ಮಾಡಿ ಹಿಂತಿರುಗುತ್ತಿದ್ದರು. ನಿಸರ್ಗ ರಮಣೀಯ ತಾಣದಲ್ಲಿರುವ ಕೊಂಗಾಕಾರದ ಬೆಟ್ಟಗಳ ನಡುವೆ ಇರುವ ಕೊಂಗಳ್ಳಿ ಮಲ್ಲಿಕಾರ್ಜುನನ ಸನ್ನಿಧಿಗೆ ಹೋಗುವವರು ಹೆಚ್ಚಿನವರು ಕರ್ನಾಟಕದವರೇ ಆಗಿದ್ದು, ವರ್ಷದ ಕಾರ್ತಿಕ ಮಾಸದಲ್ಲಿ ತಪ್ಪದೆ ಭೇಟಿ ನೀಡಿ ತಮ್ಮ ಕುಟುಂಬದ ಹಾಗೂ ಜಾನುವಾರುಗಳ ರಕ್ಷಣೆಗೆ ಮೊರೆಯಿಟ್ಟು ಹರಕೆ ಸಲ್ಲಿಸಿ ಬರುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಹಾಸನದಲ್ಲಿ ಹಾಸನಾಂಬೆ ದರ್ಶನಕ್ಕೆ ಭಕ್ತರಿಗೆ ಕೊರೊನಾ ಅಡ್ಡಿ!
Recommended Video
ಬೆಟ್ಟಕ್ಕೆ ಮಹಿಳೆಯರಿಗೆ ಪ್ರವೇಶ ನಿಷಿದ್ಧ
ಈ ಸನ್ನಿಧಿಗೆ ಮಹಿಳೆಯರಿಗೆ ಪ್ರವೇಶ ನಿಷಿದ್ಧವಾಗಿದ್ದು ಮಹಿಳೆಯರು ಇಲ್ಲಿಗೆ ಭೇಟಿ ನೀಡುವುದಿಲ್ಲ. ಗಂಡಸರೇ ದೇವಾಲಯಕ್ಕೆ ತೆರಳಿ ಪೂಜಾ ಕಾರ್ಯಗಳನ್ನು ನೆರವೇರಿಸಿಕೊಂಡು ಬರುವುದು ರೂಢಿಯಲ್ಲಿದೆ. ಆದರೆ ಈ ಬಾರಿ ಕೊರೊನಾದಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿರುವ ಕಾರಣ ತಮಿಳುನಾಡು ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಭಕ್ತರಿಗೆ ಪ್ರವೇಶವನ್ನು ನಿರ್ಬಂಧಿಸಿದ್ದು, ಇದು ನಿರಾಸೆ ತಂದಿದ್ದರೂ ಆರೋಗ್ಯದ ದೃಷ್ಟಿಯಿಂದ ಉತ್ತಮ ಕ್ರಮವಾಗಿದೆ.