ಚಾಮರಾಜನಗರಿಂದ ಪ್ರವಾಸ ಆರಂಭಿಸಿದ ದೇವೇಗೌಡರು!
ಮೊದಲಿಗೆ ಚಾಮರಾಜೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ, ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ಕೈಗೊಂಡ ದೇವೇಗೌಡ.
ಚಾಮರಾಜನಗರ, ಮೇ 22: ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳ ಕೈಗೆ ಅಧಿಕಾರ ನೀಡದೆ ಪ್ರಾದೇಶಿಕ ಪಕ್ಷಗಳು ಹೇಗೆ ಆಡಳಿತ ನಡೆಸುತ್ತಿವೆಯೋ ಅದೇ ರೀತಿ ರಾಜ್ಯದಲ್ಲೂ ಪ್ರಾದೇಶಿಕ ಪಕ್ಷವಾದ ಜೆಡಿಎಸ್ನ್ನು ಅಧಿಕಾರಕ್ಕೆ ತರಲು ಪಣ ತೊಟ್ಟಿರುವ ಹೆಚ್.ಡಿ.ದೇವೇಗೌಡರು ರಾಜ್ಯದಲ್ಲಿ ಪ್ರವಾಸ ಆರಂಭಿಸಿದ್ದಾರೆ.
ಮೊದಲಿಗೆ ಚಾಮರಾಜನಗರದಿಂದಲೇ ಪ್ರವಾಸ ಆರಂಭಿಸಿರುವ ದೇವೇಗೌಡರು ಮೊದಲಿಗೆ ಚಾಮರಾಜೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಚಾಲನೆ ನೀಡಿದ ಅವರು ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ರಾಜ್ಯಾದ್ಯಂತ ಪ್ರವಾಸ ನಡೆಸಿ ಜೆಡಿಎಸ್ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ ಸಂಘಟಿಸುವ ಮೂಲಕ ರಾಜ್ಯದಲ್ಲಿ ಜೆಡಿಎಸ್ನ್ನು ಅಧಿಕಾರಕ್ಕೆ ತರುವ ಇಂಗಿತ ಅವರದ್ದಾಗಿದೆ. ತಮ್ಮ ಇಳಿ ವಯಸ್ಸಿನಲ್ಲೂ ರಾಜ್ಯಾದ್ಯಂತತ ಪ್ರವಾಸ ಕೈಗೊಂಡಿರುವುದು ಕಾರ್ಯಕರ್ತರಲ್ಲಿ ಹುರುಪು ತಂದಿದೆ.
ಈ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸಿದ ರಾಷ್ಟ್ರೀಯ ಎರಡು ಪಕ್ಷಗಳೆರಡು ರಾಜ್ಯದ ಅಭಿವೃದ್ಧಿಗೆ ಯಾವುದೇ ರೀತಿಯಲ್ಲಿ ಶ್ರಮವಹಿಸದಿರುವುದು ನೋವು ತಂದಿದೆ. ರಾಜ್ಯ ಅಭಿವೃದ್ದಿಗೆ ಪ್ರಾದೇಶಿಕ ಪಕ್ಷದಿಂದಲೇ ಸಾಧ್ಯ. ಇದಕ್ಕೆ ತಮಿಳುನಾಡು ಸಾಕ್ಷಿಯಾಗಿದ್ದು, ಅಲ್ಲಿ ಎಡಿಎಂಕೆ ಪಕ್ಷ ರಚನೆಯಾಗಿ 50 ವರ್ಷವಾಗಿದೆ. ಅಂದಿನಿಂದ ಇಲ್ಲಿಯ ತನಕ ಅಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಅದರಂತೆ ಕರ್ನಾಟಕದಲ್ಲೂ ಪ್ರಾದೇಶಿಕ ಪಕ್ಷದ ಪ್ರಾಬಲ್ಯ ಹೆಚ್ಚಾಗಬೇಕು ಎಂದು ಹೇಳಿದರು.
130 ವರ್ಷಗಳಿಂದ ಕಾವೇರಿ ವಿವಾದ ಇತ್ಯರ್ಥವಾಗಿಲ್ಲ. ಕಾವೇರಿ ವಿವಾದದಿಂದ ಎರಡು ರಾಜ್ಯಗಳ ನಡುವೆ ಬಾಂಧವ್ಯ ಉತ್ತಮವಾಗಿಲ್ಲ ಸಮಸ್ಯೆ ಬಗೆಹರಿಯಲು ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕು ಎಂದರು. ಈ ಮಧ್ಯೆ ಕಾಂಗ್ರೆಸ್ನ ಮಾಜಿ ಸಂಸದ ಎಚ್. ವಿಶ್ವನಾಥ್ ಜೆಡಿಎಸ್ ಸೇರ್ಪಡೆಗೊಳ್ಳುವ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು ವಿಶ್ವನಾಥ್ ಅಲ್ಲ ಬೇರೆ ಯಾರೇ ಪಕ್ಷಕ್ಕೆ ಬಂದರೂ ಅವರನ್ನು ಸ್ವಾಗತಿಸುವುದಾಗಿ ನುಡಿದರು.