ಬಂಡೀಪುರ ಅರಣ್ಯದಲ್ಲಿ ಜಿಂಕೆಗಳ ಬೇಟೆ: ಆರು ಜನರ ಬಂಧನ
ಮೈಸೂರು, ಜನವರಿ 8: ಕಾಡು ಪ್ರಾಣಿಗಳ ಬೇಟೆಯಾಡುವುದನ್ನು ಸರ್ಕಾರವು ನಿಷೇಧಿಸಿ ಹಲವು ದಶಕಗಳೇ ಆಗಿವೆ. ಅಕ್ರಮ ಬೇಟೆಗಾರರನ್ನು ನಿರ್ಬಂಧಿಸಲು ಸರ್ಕಾರ ವನ್ಯಜೀವಿ ಕಾಯ್ದೆಯನ್ವಯ ಕಠಿಣ, ಜಾಮೀನು ರಹಿತ ಕಾಯ್ದೆಯನ್ನೂ ಜಾರಿಗೆ ತಂದಿದೆ.
ಜತೆಗೆ ಅಪರೂಪದ ವನ್ಯ ಜೀವಿಗಳ ಸಂರಕ್ಷಣೆಗೆಂದೇ ಅಭಯಾರಣ್ಯಗಳನ್ನೂ ರಚಿಸಿದೆ. ಆದರೆ ಸ್ವಾರ್ಥಿ ಮಾನವ ತನ್ನ ನಾಲಿಗೆ ಚಪಲಕ್ಕಾಗಿ ಬೇಟೆ ಆಡುವುದನ್ನು ಮಾತ್ರ ನಿಲ್ಲಿಸಿಲ್ಲ.
ಮೊದಲೆಲ್ಲ ಒಂದು ಪ್ರಾಣಿಯನ್ನು ಬೇಟೆಯಾಡಿ ಸಿಕ್ಕಿ ಬೀಳುತ್ತಿದ್ದ ಖದೀಮರು, ಇದೀಗ ಬೇಟೆಗಾರರ ತಂಡವನ್ನೇ ಕಟ್ಟಿಕೊಂಡು ಅದೂ ಬಂಡೀಪುರ ಅಭಯಾರಣ್ಯದಲ್ಲಿ ಬೇಟೆಯಾಡಿ ಅರಣ್ಯ ಇಲಾಖೆಗೆ ಸಿಕ್ಕಿ ಬಿದ್ದಿದ್ದಾರೆ.
ಬಂಡಿಪುರ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬೇಟೆಯಾಡಿ ಮೂರು ಜಿಂಕೆ ಹಾಗೂ ಮೊಲವೊಂದನ್ನು ಹತ್ಯೆಗೈದ ಪ್ರಕರಣವನ್ನು ಅರಣ್ಯ ಇಲಾಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಬಂಡಿಪುರದ ಓಂಕಾರ ವನ್ಯಜೀವಿ ವಲಯದ ನಾಗಣಾಪುರ ಬ್ಲಾಕ್-2ರ ಕಲ್ಲರಕಿಂಡಿ ಎಂಬಲ್ಲಿ ಈ ದುಷಕೃತ್ಯ ನಡೆಸಲಾಗಿದೆ.
ಚಾಮರಾಜನಗರದಲ್ಲಿ ಬಂಡಾವಳ ಹೂಡಲಿದ್ದಾರೆ ಕೇರಳದ ಉದ್ಯಮಿಗಳು
ಈ ಬೇಟೆಗಾರರು ಕೊಡಗಿನ ಸೋಮವಾರಪೇಟೆಯಿಂದ ವಾಹನ ಮತ್ತು ಕೋವಿಗಳೊಂದಿಗೆ ತೆರಳಿ ಮಾಲು ಸಹಿತ ಸಿಕ್ಕು ಬಿದ್ದಿದ್ದಾರೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ತಾಲೂಕಿನ ವಿವಿಧ ಗ್ರಾಮಕ್ಕೆ ಸೇರಿದ ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರಿಂದ ಮಾಂಸ ಸಹಿತವಾಗಿ ಎರಡು ಒಂಟಿ ನಳಿಗೆಯ ಬಂದೂಕು, ಒಂದು ಮಾರುತಿ ಸುಜುಕಿ ಓಮ್ನಿ ವಾಹನವನ್ನು ಅರಣ್ಯಾಧಿ ಕಾರಿಗಳು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಸೋಮವಾರಪೇಟೆಯ ಚೌಡ್ಲು ಗ್ರಾಮದ ವಿದ್ಯಾಸಾಗರ್(29), ಗೌಡಳ್ಳಿಯ ರವೀಂದ್ರ ಅಲಿಯಾಸ್ ಪೂವಯ್ಯ (41) ಬೆಟ್ಟದಳ್ಳಿಯ ಯಶೋಧರ (34) ತಲ್ತರೆಶೆಟ್ಟಳ್ಳಿಯ ವರಾದ ಪ್ರಸನ್ನ ಜಾನ್ (38) ಸುಜಿತ್ ಅಲಿಯಾಸ್ ತಿಮ್ಮಯ್ಯ (28) ಹಾಗೂ ಶಾಂತಳ್ಳಿಯ ಕುಶಾಲಪ್ಪ (47) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ನಂಜನಗೂಡಿನ ಮಹೇಶ್ (35 ಎಂಬಾತ ತಲೆಮರೆಸಿಕೊಂಡಿದ್ದಾನೆ.
ಆರೋಪಿಗಳು ಅಲ್ಲಿಯೇ ಮನೆಯೊಂದರಲ್ಲಿ ಉಳಿದುಕೊಂಡು ಮೂರು ಜಿಂಕೆಗಳನ್ನು ಗುಂಡಿಕ್ಕಿ ಹತ್ಯೆಗೈದಿದ್ದರು, ಅಲ್ಲದೆ ಉರುಳು ಹಾಕಿ ಮೊಲವೊಂದನ್ನು ಕೂಡ ಹತ್ಯೆಗೈದಿದ್ದಾರೆ. ಒಂದು ಜಿಂಕೆಯ ಚರ್ಮವನ್ನು ಸುಲಿದು ಮಾಂಸವಾಗಿ ಬೇರ್ಪಡಿಸಿ ಅಡುಗೆಗೂ ಈ ತಂಡ ಸಿದ್ಧತೆ ನಡೆಸಿದ್ದು, ಈ ಸಂದರ್ಭ ಹಠಾತ್ ಅರಣ್ಯ ಇಲಾಖಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಇವರುಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ಎರಡು ಬಂದೂಕು ಹಾಗೂ ಓಮಿನಿ ಕಾರು (ಕೆ.ಎ 02 ಎಂ.ಎ. 0555) ಅನ್ನು ಮುಟ್ಟಗೋಲು ಹಾಕಿಕೊಳ್ಳ ಲಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೇಟೆಗಾರರನ್ನು ಬಂಧಿಸಿರುವುದು ಇತ್ತೀಚಿನ ವರ್ಷಗಳಲ್ಲಿ ಬಂಡೀಪುರ ಅರಣ್ಯದಲ್ಲಿ ಇದೇ ಮೊದಲಾಗಿದೆ. ಈ ಕಾರ್ಯಾಚರಣೆಯಲ್ಲಿ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕರಾದ ಎಸ್.ಎಸ್ ನಟೇಶ್ ಅವರ ನೇತೃತ್ವದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಕೆ.ಪರಮೇಶ್ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.