ಕೋವಿಡ್-19: ಗಂಟಲು ದ್ರವ ಸಂಗ್ರಹಣೆಯಲ್ಲಿ ನಿರ್ಲಕ್ಷ್ಯ ಶೋಕಾಸ್ ನೋಟಿಸ್
ಬೆಂಗಳೂರು, ಜು. 04: ಹಲವು ಕಡೆಗಳಲ್ಲಿ ಸರ್ಕಾರಿ ವೈದ್ಯರು ಅಕ್ಷರಶಃ ಜನರಿಗೆ ಕೊರೊನಾ ಯೋಧರಾಗಿದ್ದಾರೆ. ಮತ್ತೆ ಕೆಲವು ಕಡೆ ವೈದ್ಯರು ತಮ್ಮ ವೃತ್ತಿಗೆ ಅಗೌರವ ತೋರುತ್ತಿದ್ದಾರೆ. ಜಗತ್ತಿನಾದ್ಯಂತ ವೈದ್ಯರು ತಮ್ಮ ಜೀವದ ಮೇಲಿನ ಹಂಗು ತೊರೆದು ಕೋವಿಡ್-19 ವಿರುದ್ಧ ಹೋರಾಡುತ್ತಿದ್ದಾರೆ. ಕೋವಿಡ್ ಮುಕ್ತ ಹಸಿರು ಜಿಲ್ಲೆಯಾಗಿದ್ದ ಚಾಮರಾಜನಗರದಲ್ಲಿಯೂ ಕೊರೊನಾ ವೈರಸ್ ಕಾಣಿಸಿಕೊಂಡಿದೆ.
Recommended Video
ಸತತ ಎರಡೂವರೆ ತಿಂಗಳುಗಳ ಕಾಲ ಕೋವಿಡ್ 19 ಸೋಂಕಿತರು ಜಿಲ್ಲೆಯಲ್ಲಿ ಪತ್ತೆಯಾಗಿರಲಿಲ್ಲ. ಆದರೆ ಇದೀಗ ನೆರೆಯ ತಮಿಳುನಾಡು ಹಾಗೂ ಇತರ ಕಡೆಗಳಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಂಡು ಸೋಂಕಿತರವ ಸಂಖ್ಯೆ 77ಕ್ಕೆ ಏರಿದೆ. ಆದರೆ ಕೋವಿಡ್ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಕರ್ತವ್ಯ ಲೋಪ ಮಾಡಿರುವ ಮೂವರು ವೈದ್ಯಾಧಿಕಾರಿಗಳಿಗೆ ಕಾರಣ ಕೇಳಿ ಜಿಲ್ಲಾಧಿಕಾರಿ ನೋಟಿಸ್ ಜಾರಿಮಾಡಿದ್ದಾರೆ.
ಕೊರೊನಾ ವೈರಸ್: ಭಾರತದಲ್ಲಿ 22 ಸಾವಿರ ಹೊಸ ಕೇಸ್, 442 ಮಂದಿ ಸಾವು
ಕರ್ತವ್ಯ ಲೋಪ
ಜಿಲ್ಲೆಯಲ್ಲಿ ಕೋವಿಡ್-19 ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿನಿತ್ಯ ಹೆಚ್ಚು ಜನರ ಗಂಟಲು ದ್ರವ ಮಾದರಿ ಸಂಗ್ರಹಣೆಗೆ ಸೂಚಿಸಲಾಗಿದೆ. ನಿಗದಿಪಡಿಸಲಾದ ಗುರಿಯನ್ನು ಸಾಧಿಸದೇ ಕರ್ತವ್ಯ ಲೋಪ ಎಸಗಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರದ ಮೂವರು ವೈದ್ಯಾಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಮಾಹಿತಿ ಕೊಟ್ಟಿದ್ದಾರೆ.
ಮೂವರಿಗೆ ನೊಟೀಸ್
ಗುಂಡ್ಲುಪೇಟೆ ತಾಲೂಕಿನ ಬೇಗೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಿವಸ್ವಾಮಿ, ಕಬ್ಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವೆಂಕಟಸ್ವಾಮಿ ಹಾಗೂ ಸಂತೇಮರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ದೇವರಾಜು ಕರ್ತವ್ಯ ಲೋಪ ಎಸಗಿದವರು ಎಂದು ಡಿಸಿ ತಿಳಿಸಿದ್ದಾರೆ.
ಈ ಕುರಿತು ಕಾರಣ ಕೇಳಿ ನೋಟಿಸ್ ಜಾರಿ ಮಾಡಿರುವ ಜಿಲ್ಲಾಧಿಕಾರಿ ಡಾ. ಎಂ.ಆರ್ ರವಿ ಅವರು, ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೀಗಾಗಿ ಸಾರ್ವಜನಿಕರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲು ಹಲವು ಬಾರಿ ನಿರ್ದೇಶನ ಹಾಗೂ ತರಬೇತಿ ನೀಡಲಾಗಿದೆ.
ಕೊರೊನಾ ವೈರಸ್ ಬಗ್ಗೆ ಮೊದಲು ಎಚ್ಚರಿಕೆ ನೀಡಿದ್ದು ಚೀನಾ ಅಲ್ಲ ನಾವು:
ವಿಪತ್ತು ನಿರ್ವಹಣಾ ಕಾಯಿದೆ
ಪ್ರತಿದಿನ ತಾಲೂಕು ಹಂತದಲ್ಲಿ ಗಂಟಲು ದ್ರವ ಮಾದರಿ ಸಂಗ್ರಹಣೆಗೆ ಗುರಿ ನಿಗದಿಪಡಿಸಲಾಗಿದೆ. ಜುಲೈ 2ರಂದು ತಮ್ಮ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯಾವುದೇ ವ್ಯಕ್ತಿಯ ಗಂಟಲು ದ್ರವ ಮಾದರಿ ಸಂಗ್ರಹಣೆ ಮಾಡದೇ ಶೂನ್ಯ ಪ್ರಗತಿ ಸಾಧಿಸಿರುವುದನ್ನು ಗಂಭೀರವಾಗಿ ಪರಿಗಣಿಸಿ ನೋಟಿಸ್ ನೀಡಲಾಗಿದೆ..
ಕೋವಿಡ್-19ರ ಕರ್ತವ್ಯ ನಿರ್ವಹಿಸುವಲ್ಲಿ ನಿರ್ಲಕ್ಷ್ಯತನ ತೋರಿರುವುದರಿಂದ ವಿಪತ್ತು ನಿರ್ವಹಣಾ ಕಾಯಿದೆ-2005ರ ಅನ್ವಯ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದ್ದು, ನೋಟಿಸ್ ತಲುಪಿದ 24 ಗಂಟೆಯಲ್ಲಿ ವಿವರಣೆ ಸಲ್ಲಿಸಬೇಕು. ತಪ್ಪಿದಲ್ಲಿ ಶಿಸ್ತಿನ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ. ಮಾಹಿತಿ ಕೊಟ್ಟಿದ್ದಾರೆ.
ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ
ಜು. 3 ರಂದು ಒಂದೇ ದಿನ ಜಿಲ್ಲೆಯಲ್ಲಿ 24 ಸೋಂಕಿತರು ಪತ್ತೆಯಾಗಿದ್ದಾರೆ. ಹೀಗಾಗಿ ಒಟ್ಟು ಸೋಂಕಿತರ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಜೊತೆಗೆ ಈವರೆಗೆ ಕೇವಲ ಒಬ್ಬರು ಮಾತ್ರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.
ಪರಿಸ್ಥಿತಿ ಹೀಗಿರುವಾಗ ಕನಿಷ್ಠ ಸಂಖ್ಯೆಯ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸದಿರುವುದನ್ನು ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ. ಗಂಭೀರವಾಗಿ ಪರಿಗಣಿಸಿ ನೋಟಿಸ್ ನೀಡಿದ್ದಾರೆ. ಸರ್ಕಾರಿ ನೌಕರರ ನಿರ್ಲಕ್ಷವನ್ನು ಗಂಭೀರವಾಗಿ ಪರಿಗಣಿಸುವ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.