ಆಕ್ಸಿಜನ್ ದುರಂತಕ್ಕೆ ಮೈಸೂರು ಡಿಸಿ ಕಾರಣ; ಚಾಮರಾಜನಗರ ಡಿಸಿ ಆರೋಪ
ಚಾಮರಾಜನಗರ, ಮೇ 4: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ರೋಗಿಗಳ ಸಾವು ಪ್ರಕರಣಕ್ಕೆ ಮೈಸೂರು ಜಿಲ್ಲಾಧಿಕಾರಿ ಅವರೇ ನೇರ ಕಾರಣ ಎಂದು ಚಾಮರಾಜನಗರ ಡಿಸಿ ಎಂ.ಆರ್.ರವಿ ಆರೋಪಿಸಿದ್ದಾರೆ.
Recommended Video
ನಮಗೆ ಸರಬರಾಜು ಆಗುವ ಆಕ್ಸಿಜನ್ ನಲ್ಲಿ ಅವರು ಮಧ್ಯೆ ಪ್ರವೇಶಿಸಿ ಸರಬರಾಜಿನಲ್ಲಿ ವ್ಯತ್ಯಯ ಆಗುವಂತೆ ಮಾಡಿದ್ದಾರೆ ಎಂದ ಅವರು, ಆಕ್ಸಿಜನ್ ಪೂರೈಕೆ ಆಗಿದ್ದರೆ ಅಮೂಲ್ಯ ಜೀವ ಉಳಿಸಬಹುದಿತ್ತು ಎಂದರು.
ಮೈಸೂರಿಗೆ ಡಿಸಿಯಾಗಿರುವ ರೋಹಿಣಿ ಸಿಂಧೂರಿ ಅವರು ಚಾಮರಾಜನಗರದ ಜಿಲ್ಲಾಡಳಿತದ ವಿಷಯದಲ್ಲಿ ಮೂಗು ತೂರಿಸಬಾರದು. ರಾಜ್ಯ ಸರ್ಕಾರ ರೋಹಿಣಿ ಸಿಂಧೂರಿ ಅವರನ್ನು ನೋಡಲ್ ಆಫೀಸರ್ ಆಗಿ ನೇಮಕ ಮಾಡಿಲ್ಲ ಎಂದು ಡಿಸಿ ಎಂ.ಆರ್.ವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಕ್ಸಿಜನ್ ಸರಬರಾಜು ಆಗದೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ ಅಂತಾ ತಿಳಿದ ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರು, ನೋಡಲ್ ಅಧಿಕಾರಿ ಮತ್ತು ಮುಖ್ಯಕಾರ್ಯದರ್ಶಿ ಅವರಿಗೆ ಮಾಹಿತಿ ನೀಡಿದೆ. ಮೈಸೂರು ಜಿಲ್ಲಾಧಿಕಾರಿ ಸುಳ್ಳು ಮಾಹಿತಿ ನೀಡಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಹೇಳಿದರು.
ನಮ್ಮ ಸಿಲಿಂಡರ್ ಇರುವ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ನಮ್ಮ ಬಳಿ ದಾಖಲೆ ಇದೆ. 10 ಗಂಟೆಯ ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಹಿಂದಿನ ದಿನದಿಂದ ಆಕ್ಸಿಜನ್ ನೀಡಲು ಮೀನಾಮೇಷ ಎಣಿಸಿದ್ದಾರೆ. ಮೈಸೂರಿನಿಂದ ಸರಬರಾಜು ಮಾಡುವವರಿಗೆ ಮೈಸೂರು ಡಿಸಿಯಿಂದ ಅನುಮತಿ ಪಡೆಯಬೇಕು ಎಂದು ಆದೇಶ ನೀಡಿದ್ದಾರೆ. ಅವರು ಒಂದು ದೊಡ್ಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಅವರ ವ್ಯಾಪ್ತಿಯಲ್ಲಿ ತೀರ್ಮಾನ ಕೈಗೊಳ್ಳಲಿ, ಬೇರೆ ಜಿಲ್ಲೆಯ ವ್ಯವಹಾರಕ್ಕೆ ತಲೆ ಹಾಕಬಾರದಿತ್ತು. ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ವಿವರಿಸಿದರು.
ಪ್ರತಿನಿತ್ಯ ನಮ್ಮ ವಾಹನ ಮೈಸೂರಿಗೆ ಹೋಗಿ ಗಂಟೆಗಟ್ಟಲೆ ಕಾಯೋದು, ಅವರು ಕೊಟ್ಟಾಗ ತೆಗೆದುಕೊಂಡು ಬರುವುದು ಆಗುತ್ತಿತ್ತು. ನಮಗೆ ಬೇಕಾದ ಆಕ್ಸಿಜನ್ ಅನ್ನು ಮತ್ತೊಬ್ಬ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ತರಬೇಕು ಅನ್ನೋದು ಯಾವ ನ್ಯಾಯ? ಇವರಿಗೆ ಈ ಅಧಿಕಾರ ಕೊಟ್ಟವರು ಯಾರು? ಇವರನ್ನು ನೋಡಲ್ ಅಧಿಕಾರಿ ಅಲ್ಲ ಅಥವಾ ಸುತ್ತಮುತ್ತಲಿನ ಜಿಲ್ಲೆಗಳ ಉಸ್ತುವಾರಿ ಸಹ ಅಲ್ಲ ಎಂದು ಕಿಡಿಕಾರಿದರು.
ಈ ಸಮಸ್ಯೆ ಬಗ್ಗೆ ನಾನು ಮುಖ್ಯ ಕಾರ್ಯದರ್ಶಿ ಅವರಿಗೆ ಹೇಳಿದ್ದೆ. ಜಿಲ್ಲಾ ಉಸ್ತುವಾರಿ ಸಚಿವರು ಮೂಲಕವೂ ಹೇಳಿದ್ದೆ. ಅವರೇ ಈ ರೀತಿ ಮಾಡದಂತೆ ನಿರ್ದೇಶನ ನೀಡುತ್ತೇನೆ ಅಂತಾ ಹೇಳಿದ್ದರು. ಖುದ್ದು ಮುಖ್ಯಮಂತ್ರಿಗಳೇ ಮೈಸೂರು ಡಿಸಿಗೆ ನಿರ್ದೇಶನ ನೀಡಿದ್ದರು. ಆದರೂ ರೋಹಿಣಿ ಸಿಂಧೂರಿ ನಮ್ಮ ಜಿಲ್ಲೆ ಬಗ್ಗೆ ಯಾಕೆ ಈ ರೀತಿ ಮಾಡಿದರು ಗೊತ್ತಾಗುತ್ತಿಲ್ಲ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಹೇಳಿದರು.