ದಸರಾಗೆ ಬರಬೇಕಿದ್ದ ರೋಹಿತ್ ಆನೆಯ ಪುಂಡಾಟ!
ಚಾಮರಾಜನಗರ, ಆಗಸ್ಟ್ 23: ಮೈಸೂರು ದಸರಾದಲ್ಲಿ ಭಾಗವಹಿಸಲು ತೆರಳಬೇಕಾಗಿದ್ದ ಗಜಪಡೆಯ ಪೈಕಿ ಆನೆಯೊಂದು ಬಂಡೀಪುರದಲ್ಲಿ ಪ್ರವಾಸಿಗರೊಬ್ಬರ ಕಾರಿನ ಮೇಲೆ ದಾಳಿ ಮಾಡಿದ್ದರಿಂದ ಗಜಪಯಣವನ್ನು ಮುಂದೂಡಲಾಗಿದೆ.
ಇಂದು ಮೈಸೂರಿಗೆ ಗಜಪಯಣ; ದಸರಾ ಗಜಪಡೆ ಸ್ವಾಗತಿಸುವವರು ಯಾರು?
ಮೈಸೂರು ದಸರಾಗೆ ಅರಣ್ಯ ಇಲಾಖೆಯು ಈ ಬಾರಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಸಾಕಾನೆಗಳಾದ ಜಯಪ್ರಕಾಶ, ರೋಹಿತ್ ಹಾಗೂ ಲಕ್ಷ್ಮಿ ಎಂಬ ಮೂರು ಆನೆಗಳನ್ನು ಆಯ್ಕೆ ಮಾಡಿ ಮೈಸೂರಿಗೆ ಕಳುಹಿಸಲು ಸಿದ್ಧತೆ ನಡೆಸಿತ್ತು. ಆದರೆ ರೋಹಿತ್ ಎಂಬ ಆನೆ ಸಫಾರಿಗೆ ತೆರಳಲು ಆಗಮಿಸಿದ್ದ ಪೂನಾ ಮೂಲದ ಜೆ.ವಿ.ಕಾಮ್ಡೆ ಅವರ ಕಾರಿನ ಮೇಲೆ ದಾಳಿ ಮಾಡಿದ ಪರಿಣಾಮ ಕಾರು ಎದುರಿನ ಶೌಚಾಲಯಕ್ಕೆ ಬಡಿದಿದೆ. ಇದರಿಂದ ಕಾರಿನ ಮುಂಭಾಗ ಜಖಂ ಆಗಿದೆ. ಇದರಿಂದ ಕಾರಿನ ದುರಸ್ತಿ ವೆಚ್ಚವನ್ನು ಅರಣ್ಯ ಇಲಾಖೆಯೇ ಭರಿಸುವಂತಾಗಿದೆ.
ಆನೆ ರೋಹಿತ್ ಮಾಡಿದ ಎಡವಟ್ಟಿನಿಂದ ಮೈಸೂರು ದಸರಾಗೆ ತೆರಳಬೇಕಾಗಿದ್ದ ಆನೆಯ ಪ್ರಯಾಣ ತಡೆಹಿಡಿಯಲಾಗಿದೆ. ಇತ್ತೀಚೆಗೆ ಸಾಕಾನೆ ರೋಹಿತ್ ವಾಹನಗಳನ್ನು ಕಂಡರೆ ರೊಚ್ಚಿಗೆದ್ದು, ವಾಹನಗಳ ಮೇಲೆ ದಾಳಿ ನಡೆಸುತ್ತಿರುವುದು ಅರಣ್ಯಾಧಿಕಾರಿಗಳಿಗೆ ಬಿಸಿ ತುಪ್ಪವಾಗಿದೆ. ಈ ಹಿನ್ನೆಲೆಯಲ್ಲಿ ಬಂಡೀಪುರದ ಆನೆಗಳ ಪ್ರಯಾಣವನ್ನು ತಡೆಹಿಡಿಯಲಾಗಿದೆ ಎಂದು ಗೋಪಾಲಸ್ವಾಮಿಬೆಟ್ಟ ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್ ಹೇಳಿದ್ದಾರೆ.
ಉಸ್ತುವಾರಿಯಿಲ್ಲದೇ ಮಂಕಾಗುವುದೇ ಈ ಬಾರಿಯ ಮೈಸೂರು ದಸರಾ?
ಈಗಾಗಲೇ ಮೈಸೂರಿಗೆ ಮೊದಲ ಹಂತದಲ್ಲಿ ಆರು ಆನೆಗಳು ಬಂದಿದ್ದು, ಎರಡನೇ ಹಂತದಲ್ಲಿ ಬರಬೇಕಾದ ಉಳಿದ ಆನೆಗಳ ಪೈಕಿ ರೋಹಿತ್ ಆನೆಯೂ ಒಂದಾಗಿತ್ತು.