ಚಾಮರಾಜನಗರ: ಅಂಬೇಡ್ಕರ್ ಗೆ ಅಪಮಾನ, ಶಿಕ್ಷಕ ಅಮಾನತು
ವಾಟ್ಸಪ್ ನಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅಪಮಾನ ಸಂದೇಶವನ್ನು ಹರಿಬಿಟ್ಟ ಆರೋಪದಲ್ಲಿ ಗುಂಡ್ಲುಪೇಟೆ ತಾಲೂಕಿನ ದಾರಿಬೇಗೂರು ಶಿಕ್ಷಕರೊಬ್ಬರನ್ನು ಅಮಾನತು ಮಾಡಲಾಗಿದೆ.
ಚಾಮರಾಜನಗರ. ಮೇ 03 : ಸಾಮಾಜಿಕ ಜಾಲತಾಣಗಳನ್ನು ಸದುದ್ದೇಶಕ್ಕೆ ಬಳಸದೆ ತಮ್ಮ ತೀಟೆ ತೀರಿಸಿಕೊಳ್ಳಲು ಬಳಸುತ್ತಿರುವ ಕಾರಣದಿಂದಾಗಿ ಹಲವು ವಿವಾದಗಳು, ಅನಗತ್ಯ ಗೊಂದಲಗಳು, ಮಾನಹಾನಿ ಪ್ರಕರಣಗಳು ನಡೆಯುತ್ತಿವೆ.
ತಮ್ಮ ಮನಸ್ಸಿನಲ್ಲಿರುವುದನ್ನು ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟು ವಿಕೃತ ಸುಖಪಡುವವರ ದೊಡ್ಡಗುಂಪೇ ಇದ್ದು, ಇವರಲ್ಲಿ ಹೆಚ್ಚಿನವರು ಜವಬ್ದಾರಿಯುತ ಸ್ಥಾನದಲ್ಲಿದ್ದರೂ ತಮ್ಮ ಸಣ್ಣಬುದ್ದಿಯನ್ನು ಆಗಾಗ್ಗೆ ಪ್ರದರ್ಶಿಸಿಸಿ ಇಕ್ಕಟ್ಟಿಗೆ ಸಿಲುಕಿಕೊಳ್ಳುತ್ತಿದ್ದಾರೆ.
ಈ ನಡುವೆ ಭವಿಷ್ಯದ ಪ್ರಜೆಗಳನ್ನು ರೂಪಿಸುವ ಗುರುವಿನ ಸ್ಥಾನದಲ್ಲಿರುವ ಗುಂಡ್ಲುಪೇಟೆ ತಾಲೂಕಿನ ದಾರಿಬೇಗೂರು ಶಿಕ್ಷಕರೊಬ್ಬರು ಅಂಬೇಡ್ಕರ್ ಗೆ ಅಪಮಾನ ಮಾಡುವಂತಹ ಸಂದೇಶಗಳನ್ನು ವಾಟ್ಸಪ್ ಗಳಲ್ಲಿ ಹಾಕಿ ವಿವಾದ ಸೃಷ್ಠಿಸಿದ್ದಲ್ಲದೆ ಕೆಲಸದಿಂದ ಅಮಾನತುಗೊಂಡಿದ್ದಾರೆ. [ಅಂಬೇಡ್ಕರ್ ಕಮಾನಿಗೆ ಅಪಮಾನ: ಐವರ ಬಂಧನ]
ದಾರಿಬೇಗೂರು ಶಾಲಾ ಶಿಕ್ಷಕ ರವಿ ಎನ್ನುವರು ಡಾ. ಬಿ.ಆರ್.ಅಂಬೇಡ್ಕರ್ ಗೆ ಅಪಮಾನವಾಗುವ ರೀತಿಯ ಸ್ಟೇಟಸ್ ವಾಟ್ಸಪ್ ನಲ್ಲಿ ಹರಿಬಿಟ್ಟಿದ್ದರು. [ಚಾಮರಾಜನಗರ : ಅಂಬೇಡ್ಕರ್ಗೆ ಅಪಮಾನ, ಹೊಂಗನೂರು ಉದ್ವಿಗ್ನ]
ಈ ಬಗ್ಗೆ ದಸಂಸ ಮುಖಂಡ ಸುಭಾಷ್ ಮಾಡ್ರಳ್ಳಿ ಎಂಬುವರು ಏಪ್ರಿಲ್ 29ರಂದು ಗುಂಡ್ಲುಪೇಟೆ ಪಟ್ಟಣದ ಪೊಲೀಸ್ ಠಾಣೆಗೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಮಂಜುಳ ಅವರು ಗುಂಡ್ಲುಪೇಟೆಕ್ಷೇತ್ರದ ಶಿಕ್ಷಣಾಧಿಕಾರಿ ಸಿ.ಎನ್. ರಾಜು ಹಾಗೂ ಕ್ಷೇತ್ರ ಸಂಪನ್ಮೂಲ ಸಮನ್ವಾಯಾಧಿಕಾರಿ ನಂದೀಶ್ ಅವರಿಂದ ಮಾಹಿತಿ ಪಡೆದು ಅದರ ಆಧಾರದ ಮೇಲೆ ಶಿಕ್ಷಕ ರವಿ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.