ಇಂಥ ಅಂಗನವಾಡಿಗೆ ಯಾವ ಧೈರ್ಯದಿಂದ ನಿಮ್ಮ ಮಕ್ಕಳನ್ನು ಕಳಿಸುತ್ತೀರಿ?!
ಚಾಮರಾಜನಗರ, ಆಗಸ್ಟ್ 25: ಉಫ್ ಎಂದರೆ ಬಿದ್ದೇ ಹೋಗುತ್ತೇನೋ! ಹೌದು, ಶಿವನಸಮುದ್ರದಲ್ಲಿ ಕಾವೇರಿ ಭೋರ್ಗರೆದು ಹರಿಯುವುದನ್ನು ವೀಕ್ಷಿಸಲು ತೆರಳುವ ಮಂದಿ ಇಲ್ಲಿರುವ ಅಂಗನವಾಡಿಯೊಂದನ್ನು ಇಣುಕಿ ನೋಡಿದರೆ ಖಂಡಿತಾ ಬೆಚ್ಚಿಬೀಳುತ್ತಾರೆ. ಏಕೆಂದರೆ ಈ ಅಂಗನವಾಡಿ ಕೇಂದ್ರ ಇಂದೋ ನಾಳೆಯೋ ಬಿದ್ದು ಹೋಗುವ ಕಟ್ಟಡದಲ್ಲಿ ನಡೆಯುತ್ತಿದ್ದು ಭಯ ಹುಟ್ಟಿಸುತ್ತಿದೆ.
ಈಗಾಗಲೇ ಹಲವು ಅಂಗನವಾಡಿಗಳು ಆಧುನಿಕತೆಗೆ ಹೊಂದಿಕೊಂಡು ಸುಸಜ್ಜಿತ ಕಟ್ಟಡಗಳ ಮೂಲಕ ನೆಮ್ಮದಿಯ ನೆಲೆಕಂಡಿವೆ. ಆದರೆ ಈ ಅಂಗನವಾಡಿ ಇರುವ ಸ್ಥಿತಿಯನ್ನು ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ. ಅದು ಹೇಗಿದೆ ಎಂದರೆ ಶಿಥಿಲಗೊಂಡ ಹಳೆಯ ಕಾಲದ ಹೆಂಚಿನ ಕಟ್ಟಡ, ಕುಸಿದು ಬಿದ್ದ ಮಣ್ಣಿನಗೋಡೆ, ಒಡೆದ ಹೆಂಚುಗಳ ಛಾವಣಿ, ಸುತ್ತಲೂ ಆವರಿಸಿದ ಗಿಡಗಂಟಿಗಳು. ಇದರ ನಡುವೆ ವಿಷಜಂತುಗಳು ಯಾವಾಗ ಬಂದು ಬಿಡುತ್ತವೋ ಎಂಬ ಭಯದಲ್ಲಿ ಮಕ್ಕಳು ಕುಳಿತುಕೊಳ್ಳುವಂತಾಗಿದೆ.
ಮಳೆ ಬಂದರೆ ಕೆರೆಯಾಗುವ ಗುಂಡ್ಲುಪೇಟೆ ಬಸ್ ನಿಲ್ದಾಣ!
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದಲ್ಲಿರುವ ಅಂಗನವಾಡಿ ಕೇಂದ್ರವು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಹಿಂದುಳಿದ ವರ್ಗಗಳ ಸಚಿವರ ಕ್ಷೇತ್ರದಲ್ಲಿಯೇ ಇದೆ ಎನ್ನುವುದು ಅಚ್ಚರಿಯ ವಿಷಯವಾಗಿದೆ. ಇಷ್ಟಕ್ಕೂ ಸಚಿವ ಎನ್.ಮಹೇಶ್ ಅವರಿಗೆ ಇದು ಗೊತ್ತಿಲ್ಲದ ವಿಚಾರವೇನಲ್ಲ. ಚುನಾವಣೆಗೂ ಮುನ್ನ ತನ್ನ ಕ್ಷೇತ್ರದ ಎಲ್ಲ ಸ್ಥಳಗಳಿಗೂ ತೆರಳಿ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ವಾಗ್ದಾನ ನೀಡಿದ್ದರು. ಆದರೆ ಈಗ ಇಡೀ ರಾಜ್ಯದ ಜವಬ್ದಾರಿ ಹೊತ್ತಿರುವ ಕಾರಣದಿಂದಾಗಿ ತಮ್ಮ ಕ್ಷೇತ್ರದ ಸಮಸ್ಯೆ ಕಂಡು ಬರುತ್ತಿಲ್ಲವೇನೋ?
2007 ರಲ್ಲಿ ಕಟ್ಟಿದ ಅಂಗನವಾಡಿ
ಇಷ್ಟಕ್ಕೂ ಶಿವನಸಮುದ್ರದಲ್ಲಿ ಅಂಗನವಾಡಿ ಕೇಂದ್ರವನ್ನು ತೆರೆಯಬೇಕೆನ್ನುವ ಆಲೋಚನೆ ಸರ್ಕಾರಕ್ಕೆ ಬಂದಿದ್ದು 2007ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಆದೇಶದಂತೆ ಮದ್ಯರಂಗ ದೇವಾಲಯದ ಮುಂಭಾಗದಲ್ಲಿರುವ ಮುಜರಾಯಿ ಇಲಾಖೆಯ ಖಾಲಿ ಮನೆಯಲ್ಲಿ ಅಂಗನವಾಡಿ ಕೇಂದ್ರ ಆರಂಭಿಸಲು ತೀರ್ಮಾನಿಸಲಾಯಿತು. ಅಲ್ಲಿಂದ ಇಲ್ಲಿ ತನಕವೂ ಇದೇ ಕಟ್ಟಡದಲ್ಲಿ ನಡೆಯುತ್ತಿದೆ.
ಸಪುಲಭ್ಯಗಳನ್ನಂತೂ ಕೇಳಲೇ ಬೇಡಿ!
ಸದ್ಯ ಈ ಅಂಗನವಾಡಿ ಕೇಂದ್ರದಲ್ಲಿ ಸುಮಾರು 14 ಮಕ್ಕಳು ಇವೆ. ಈ ಮಕ್ಕಳಿಗೆ ಯಾವುದೇ ಅಗತ್ಯ ಸೌಲಭ್ಯಗಳು ಇಲ್ಲಿ ಇಲ್ಲ. ಕಟ್ಟಡ ಶಿಥಿಲಗೊಂಡಿದ್ದು ಇದರಲ್ಲಿ ಕುಳಿತುಕೊಳ್ಳುವುದೇ ಕಷ್ಟವಾಗಿದೆ. ಈ ವ್ಯಾಪ್ತಿಯಲ್ಲಿ ಬಡಮಕ್ಕಳಿದ್ದು, ಅನಿವಾರ್ಯವಾಗಿ ಅಂಗನವಾಡಿ ಕೇಂದ್ರಕ್ಕೆ ಬರುತ್ತಿವೆ. ಒಂದು ವೇಳೆ ಭಾರೀ ಮಳೆ ಸುರಿದಂತು ಕಟ್ಟಡದೊಳಗೆ ಇರಲು ಭಯಪಡುವ ಪರಿಸ್ಥಿತಿ ಇದೆ.
ಕಾಡಂಚಿನ ಉಪಕಾರ ಗ್ರಾಮಕ್ಕೆ ಉಪಕಾರ ಮಾಡೋರೇ ಇಲ್ಲ!
ಕೂಗು ಯಾರಿಗೂ ಕೇಳಿಸುತ್ತಿಲ್ಲ
ಅಂಗನವಾಡಿ ಕೇಂದ್ರ ಕಾರ್ಯಾಚರಿಸುತ್ತಿರುವ ಕಟ್ಟಡವನ್ನು ದುರಸ್ತಿಗೊಳಿಸುವಂತೆ ಹಲವು ಅನೇಕ ಬಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನೊಂದೆಡೆ ಕಟ್ಟಡವು ಮುಜರಾಯಿ ಇಲಾಖೆಗೆ ಸೇರಿದ್ದರಿಂದ ಅದನ್ನು ದುರಸ್ತಿ ಮಾಡುವುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಾಧ್ಯವಿಲ್ಲ ಎನ್ನಲಾಗುತ್ತಿದೆ.
ಭಯದಲ್ಲಿ ಕಾಲ ಕಳೆಯುತ್ತಿರುವ ಮಕ್ಕಳು
ಇನ್ನು ಶಿವನಸಮುದ್ರ ಗ್ರಾಮವು ಸತ್ತೇಗಾಲ ಗ್ರಾಮ ಪಂಚಾಯ್ತಿಗೆ ಒಳಪಟ್ಟಿದ್ದು ಗ್ರಾಪಂ ಕೂಡ ಈ ಕಟ್ಟಡದ ಬಗ್ಗೆ ತಲೆಕೆಡಿಸಿಕೊಂಡಂತೆ ಕಂಡು ಬರುತ್ತಿಲ್ಲ. ಇದೆಲ್ಲದರ ಪರಿಣಾಮ ಅಂಗನವಾಡಿಗೆ ಬರುವ ಮುಗ್ಧ ಮಕ್ಕಳು ಭಯದಲ್ಲಿ ಕಾಲ ಕಳೆಯುವಂತಾಗಿದೆ. ಇನ್ನಾದರೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಹಿಂದುಳಿದ ವರ್ಗಗಳ ಸಚಿವರಾದ ಎನ್.ಮಹೇಶ್ ಅವರು ಇತ್ತ ಗಮನಹರಿಸಿ ಈ ಅಂಗನವಾಡಿಯ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ.