ಚಾಮರಾಜನಗರ; ಬೆಳ್ಳಂಬೆಳಗ್ಗೆ ಆರಂಭವಾದ ಮಳೆ
ಚಾಮರಾಜನಗರ, ಮೇ 10; ಚಾಮರಾಜನಗರ ಪಟ್ಟಣ ಸೇರಿದಂತೆ ಜಿಲ್ಲೆಯ ತಾಲ್ಲೂಕುಗಳಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಮಳೆ ಆರಂಭವಾಗಿದೆ. ಮನೆಯಿಂದ ಹೊರಗೆ ಬರಲು ಛತ್ರಿಯ ಮೊರೆ ಹೋಗುವುದು ಅನಿವಾರ್ಯವಾಗಿದೆ.
ಮಂಗಳವಾರ ಬೆಳಗ್ಗೆನಿಂದ ಮಳೆ ಬಿರುಸಾಗಿ ಸುರಿದ ಪರಿಣಾಮ ಹಾಲು, ಪೇಪರ್, ತರಕಾರಿ, ದಿನಸಿ ಖರೀದಿಸಲು ಹೊರಟ ಜನರು ಛತ್ರಿಯ ಹುಡುಕಾಟದಲ್ಲಿ ತೊಡಗಿದ್ದಾರೆ. ಮುಂಜಾನೆಯ ಮಳೆ ಶಪಿಸುತ್ತಲೇ ಹೊರಗೆ ಕಾಲಿಡುತ್ತಿದ್ದಾರೆ.
ಜಿಲ್ಲೆಯ ವಿವಿಧ ತಾಲೂಕುಗಳ ಹಲವು ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಮಳೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗಿದೆ. ಮಳೆಯ ಪ್ರಭಾವದಿಂದ ಕೂಲಿ ಕೆಲಸಕ್ಕೆ ಹೊರಟಿದ್ದ ಜನರು ಕಾದು ಕೂರುವಂತಾಗಿದೆ. ಮುಂಜಾನೆ 5.45ರ ಸುಮಾರಿಗೆ ಸದ್ದು ಗದ್ದಲ ಇಲ್ಲದೇ ಮಳೆ ಶುರುವಾಗಿದ್ದು, ಜನರು ಮನೆಯಲ್ಲೇ ಉಳಿಯುವಂತಾಗಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುವಾರ ಕುಸಿತದಿಂದ ಜಿಲ್ಲೆಯ ವಿವಿಧೆಡೆ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ಚಾಮರಾಜನಗರ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಮಳೆಯಿಂದಾಗಿ ವಿದ್ಯುತ್ ಸರಬರಾಜು ಕೂಡ ಸ್ಥಗಿತವಾಗಿದ್ದು, ಜನರು ಪರದಾಡಿದರು.
Recommended Video