ಚಾಮರಾಜನಗರ ಜಿಲ್ಲೆಯಲ್ಲಿ ಏರುತ್ತಲೇ ಇದೆ ಸಾವಿನ ಸಂಖ್ಯೆ
ಚಾಮರಾಜನಗರ, ಮೇ 10: ಕಳೆದ ಮೇ 2ರ ದುರಂತದಲ್ಲಿ 24 ಜನ ಸೋಂಕಿತರು ಮೃತಪಟ್ಟ ಪ್ರಕರಣದಿಂದ ಇಡೀ ಚಾಮರಾಜನಗರ ಜಿಲ್ಲೆಯ ಜನತೆ ಆತಂಕಕ್ಕೀಡಾಗಿದ್ದರು. ಆದರೆ ಸೋಂಕಿತರ ಸಾವಿನ ಸಂಖ್ಯೆ ಮಾತ್ರ ಈಗಲೂ ಕಡಿಮೆ ಆಗುತ್ತಿಲ್ಲ.
ಜಿಲ್ಲೆಯಲ್ಲಿ ಕೋವಿಡ್ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದ್ದು, ಶನಿವಾರ ಸಂಜೆ 6 ಗಂಟೆಯಿಂದ ಭಾನುವಾರ ಸಂಜೆ 6 ಗಂಟೆಯವರೆಗೆ 20 ಸೋಂಕಿತರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಹೊಸದಾಗಿ 910 ಮಂದಿಗೆ ಸೋಂಕು ಕಾಣಿಸಿಕೊಂಡಿದೆ.
ಮೇ 4ರಂದು 8, ಮೇ 5ರಂದು 8, ಮೇ 6ರಂದು 14, ಮೇ 7ರಂದು 9, ಮೇ 8ರಂದು 5 ಹಾಗೂ ಮೇ 9ರಂದು ಸಂಜೆ 6 ಗಂಟೆವರೆಗೆ 20 ಮಂದಿ ಮೃತಪಟ್ಟಿದ್ದಾರೆ. ಮೇ 2ರಂದು ಆಮ್ಲಜನಕದ ವ್ಯತ್ಯಯ ಹಾಗೂ ಇನ್ನಿತರ ಕಾರಣಗಳಿಂದ 24 ಮಂದಿ ಮೃತಪಟ್ಟಿದ್ದರು. ಈ ಘಟನೆಯಿಂದ ಹಿಡಿದು ಇಲ್ಲಿಯವರೆಗೆ ಒಟ್ಟು 88 ಮಂದಿ ಮೃತರಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಂಕಿ ಅಂಶಗಳು ಹೇಳುತ್ತವೆ.
ಈ ಕುರಿತು ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಜನರು ಅಲ್ಪ ಸ್ವಲ್ಪ ರೋಗ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಗಳಿಗೆ ಪರೀಕ್ಷೆ ಮಾಡಿಸಿಕೊಳ್ಳಲು ಬರುತ್ತಿಲ್ಲ. ಬದಲಿಗೆ ಎಲ್ಲರೊಡನೆ ಸ್ವತಃ ತಮ್ಮ ಕುಟುಂಬದೊಡನೆ ಬೆರೆತು ಸೋಂಕು ಹರಡಲು ಕಾರಣರಾಗುತ್ತಿದ್ದಾರೆ. ಈ ಕುರಿತು ಜನತೆಗೆ ಎಷ್ಟು ಎಚ್ಚರಿಕೆ ನೀಡಿದರೂ ಗಂಭಿರವಾಗಿ ಪರಿಗಣಿಸುತ್ತಿಲ್ಲ. ಇದಲ್ಲದೆ ಹೋಂ ಕ್ವಾರಂಟೈನ್ ನಲ್ಲಿರುವವರೂ ಕೂಡ ಕಡ್ಡಾಯ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ ಇದೂ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ ಎಂದರು.
ಮೃತರ ಪೈಕಿ ಜಿಲ್ಲೆಯ ಅಮಚವಾಡಿ ಗ್ರಾಮದ ತಂದೆ ಮತ್ತು ಮಗ ಸೇರಿದ್ದಾರೆ. ಮತ್ತೊಬ್ಬ ಪುತ್ರ ಮೈಸೂರಿನ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾ ಸರ್ಜನ್ ಡಾ.ಶ್ರೀನಿವಾಸ್ ಅವರ ಪ್ರಕಾರ 'ರೋಗ ಉಲ್ಬಣಗೊಂಡ ನಂತರ ಕೊನೆಯ ಸ್ಥಿತಿಯಲ್ಲಿ ಆಸ್ಪತ್ರೆಗೆ ಬರುತ್ತಿರುವುದು ಸಾವಿನ ಪ್ರಮಾಣ ಹೆಚ್ಚಾಗುತ್ತಿರುವುದಕ್ಕೆ ಕಾರಣ. ಜತೆಗೆ, ಆಸ್ಪತ್ರೆಯ ಮೇಲೂ ಅಧಿಕ ಒತ್ತಡ ಇದೆ' ಎಂದರು.
'ಸಾವಿನ ಪ್ರಮಾಣ ಹೆಚ್ಚುತ್ತಿರುವುದಕ್ಕೆ ಆಮ್ಲಜನಕದ ಕೊರತೆ ಕಾರಣ ಅಲ್ಲ' ಎಂದು ಆಮ್ಲಜನಕ ಸರಬರಾಜು ವಿಭಾಗದ ನೋಡಲ್ ಅಧಿಕಾರಿ ಡಿಸಿಎಫ್ ಏಡುಕುಂಡಲು ತಿಳಿಸಿದರು. 'ಆಮ್ಲಜನಕದ ಸಂಗ್ರಹ ಇರುವಂತೆ ವ್ಯವಸ್ಥೆ ಮಾಡಲಾಗಿದೆ. ನಿತ್ಯ 4.5 ಕೆ.ಎಲ್ ಆಮ್ಲಜನಕ ಬೇಕಿದೆ. 400 ಆಮ್ಲಜನಕದ ಸಿಲಿಂಡರ್ಗಳೂ ಇವೆ.
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಒಂದೇ ರಾತ್ರಿ 14 ಮಂದಿ ಮೃತಪಟ್ಟ ಸುದ್ದಿ ಹರಡುತ್ತಿದ್ದಂತೆ ನಗರದಲ್ಲಿ ವ್ಯಾಪಾರಸ್ಥರು ಪೊಲೀಸರ ಸೂಚನೆಗೂ ಕಾಯದೆ ಸ್ವಯಂಪ್ರೇರಿತರಾಗಿ ಭಾನುವಾರ ತಮ್ಮ ಅಂಗಡಿಗಳನ್ನು ಬಂದ್ ಮಾಡಿದರು. ಶುಕ್ರವಾರವಷ್ಟೇ ಆರೋಗ್ಯ ಇಲಾಖೆಯ ಪರಿಣತರ ತಂಡವೊಂದು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ರೋಗಿಗಳ ಸಾವಿನ ಕುರಿತು ಪರಿಶೀಲನೆ ನಡೆಸಿತ್ತು.
Recommended Video
ಹೊಸ ಸೋಂಕಿತರು ಮತ್ತು ಮರಣ ಹೊಂದುತ್ತಿರುವವರ ಸಂಖ್ಯೆ ನಗರ ಪ್ರದೇಶಕ್ಕಿಂತ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿದೆ. ಮೇ 4ರಿಂದ 9 ರವರೆಗೆ 16 ಮಂದಿಯಷ್ಟೇ ಪಟ್ಟಣ ಪ್ರದೇಶದವರು ಮೃತಪಟ್ಟಿದ್ದರೆ, 42 ಮಂದಿ ಗ್ರಾಮೀಣ ಪ್ರದೇಶದವರು ಸಾವಿಗೀಡಾಗಿದ್ದಾರೆ. ಪಟ್ಟಣ ಪ್ರದೇಶದ 723 ಹಾಗೂ ಗ್ರಾಮೀಣ ಪ್ರದೇಶದ 3,237 ಮಂದಿಗೆ ಸೋಂಕು ತಗುಲಿದೆ.