ಚಾಮರಾಜನಗರದ ದೀನಬಂಧು ಆಶ್ರಮದ 30 ಮಕ್ಕಳಿಗೆ ಕೊರೊನಾ ಸೋಂಕು
ಚಾಮರಾಜನಗರ, ಮೇ 28: ಚಾಮರಾಜನಗರದ ಅರಣ್ಯ ನರ್ಸರಿಗೆ ಹೊಂದಿಕೊಂಡಂತ್ತಿರುವ ದೀನ ಬಂಧು ಮಕ್ಕಳ ಆಶ್ರಮದಲ್ಲಿನ 30 ಮಕ್ಕಳಿಗೆ ಕೊರೊನಾ ಸೋಂಕು ದೃಢವಾಗಿದ್ದು, ಇಡೀ ದೀನಬಂಧು ಆಶ್ರಮವನ್ನು ಕಂಟೈನ್ಮೆಂಟ್ ಝೋನ್ ಎಂದು ಜಿಲ್ಲಾಡಳಿತ ಘೋಷಣೆ ಮಾಡಿದೆ.
ದೀನಬಂಧು ಆಶ್ರಮವನ್ನು ಚಾಮರಾಜನಗರದಲ್ಲಿ ರಾಷ್ಟ್ರಕವಿ ಡಾ.ಜಿ.ಎಸ್ ಶಿವರುದ್ರಪ್ಪ ಅವರ ಪುತ್ರ ಪ್ರೋ.ಜಿ.ಎಸ್ ಜಯದೇವ್ ಅವರು ನಡೆಸುತ್ತಿದ್ದು, ಇದೀಗ ಇಲ್ಲಿ ಆಶ್ರಯ ಪಡೆದಿರುವ 30 ಮಕ್ಕಳಿಗೆ ಕೊರೊನಾ ದೃಢಪಟ್ಟಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಇತ್ತ ಧಾವಿಸಿರುವ ಆರೋಗ್ಯ ಇಲಾಖೆಯ ಸಿಬ್ಬಂದಿ ತೀವ್ರ ನಿಗಾವಹಿಸಿದ್ದಾರೆ.
ಸದ್ಯ ದೀನಬಂಧು ಶಾಲೆಯನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದ್ದು, ಪಾಸಿಟಿವ್ ಬಂದಿರುವ ಮಕ್ಕಳಲ್ಲಿ ಎ ಸಿಂಪ್ಟಮ್ಯಾಟಿಕ್ ಲಕ್ಷಣಗಳು ಕಾಣಿಸಿಕೊಂಡಿದೆ. ಆಶ್ರಮದಲ್ಲಿ ಒಟ್ಟು 70 ಮಕ್ಕಳಿದ್ದು, 30 ಮಂದಿಗೆ ಪಾಸಿಟಿವ್ ಆಗಿದೆ. ಪಾಸಿಟಿವ್ ಬಂದ ಮಕ್ಕಳನ್ನು ದೀನಬಂಧು ಶಾಲೆಗೆ ಕಳುಹಿಸಿ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 40 ಮಕ್ಕಳನ್ನು ದೀನಬಂಧು ಆಶ್ರಮದಲ್ಲೇ ಕ್ವಾರಂಟೈನ್ ಮಾಡಲಾಗಿದೆ.
ಇದೀಗ ದೀನಬಂಧು ಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ ಮಕ್ಕಳಿಗೆ ಆರೈಕೆ ಮಾಡಲಾಗುತ್ತಿದ್ದು, ಸಂಸ್ಥೆಯಿಂದ ನರ್ಸ್ಗಳ ನೇಮಕಾತಿ ಕೂಡ ನಡೆಸಲಾಗಿದೆ. ಸರ್ಕಾರಿ, ಖಾಸಗಿ ವೈದ್ಯರಿಂದ ಮಕ್ಕಳಿಗೆ ಚಿಕಿತ್ಸೆ ಕೊಡಿಸುವುದರೊಂದಿಗೆ ಮಕ್ಕಳ ಆರೋಗ್ಯದತ್ತ ನಿಗಾವಹಿಸಲಾಗುತ್ತಿದೆ.
Recommended Video