ಚಾಮರಾಜನಗರದ ಚೆಕ್ ಪೋಸ್ಟ್ನಲ್ಲಿ ಸಪ್ತಪದಿ ತುಳಿದ ವಧು-ವರರು
ಚಾಮರಾಜನಗರ, ಏಪ್ರಿಲ್ 06: ಧರ್ಮಸ್ಥಳದಲ್ಲಿ ನಡೆಯಲು ನಿಶ್ಚಯವಾಗಿದ್ದ ತಮಿಳುನಾಡಿನ ಹುಡುಗ, ಕರ್ನಾಟಕದ ಹುಡುಗಿಯ ಮದುವೆ ಕೊರೊನಾ ಲಾಕ್ಡೌನ್ ನಿಂದಾಗಿ ಚಾಮರಾಜನಗರದ ಕರ್ನಾಟಕ- ತಮಿಳುನಾಡು ಗಡಿಭಾಗದ ಪುಣಜನೂರು ಚೆಕ್ಪೋಸ್ಟ್ನಲ್ಲಿ ನಡೆದಿದೆ. ಪೋಷಕರ ನೋವಿಗೆ ಸ್ಪಂದಿಸಿದ ಸ್ಥಳೀಯರು ತಾವೇ ಮುಂದು ನಿಂತು ಸರಳವಾಗಿ ಮದುವೆ ನಡೆಸಿದ್ದಾರೆ.
ಲಾಕ್ ಡೌನ್ :ಮೈಸೂರಿನಲ್ಲಿ ನೆರವೇರಿತು ಕ್ಷಣಾರ್ಧದ ಮದುವೆ
ಹಾಸನ ಜಿಲ್ಲೆ ಆಲೂರು ತಾಲೂಕಿನ ಎನ್.ಆರ್. ಪುರ ಗ್ರಾಮದ ಉಷಾ ಹಾಗೂ ತಮಿಳುನಾಡಿನ ಮೆಟ್ಟೂರಿನ ಕಾರ್ಮಡೆ ಗ್ರಾಮದ ಅರವಿಂದ್ ಅವರ ಮದುವೆ ನಿನ್ನೆ ಧರ್ಮಸ್ಥಳದಲ್ಲಿ ನಡೆಯಲು ನಿಶ್ಚಯವಾಗಿತ್ತು. ಇವರಿಬ್ಬರೂ ದೂರದ ಸಂಬಂಧಿಗಳಾಗಿದ್ದು, ಎರಡು ಮನೆ ಕಡೆಯವರು ಧರ್ಮಸ್ಥಳದಲ್ಲಿ ಸರಳವಾಗಿ ಮದುವೆ ಮಾಡಲು ತೀರ್ಮಾನ ಮಾಡಿದ್ದರು. ಆದರೆ ಧರ್ಮಸ್ಥಳಕ್ಕೆ ಹೋಗಲು ಪುಣಜನೂರು ಚೆಕ್ಪೋಸ್ಟ್ ಬಳಿ ವರನ ಕುಟುಂಬದವರು ಬಂದಾಗ ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ತಮಿಳುನಾಡಿನಿಂದ ಕರ್ನಾಟಕ ಪ್ರವೇಶಿಸಲು ಪುಣಜನೂರು ಚೆಕ್ಪೋಸ್ಟ್ ಬಳಿ ನಿರ್ಬಂಧ ಹೇರಲಾಗಿತ್ತು. ವಿಷಯ ತಿಳಿದ ವಧುವಿನ ಪೋಷಕರು ತಮಿಳುನಾಡಿಗೆ ಹೋಗಿ ಮದುವೆ ಮಾಡಿಸೋಣ ಎಂದು ಚಾಮರಾಜನಗರದ ಬಾಣಹಳ್ಳಿ ಚೆಕ್ ಪೋಸ್ಟ್ ಬಳಿ ಬಂದಿದ್ದರು. ಇಲ್ಲೂ ವಧುವಿನ ಕಡೆಯವರಿಗೆ ತಮಿಳುನಾಡಿಗೆ ತೆರಳಲು ಪೊಲೀಸರು ನಿರ್ಬಂಧ ಹೇರಿದ್ದರು.
ಇದರಿಂದ ಏ.4ರ ಶನಿವಾರ ರಾತ್ರಿಯೆಲ್ಲ ಚೆಕ್ಪೋಸ್ಟ್ ಬಳಿ ವಧು ಹಾಗೂ ಆಕೆಯ ಕುಟುಂಬದವರು ಕಾಲ ಕಳೆದಿದ್ದರು. ಇತ್ತ ಪುಣಜನೂರು ಚೆಕ್ಪೋಸ್ಟ್ ಬಳಿ ವರನ ಕಡೆಯವರು ಸಿಲುಕಿಕೊಂಡಿದ್ದರು. ಇವರ ಪರಿಸ್ಥಿತಿ ನೋಡಿದ ಸ್ಥಳೀಯರು ನವ ವಧು-ವರರಾದ ಉಷಾ ಹಾಗೂ ಅರವಿಂದ್ ಅವರ ಮದುವೆಯನ್ನು ಸ್ಥಳೀಯ ಗಣಪತಿ ದೇವಸ್ಥಾನದಲ್ಲಿ ಮಾಡಿಸಲು ಮುಂದಾಗಿದ್ದಾರೆ.
ಕೊರೊನಾ ಎಮರ್ಜೆನ್ಸಿ ನಡುವೆ ಬಳ್ಳಾರಿಯಲ್ಲಿ ಲವ್ ಮ್ಯಾರೇಜ್
ಅಲ್ಲದೆ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರ ಗಮನಕ್ಕೆ ತಂದಿದ್ದು, ಎಲ್ಲರ ಸಹಕಾರದಲ್ಲಿ ಇತ್ತ ಬಾಣಹಳ್ಳಿ ಚೆಕ್ಪೋಸ್ಟ್ ಬಳಿಯಿದ್ದ ವಧುವನ್ನು ವರನಿದ್ದ ಪುಣಜನೂರು ಚೆಕ್ ಪೋಸ್ಟ್ ಬಳಿಗೆ ಕರೆ ತಂದು ಎಲ್ಲರೂ ಸೇರಿ ಪುಣಜನೂರು ಚೆಕ್ ಪೋಸ್ಟ್ ಬಳಿಯಿದ್ದ ಗಣಪತಿ ದೇವಾಲಯಕ್ಕೆ ತೆರಳಿ ಗುರು ಹಿರಿಯರ ಸಮ್ಮುಖದಲ್ಲಿ ಸರಳವಾಗಿ ವಿವಾಹ ಮಾಡಿಸಿ ಮುಗಿಸಿದ್ದಾರೆ.
ಕೊನೆಗೂ ಕೊರೊನಾ ಎಫೆಕ್ಟ್ ನಿಂದ ನಿಂತು ಹೋಗುತ್ತಿದ್ದ ಮದುವೆಯೊಂದು ಪುಣಜೂರು ಗ್ರಾಮಸ್ಥರ ಕಾಳಜಿಯಿಂದ ನಡೆದಿದೆ. ವಿವಾಹವಾದ ಬಳಿಕ ವಧು- ವರರು ತಮಿಳುನಾಡಿಗೆ ಹೋದರೆ, ಇತ್ತ ವಧುವಿನ ಪೋಷಕರು ತಮ್ಮ ಊರು ಹಾಸನಕ್ಕೆ ತೆರಳಿದ್ದಾರೆ.