ಮಲೆ ಮಹಾದೇಶ್ವರ ಜಾತ್ರಾ ಮಹೋತ್ಸವಕ್ಕೂ ತಟ್ಟಿದ ಕೊರೊನಾ ಬಿಸಿ
ಕರ್ನಾಟಕ, ಮಾರ್ಚ್ 16: ವಿಶ್ವದಾದ್ಯಂತ ತಲ್ಲಣ ಸೃಷ್ಟಿಸಿರುವ ಕೊರೊನಾ ವೈರಸ್ ಬಿಸಿ ಚಾಮರಾಜನಗರದಲ್ಲಿ ನಡೆಯುವ ಮಲೆ ಮಹಾದೇಶ್ವರ ಜಾತ್ರಾ ಮಹೋತ್ಸವಕ್ಕೂ ತಟ್ಟಿದೆ.
ಇದೇ ತಿಂಗಳು ಅಂದ್ರೆ ಮಾರ್ಚ್ 22 ರಿಂದ 27 ರವರಿಗೆ ಚಾಮರಾಜನಗರ ಜಿಲ್ಲೆಯ ಮಲೆಮಹಾದೇಶ್ವರ ದೇವಾಲಯದಲ್ಲಿ ಯುಗಾದಿ ಜಾತ್ರೆ ನಡೆಯಲಿದೆ. ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿರುವ ಈ ಜಾತ್ರೆ ಈ ಬಾರಿ ಸರಳವಾಗಿ ನಡೆಯಲಿದೆ ಎಂದು ಚಾಮರಾಜನಗರ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ತಿಳಿಸಿದರು
ಕೊರೊನಾ ಭೀತಿ: ವೈಷ್ಣೋದೇವಿ ದರ್ಶನಕ್ಕೆ ನಿರ್ಬಂಧ
ಇವತ್ತು ವಿಧಾನಸೌಧದಲ್ಲಿ ಮಾತನಾಡಿದ ಸುರೇಶ್ ಕುಮಾರ್, ''ಕೊರೊನಾ ವೈರಸ್ ಸೋಂಕಿನ ಹಿನ್ನಲೆಯಲ್ಲಿ ಜಾತ್ರೆಯನ್ನು ಸರಳವಾಗಿ ನಡೆಸಲು ತೀರ್ಮಾನಿಸಲಾಗಿದೆ. ಜಾತ್ರೆ ವೇಳೆ ಅನೇಕ ಮಂದಿ ರಸ್ತೆ ಬದಿಗಳಲ್ಲಿ ಮಲಗುತ್ತಾರೆ. ಈ ಬಾರಿ ಜಾತ್ರೆಯನ್ನು ಅತ್ಯಂತ ಸರಳ ರೀತಿ ಮಾಡುವುದರಿಂದ ರಸ್ತೆ ಬದಿ ಮಲಗುವ ವ್ಯವಸ್ತೆ ಮಾಡುವುದಿಲ್ಲ''
''ಯಾತ್ರಿ ನಿವಾಸ ಸೇರಿ ವಿವಿಧ ಕಟ್ಟಡಗಳಲ್ಲಿನ ಕೊಠಡಿಗಳನ್ನು ಭಕ್ತರಿಗೆ ನೀಡಬಾರದು ಎಂದು ಸೂಚನೆ ನೀಡಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು'' ಎಂದು ಮನವಿ ಮಾಡಿಕೊಂಡರು.