ಗುಂಡ್ಲುಪೇಟೆಯಲ್ಲಿ ಬಸ್ಗಳಿಗೆ ಡೆಟಾಲ್ ಸ್ಪ್ರೇ
ಚಾಮರಾಜನಗರ, ಮಾರ್ಚ್ 19: ದೇಶಾದ್ಯಂತ ಕೊರೊನಾ ವೈರಸ್ ಕೋಲಾಹಲ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಗಡಿ ತಾಲೂಕು ಗುಂಡ್ಲುಪೇಟೆನಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದ್ದು, ಸಾರಿಗೆ ಬಸ್ಗಳಿಗೆ ಡೆಟಾಲ್ ಸಿಂಪಡಣೆ ಮಾಡಲಾಗುತ್ತಿದೆ.
ತಹಶೀಲ್ದಾರ್ ಎಂ.ನಂಜುಂಡಯ್ಯ ಕೆಎಸ್ ಆರ್ಟಿಸಿ ಡಿಪೋಗೆ ಖುದ್ದು ಭೇಟಿ ನೀಡಿ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸ್ವಚ್ಛತೆ ಬಗ್ಗೆ ಸೂಚನೆ ನೀಡಿದ್ದು, ಅವರ ಸೂಚನೆಯಂತೆ ಡಿಪೋದಲ್ಲಿ ಬಸ್ಗಳ ಒಳಭಾಗವನ್ನು ಡೆಟಾಲ್ ಹಾಕಿ ಸ್ವಚ್ಛಗೊಳಿಸಲಾಗುತ್ತಿದೆ. ಡೆಟಾಲನ್ನು ಬಸ್ಗಳಲ್ಲಿ ಪ್ರಯಾಣಿಕರು ಹಿಡಿದುಕೊಳ್ಳುವ ಕಂಬಿ, ಮೇಲಿನ ಕಂಬಿ, ಸೀಟಿನ ಹಿಡಿಕೆ ಸೀಟಿನ ಮೇಲಿನ ಕಂಬಿಗಳು, ಕಿಟಕಿಯ ಗಾಜುಗಳು ಹೀಗೆ ಎಲ್ಲ ಕಡೆ ಸ್ಪ್ರೇ ಮಾಡಿ ಸ್ವಚ್ಛಗೊಳಿಸಲಾಗುತ್ತಿದೆ.
ಜಪಾನ್ನಿಂದ ಬಂದ ಟೆಕ್ಕಿ ನೋಡಿ ಗಾಬರಿಯಾದ ಯಡಕುರಿಯ ಗ್ರಾಮಸ್ಥರು
ಡಿಪೋಗಳಿಗೆ ಹೊರಗಿನಿಂದ ಬರುವ ಹಾಗೂ ಹೊರಗೆ ಹೋಗುವ ಎಲ್ಲ ಬಸ್ಗಳನ್ನು ಸ್ವಚ್ಛಗೊಳಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದಾದ ಬಳಿಕ ಬಸ್ಗಳ ಹೊರಭಾಗವನ್ನು ಸೋಪಿನ ನೀರಿನಿಂದ ಸ್ವಚ್ಛಗೊಳಿಸಿ ಆಯಾ ಮಾರ್ಗಗಳಿಗೆ ಕಳುಹಿಸಲಾಗುತ್ತಿದೆ. ನೆರೆಯ ಕೇರಳ ರಾಜ್ಯದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿರುವುದರಿಂದ ನಮ್ಮ ರಾಜ್ಯಕ್ಕೂ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಪ್ರತಿ ನಿತ್ಯ ಬಸ್ಗಳನ್ನು ಡೆಟಾಲ್ ನಿಂದ ಸಿಂಪಡಿಸಿ ಅಚ್ಚುಕಟ್ಟಾಗಿ ತೊಳೆಯಲಾಗುತ್ತಿದೆ.
ಗುಂಡ್ಲುಪೇಟೆ ಕೆಎಸ್ ಆರ್ ಟಿಸಿ ಬಸ್ ಡಿಪೋ ಮ್ಯಾನೇಜರ್ ಜಯಕುಮಾರ್ ಮಾತನಾಡಿ, ಹಲವಾರು ಬಸ್ಗಳು ನೆರೆಯ ಆಂಧ್ರಪ್ರದೇಶ, ಕೇರಳ ಹಾಗೂ ತಮಿಳುನಾಡಿಗೆ ಹೋಗಿ ಬರುತ್ತಿವೆ. ಕರ್ನಾಟಕ ಹಾಗೂ ಈ ಮೂರು ರಾಜ್ಯಗಳ ನಡುವೆ ಪ್ರತಿದಿನ ನೂರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಇದರ ಜೊತೆಗೆ ಕೇರಳದಲ್ಲಿ ಕೊರೊನಾ ಪ್ರಕರಣಗಳು ಸಹ ಕಂಡು ಬಂದಿವೆ. ಈ ಹಿನ್ನಲೆಯಲ್ಲಿ ಬಸ್ಗಳನ್ನು ಡೆಟಾಲ್ ನಿಂದ ಸ್ವಚ್ಛಗೊಳಿಸುವ ಮೂಲಕ ಭಾರೀ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಎಂದು ತಿಳಿಸಿದರು.