ಮಲೆ ಮಹದೇಶ್ವರ ಜಾತ್ರೆಗೂ ತಟ್ಟಿದ ಕೊರೊನಾ ಭೀತಿ
ಚಾಮರಾಜನಗರ: ಕೊರೊನಾ ವೈರಸ್ ಭೀತಿ ಜಾತ್ರೆಗಳಿಗೂ ತಟ್ಟಿದೆ. ಕೊರೊನಾ ವೈರಸ್ ಮಲೆ ಮಹದೇಶ್ವರ ಜಾತ್ರೆಯ ಆಚರಣೆಗೆ ಮೇಲೆ ಪರಿಣಾಮ ಬೀರಿದೆ. ಪ್ರತಿ ವರ್ಷ ಅದ್ದೂರಿಯಾಗಿ ನಡೆಯುತ್ತಿದ್ದ ಜಾತ್ರೆ ಈ ಬಾರಿ ಸರಳವಾಗಿ ನೆರವೇರಲಿದೆ.
ಚಾಮರಾಜನಗರ ಜಿಲ್ಲೆಯ, ಹನೂರು ತಾಲೂಕಿನ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಯುಗಾದಿ ಹಬ್ಬದ ವಿಶೇಷವಾಗಿ ಜಾತ್ರೆ ಮಹೋತ್ಸವ ನಡೆಯುತ್ತಿತ್ತು. ಈ ವರ್ಷ ಮಾರ್ಚ್ ತಿಂಗಳ 21 ರಿಂದ 25ರವರೆಗೆ ಜಾತ್ರೆಯನ್ನು ಆಯೋಜನೆ ಮಾಡಲಾಗಿತ್ತು.
ಕೊರೊನಾ ಭೀತಿ: ವೈಷ್ಣೋದೇವಿ ದರ್ಶನಕ್ಕೆ ನಿರ್ಬಂಧ
ಆದರೆ, ಈ ಬಾರಿಯ ಜಾತ್ರೆಗೆ ಕೊರೊನಾ ವೈರಸ್ ಬೀತಿ ಇದ್ದು, ಹೆಚ್ಚು ಜನ ಸೇರಲು ಅವಕಾಶ ನೀಡಿಲ್ಲ. ಸರಳವಾಗಿ ಆಚರಣೆ ಮಾಡಲು ಮಲೆ ಮಹದೇಶ್ವರ ಬೆಟ್ಟದ ಅಭಿವೃದ್ದಿ ಪ್ರಾಧಿಕಾರ ತೀರ್ಮಾನ ಮಾಡಿದೆ. ಈ ಬಗ್ಗೆ ಭಕ್ತಾದಿಗಳಲ್ಲಿ ಮನವಿ ಮಾಡಿದೆ.
ವೈರಸ್ ಹರಡುವ ಹಿನ್ನಲೆಯಲ್ಲಿ ಬರುವ ಭಕ್ತಾದಿಗಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಭಕ್ತಾದಿಗಳು ದೇವಸ್ಥಾನದಲ್ಲಿ ಉಳಿದುಕೊಳ್ಳಲು ವಸತಿ ಗೃಹಗಳನ್ನು ನೀಡದೆ ಇರಲು ನಿರ್ಧಾರಿಸಲಾಗಿದೆ. ದೇವಸ್ಥಾನದ ಆವರಣಗಳಲ್ಲಿ ಟೆಂಟ್ ಹಾಕಲು ಅವಕಾಶ ನೀಡುತ್ತಿಲ್ಲ. ಈ ವಿಷಯವಾಗಿ ಭಕ್ತಾದಿಗಳಿಗೆ ಸಹಕರಿಸಲು ಮಲೆ ಮಹದೇಶ್ವರ ಬೆಟ್ಟದ ಅಭಿವೃದ್ದಿ ಪ್ರಾಧಿಕಾರ ಕಾರ್ಯದರ್ಶಿ ಜೈವಿಭವಸ್ವಾಮಿ ತಿಳಿಸಿದ್ದಾರೆ.