ಪರೀಕ್ಷಾ ಕೇಂದ್ರದಿಂದ ಕೊರೊನಾ: ಸುರೇಶ್ ಕುಮಾರ್ ಸ್ಪಷ್ಟನೆ
ಚಾಮರಾಜನಗರ, ಜೂನ್ 29: ಪರೀಕ್ಷಾ ಕೇಂದ್ರದಿಂದ ವಿದ್ಯಾರ್ಥಿಗೆ ಕೊರೊನಾ ಬಂದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಚಾಮರಾಜನಗರದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಎಸ್ಎಸ್ಎಲ್ಸಿ ವಿದ್ಯಾರ್ಥಿಗೆ ಕಂಡು ಬಂದಿರುವ ಕೊರೊನಾ ಸೋಂಕು ಪರೀಕ್ಷಾ ಕೇಂದ್ರದಿಂದ ಬಂದಿರುವ ಸೋಂಕಲ್ಲ. ಹಾಸನದ ಎಸ್ಎಸ್ಎಲ್ಸಿ ವಿದ್ಯಾರ್ಥಿಯೊಬ್ಬನಿಗೆ ಡೆಂಗ್ಯೂ ಚಿಕಿತ್ಸೆ ವೇಳೆ ಆತನ ಗಂಟಲ ದ್ರವವನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿತ್ತು. ಆ ವಿದ್ಯಾರ್ಥಿ ಪರೀಕ್ಷೆ ಬರೆಯುವ ವೇಳೆ ಕೊರೊನಾ ಪಾಸಿಟಿವ್ ಎಂದು ವರದಿ ಘೋಷಣೆಯಾಗಿತ್ತು ಎಂದು ತಿಳಿಸಿದ್ದಾರೆ.
ಬಳ್ಳಾರಿ, ಉಡುಪಿಯಲ್ಲಿ SSLC ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು
ಪಾಸಿಟಿವ್ ಬಂದ ಬಳಿಕ ಆತನೊಂದಿಗೆ ಪರೀಕ್ಷೆ ಬರೆದಿದ್ದ 19 ವಿದ್ಯಾರ್ಥಿಗಳ ಗಂಟಲ ದ್ರವವನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಈಗ ಅದು ಸಹ ನೆಗೆಟಿವ್ ಎಂದು ಬಂದಿದೆ. ಇದರಿಂದ ಯಾರು ಸಹ ಆತಂಕಪಡುವ ಅಗತ್ಯವಿಲ್ಲ ಎಂದು ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ.
ತಜ್ಞರ ಸಲಹೆಯಂತೆ ಪರೀಕ್ಷಾ ಕೇಂದ್ರಗಳಲ್ಲಿ ಸುರಕ್ಷತಾ ಕ್ರಮವನ್ನು ಕೈಗೊಳ್ಳಲಾಗಿದೆ. ಮಕ್ಕಳ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ ಯಾವುದೇ ಮಕ್ಕಳ ಮೇಲೂ ಏನು ಸಮಸ್ಯೆಯಾಗದ ರೀತಿಯಲ್ಲಿ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಈಗಾಗಲೇ ಎರಡು ದಿನ ಪರೀಕ್ಷೆಗಳನ್ನು ಮುಗಿಸಿದ್ದೇವೆ ಎಂದಿದ್ದಾರೆ.
ಇನ್ನು ಉಳಿದ ದಿನಗಳು ಕೂಡ ಎಲ್ಲ ಪರೀಕ್ಷೆಗಳನ್ನು ಸುರಕ್ಷತಾ ಕ್ರಮಗಳನ್ನು ಕೈಗೊಂಡು ನಡೆಸುತ್ತೇವೆ. ಎಂದು ಚಾಮರಾಜನಗರದಲ್ಲಿ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.