ಸರ್ಕಾರಿ ಜಾಹೀರಾತಿನಿಂದ ಗೊಂದಲಕ್ಕೀಡಾದ ಚಾಮರಾಜನಗರ ಜನ
ಚಾಮರಾಜನಗರ, ಜೂನ್ 22: ಕೋವಿಡ್-19 ಜಾಗೃತಿಗಾಗಿ ಚಾಮರಾಜನಗರದ ವಿವಿಧೆಡೆ ಕಟೌಟ್ ಹಾಕಿದ್ದು, ಅದರಲ್ಲಿ ದೊಡ್ಡ ಎಡವಟ್ಟಾಗಿದೆ. ಜ್ವರ, ಹಾಗೂ ನೆಗಡಿ ಇದ್ದವರು ಮಾತ್ರ ಮಾಸ್ಕ್ ಧರಿಸಿ ಎಂಬ ಒಕ್ಕಣೆ ಇದೆ.
ಕೆಮ್ಮು, ನೆಗಡಿ ಇದ್ದರೆ ಮಾತ್ರ ಮಾಸ್ಕ್ ಧರಿಸಿ ಎಂದಿರುವ ಸರ್ಕಾರಿ ಜಾಹೀರಾತು ಗಡಿ ಜಿಲ್ಲೆ ಜನರಲ್ಲಿ ಗೊಂದಲ ಮೂಡಿಸಿದೆ. ಕೊರೊನಾ ವೈರಸ್ ಜಾಗೃತಿಗಾಗಿ ತಾಲೂಕು ಕಚೇರಿ, ಜಿಲ್ಲಾಸ್ಪತ್ರೆ, ತಾಲೂಕು ಕೇಂದ್ರಗಳಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಕಟೌಟ್ ಅಳವಡಿಸಲಾಗಿದೆ.
ಚಾಮರಾಜನಗರಕ್ಕೂ ಕಾಲಿಟ್ಟ ವೈರಸ್; ಲಾರಿ ಚಾಲಕನಿಗೆ ಬಂತು ಕೊರೊನಾ
ನಿಯಮದ ಪ್ರಕಾರ ಸಾರ್ವಜನಿಕ ಸ್ಥಳಕ್ಕೆ ಬರುವಾಗ ಎಲ್ಲರೂ ಮಾಸ್ಕ್ ಧರಿಸಬೇಕಾಗಿದೆ. ಮಾಸ್ಕ್ ಧರಿಸದಿದ್ದರೆ ನಗರಸಭೆಯವರಿಂದ 200 ರೂಪಾಯಿ ದಂಡ ವಿಧಿಸಲಾಗುತ್ತಿದೆ. ಆದರೆ, ಜಾಹೀರಾತಿನಲ್ಲಿ ಜ್ವರ, ಕೆಮ್ಮು ಹಾಗೂ ನೆಗಡಿ ಇದ್ದರೇ ಮಾತ್ರ ಮಾಸ್ಕ್ ಧರಿಸಿ ಎಂದಿರುವುದು ಜನರಲ್ಲಿ ಗೊಂದಲ ಮೂಡಿಸಿದೆ.
ನಗರಸಭೆ ಹಾಗೂ ಕೊರೊನಾ ವಾರಿಯರ್ಸ್ ಜನರಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಅರಿವು ಮೂಡಿಸುತ್ತಿದೆ. ಆದರೆ, ಈ ಕಟೌಟ್ ಓದಿದವರು ಅರಿವು ಮೂಡಿಸುತ್ತಿರುವ ಅಧಿಕಾರಿಗಳಿಗೆ ವಿರುದ್ಧ ತಿರುಗಿ ಬೀಳುತ್ತಿದ್ದಾರೆ. ಜ್ವರ, ಕೆಮ್ಮು ಇದ್ದವರು ಮಾತ್ರ ಮಾಸ್ಕ್ ಧರಿಸಿ ಎಂದು ಸರ್ಕಾರವೇ ಹೇಳುತ್ತಿದೆ ಎಂದು ತಗಾದೆ ತೆಗೆಯುತ್ತಿದ್ದಾರೆ.
ಸರ್ಕಾರದ ಜಾಹೀರಾತಿನಲ್ಲೆ ಈ ಸಂದೇಶವಿರುವುದರಿಂದ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯಲ್ಲಿ ಭಾರಿ ಗೊಂದಲಕ್ಕೆ ಕಾರಣವಾಗಿದೆ.