ವೀರಪ್ಪನ್ ಕ್ರೌರ್ಯ ಮೆರೆದಿದ್ದ ಪೊಲೀಸ್ ಠಾಣೆ ಸ್ಮಾರಕ ಮಾಡಲು ಸಚಿವ ಪತ್ರ
ಚಾಮರಾಜನಗರ, ಫೆಬ್ರವರಿ 13: ವೀರಪ್ಪನ್ ಅಟ್ಟಹಾಸಕ್ಕೆ ಕುರುಹಾಗಿ ನಿಂತಿರುವ ಚಾಮರಾಜನಗರದ ರಾಮಾಪುರ ಪೊಲೀಸ್ ಠಾಣೆಯನ್ನು ಸ್ಮಾರಕ ಮಾಡುವಂತೆ ಸಚಿವ ಸುರೇಶ್ ಕುಮಾರ್ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸುರೇಶ್ ಕುಮಾರ್ ಅವರು ಎರಡು ದಿನದ ಹಿಂದೆ ಚಾಮರಾಜನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಮಾಪುರ ಪೊಲೀಸ್ ಠಾಣೆಗೂ ಭೇಟಿ ನೀಡಿದ್ದರು.
1991 ಮೇ 21 ರಂದು ಚಾಮರಾಜನಗರದ ರಾಮಾಪುರ ಪೊಲೀಸ್ ಠಾಣೆಯ ಮೇಲೆ ವೀರಪ್ಪನ್ ಗುಂಡಿನ ಸುರಿಮಳೆಯನ್ನೇ ಸುರಿಸಿದ್ದ, ಈ ಘಟನೆಯಲ್ಲಿ ಐದು ಮಂದಿ ಪೊಲೀಸರು ಮೃತರಾಗಿದ್ದರು.
ರಾಮಾಪುರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಸುರೇಶ್ ಕುಮಾರ್, ಪೊಲೀಸ್ ಅಧಿಕಾರಗಳಿಂದ ಅಂದಿನ ಘಟನೆಯ ಬಗ್ಗೆ ಮಾಹಿತಿ ಪಡೆದರು. ಅಗಲಿದ ಪೊಲೀಸ್ ಅಧಿಕಾರಿಗಳ ಆತ್ಮಕ್ಕೆ ಶಾಂತಿಯನ್ನು ಕೋರಿದರು.
ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿರುವ ಸುರೇಶ್ ಕುಮಾರ್, ರಾಮಾಪುರ ಪೊಲೀಸ್ ಠಾಣೆಯನ್ನು ಸ್ಮಾರಕವನ್ನಾಗಿಸಿದರೆ ಅಗಲಿದ ಪೊಲೀಸರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಜೊತೆಗೆ ಪೊಲೀಸರ ಧೈರ್ಯ ಸಾಹಸಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿ ಹೇಳಿದಂತಾಗುತ್ತದೆ ಎಂದಿದ್ದಾರೆ.