ಸಾಲೂರು ಮಠದ ಉತ್ತರಾಧಿಕಾರಿ ನೇಮಕ ವಿವಾದ: ತಡೆಯಾಜ್ಞೆ ರದ್ದುಗೊಳಿಸಿದ ನ್ಯಾಯಾಲಯ
ಚಾಮರಾಜನಗರ, ಆಗಸ್ಟ್ 04: ಚಾಮರಾಜನಗರ ಜಿಲ್ಲೆ ಸಾಲೂರು ಮಠದಿಂದ ತಮ್ಮ ಉಚ್ಚಾಟನೆ ಮತ್ತು ಬದಲಿ ಉತ್ತರಾಧಿಕಾರಿ ನೇಮಕ ಸಂಬಂಧ ಸುಳ್ವಾಡಿ ವಿಷ ಪ್ರಸಾದ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಪಡೆದಿದ್ದ ತಾತ್ಕಾಲಿಕ ನಿರ್ಬಂಧ ತಡೆಯಾಜ್ಞೆಯನ್ನು ಕೊಳ್ಳೇಗಾಲ ಸಿವಿಲ್ ನ್ಯಾಯಾಲಯ ರದ್ದುಗೊಳಿಸಿದೆ.
ಸುಳ್ವಾಡಿ ವಿಷ ಪ್ರಸಾದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಇಮ್ಮಡಿ ಮಹದೇವಸ್ವಾಮಿ, ಸಾಲೂರು ಬೃಹನ್ಮಠದ ಕಿರಿಯ ಶ್ರೀಗಳಾಗಿದ್ದರು. ವಿಷ ಪ್ರಸಾದ ಪ್ರಕರಣದ ಬಳಿಕ ಸಾಲೂರು ಮಠದಿಂದ ಉಚ್ಚಾಟನೆಗೊಂಡಿದ್ದರು. ಬೃಹನ್ಮಠದ ಭಕ್ತ ಮಂಡಳಿ, ರಾಜ್ಯದ 20 ಹಳ್ಳಿಗಳು ಮತ್ತು ತಮಿಳುನಾಡಿನ 33 ಹಳ್ಳಿಗಳ ಬೇಡಗಂಪಣ ಮುಖಂಡರು ಸಭೆ ನಡೆಸಿ ಕಿರಿಯ ಶ್ರೀಗಳನ್ನು ಉಚ್ಚಾಟನೆ ಮಾಡಲು ತೀರ್ಮಾನ ಕೈಗೊಂಡಿದ್ದರು.
ಭಾನುವಾರವೂ ಮಲೆ ಮಾದೇಶ್ವರನ ದರ್ಶನ ಪಡೆಯಿರಿ
ಆ ಬಳಿಕ ಇಮ್ಮಡಿ ಮಹದೇವಸ್ವಾಮಿಯು ತನ್ನನ್ನು ಮಠದಿಂದ ಉಚ್ಛಾಟನೆ ಮಾಡುತ್ತಾರೆ ಮತ್ತು ಬದಲಿ ಉತ್ತರಾಧಿಕಾರಿ ನೇಮಕ ಮಾಡಲಿದ್ದಾರೆ ಎಂಬುದನ್ನು ಅರಿತು 2019 ರ ಆಗಸ್ಟ್ 28 ರಂದು ಕೊಳ್ಳೇಗಾಲ ಸಿವಿಲ್ ನ್ಯಾಯಾಲಯದಲ್ಲಿ ತಾತ್ಕಾಲಿಕ ನಿರ್ಬಂಧ ತಡೆಯಾಜ್ಞೆಯನ್ನು ಪಡೆದಿದ್ದರು.
ಬಳಿಕ ನ್ಯಾಯಾಲಯದ ತಡೆಯಾಜ್ಞೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ಇದೀಗ ಕೊಳ್ಳೇಗಾಲ ಸಿವಿಲ್ ನ್ಯಾಯಾಲಯವು ಈ ಪ್ರಕರಣವು ತಮ್ಮ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂಬ ಅಂಶವನ್ನು ಪರಿಗಣಿಸಿ ತಡೆಯಾಜ್ಞೆಯನ್ನು ತೆರವು ಮಾಡಿದೆ.
ಇತ್ತೀಚಿಗೆ ಸಾಲೂರು ಮಠಾಧ್ಯಕ್ಷ ಗುರುಸ್ವಾಮಿಗಳು ಅನಾರೋಗ್ಯಕ್ಕೀಡಾದ ಹಿನ್ನೆಲೆಯಲ್ಲಿ ಉತ್ತರಾಧಿಕಾರಿ ನೇಮಕ ವಿಚಾರ ಮುನ್ನೆಲೆಗೆ ಬಂದಿತ್ತು. ಉತ್ತರಾಧಿಕಾರಿ ನೇಮಕಕ್ಕೆ ಸಾಲೂರು ಮಠದ ಭಕ್ತ ವೃಂದ ಒಂಬತ್ತು ಜನರ ಸಮಿತಿಯನ್ನು ರಚಿಸಿದೆ.
ಚಾಮರಾಜನಗರ: ಕೊರೊನಾ ವೈರಸ್ ಗೆ ಆಯುಷ್ ವೈದ್ಯಾಧಿಕಾರಿ ಸಾವು
ಒಂಬತ್ತು ಜನರ ಸಮಿತಿ ಮುಂದಿನ ಪೀಠಾಧ್ಯಕ್ಷರನ್ನು ನೇಮಕ ಮಾಡಲಿದ್ದು, ತಡೆಯಾಜ್ಞೆ ತೆರವಿನಿಂದ ಇಮ್ಮಡಿ ಮಹದೇವಸ್ವಾಮಿ ಬಣಕ್ಕೆ ಹಿನ್ನಡೆಯಾದಂತಾಗಿದೆ. ಇಮ್ಮಡಿ ಮಹದೇವಸ್ವಾಮಿ ಜೈಲಿನಿಂದ ಬಿಡುಗಡೆಯಾಗಿ ಸಾಲೂರು ಮಠಾಧ್ಯಕ್ಷರಾಗಲು ಹುನ್ನಾರ ನಡೆಸಿದ್ದರು.
ಚಾಮರಾಜನಗರ ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಮಲೈ ಮಹದೇಶ್ವರ ಬೆಟ್ಟ ದ ಸಾಲೂರು ಮಠದ ಉತ್ತರಾಧಿಕಾರಿ ನೇಮಕಕ್ಕೆ ಎರಡು ಬಣಗಳು ಸಾಕಷ್ಟು ಸಭೆಗಳನ್ನು ನಡೆಸಿದ್ದವು. ಇದೀಗ ಉತ್ತರಾಧಿಕಾರಿ ನೇಮಕ ವಿವಾದ ಬಗೆಹರಿದಿದ್ದು, ಇಂದಿನಿಂದ ಚಟುವಟಿಕೆ ಗರಿಗೆದರಲಿವೆ.