ಎಲ್ಲ ವಿಷಯದಲ್ಲೂ ಕಾಂಗ್ರೆಸ್ ರಾಜಕೀಯ, ಮೊಸರಲ್ಲಿ ಕಲ್ಲು ಹುಡುಕುವ ಎಚ್ಡಿಕೆ: ನಾಗೇಶ್
ಚಾಮರಾಜನಗರ ಮೇ 25: ಪಠ್ಯ ಪರಿಷ್ಕರಣೆ ಸಮಿತಿ ರಚಿಸಿ 8 ತಿಂಗಳುಗಳಾಗಿದ್ದು, ಅಷ್ಟು ದಿನಗಳಿಂದ ಮಾತನಾಡದ ಕಾಂಗ್ರೆಸ್ ಈಗ ಅದನ್ನು ರಾಜಕಾರಣಕ್ಕಾಗಿ ಮತ್ತು ಹಿಂದೂಗಳನ್ನು ಒಡೆಯಲು ಬಳಸಿಕೊಳ್ಳುತ್ತಿದೆ. ದೇಶದಲ್ಲಿ 100 ವರ್ಷಗಳ ಇತಿಹಾಸವುಳ್ಳ ಕಾಂಗ್ರೆಸ್ ಪಕ್ಷ ಪಠ್ಯಪುಸ್ತಕದ ವಿಚಾರವನ್ನು ಮುಂದಿಟ್ಟುಕೊಂಡು ಇಂಥಹ ಕೀಳುಮಟ್ಟಕ್ಕಿಳಿದಿರುವುದು ಶೋಭೆ ತರುವಂತದಲ್ಲ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಕಿಡಿಕಾರಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ನಾಗೇಶ್, ಶಿಕ್ಷಣ ಇಲಾಖೆಯಲ್ಲಿ ಪುಸ್ತಕ ಸಿದ್ಧವಾಗುವುದಕ್ಕೆ ಮುಂಚೆಯೇ ಕಾಂಗ್ರೆಸ್ ಮಾತನಾಡಲು ಶುರು ಮಾಡಿದ್ದರು. ಅದರಲ್ಲಿ ಯಾವ ವಿಷಯಗಳಿವೆ, ಯಾವುದು ಇಲ್ಲ ಎನ್ನುವುದನ್ನು ತಿಳಿದುಕೊಳ್ಳದೇ ಆರೋಪ ಮಾಡಿದರು, 2016ರ ಟ್ವೀಟ್ ತೆಗೆದುಕೊಂಡು ರೋಹಿತ್ ಚಕ್ರತೀರ್ಥ ಅವರ ವಿರುದ್ಧ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಕೆಲವು ನಾಯಕರು ಟ್ವೀಟ್ ಮಾಡಿ ಆಟಿಟ್ಯೂಡ್ ತೋರಿಸುತ್ತಾರೆ. ಅಂತಹದ್ದೆಲ್ಲಾ ಈಗ ದೇಶದಲ್ಲಿ ನಡೆಯಲ್ಲ. ಅವರೆಷ್ಟು ಬದಲಾವಣೆ ಮಾಡಿದ್ದಾರೆಂಬುದು ಸಮಾಜಕ್ಕೆ ತಿಳಿದಿದೆ ಎಂದು ಸಿದ್ದರಾಮಯ್ಯ ಹೆಸರು ಹೇಳದೇ ಪರೋಕ್ಷವಾಗಿ ಟೀಕಿಸಿದರು.
ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ಗೆ ಸೋಲು
ಸದಾ ಮತಗಳ ಆಲೋಚಿಸುವ ಕಾಂಗ್ರೆಸ್ ಮೊದಲು ಟಿಪ್ಪುವಿನ ಪಠ್ಯದಿಂದ ಬಿಡಲಾಗುತ್ತಿದೆ ಎಂಬ ಸುದ್ದಿಯನ್ನು ತೆಗೆದುಕೊಂಡಿತ್ತು, ಕೈಬಿಟ್ಟಿಲ್ಲ ಎಂದು ಗೊತ್ತಾದ ನಂತರ ನಂತರ ಹಿಜಾಬ್ ವಿಚಾರ ತೆಗೆದುಕೊಂಡು ಕಾಂಗ್ರೆಸ್ ಫೇಲಾಯಿತು. ಕೊರೊನಾ ನಂತರ ಶಾಲಾರಂಭದ ಬಗ್ಗೆ ಕಾಂಗ್ರೆಸ್ ಟೀಕಿಸಿತು, ಆದರೆ ಇದರಲ್ಲೂ ಫೇಲಾಯಿತು. ನಂತರ ನಾರಾಯಣ ಗುರು ವಿಚಾರ, ನಂತರ ಎಂದೂ ರಾಷ್ಟ್ರೀಯವಾದದ ಬಗ್ಗೆ ಮಾತನಾಡದ ಕಾಂಗ್ರಸ್ ಭಗತ್ ಸಿಂಗ್ ಪಠ್ಯವನ್ನು ಬಿಡಲಾಗುತ್ತಿದೆ ಎಂದು ಟೀಕೆ ಮಾಡಿತು. ಯುಪಿ ಚುನಾವಣೆ ಬಳಿಕ ಕಾಂಗ್ರೆಸ್ ದೇಶದಲ್ಲಿ ಕಾಣೆಯಾಗುವ ಪರಿಸ್ಥಿತಿ ಇರುವುದರಿಂದ ಹತಾಷರಾಗಿ ಎಲ್ಲಾದರಲ್ಲೂ ರಾಜಕೀಯ ಮಾಡುತ್ತಿದ್ದಾರೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ವಿರೋಧ ಇದ್ಧೇ ಇರುತ್ತೆ
ಎಲ್ಲಾ ಕಾಲದಲ್ಲೂ ಪಠ್ಯ ಪರಿಷ್ಕರಿಸಿದಾಗ ಗೊಂದಲ, ವಿರೋಧ ಇದ್ದೇ ಇದೆ. ಆದರೆ, ತಾತ್ವಿಕ ಭಿನ್ನತೆ- ಚರ್ಚೆಗೆ ಅಭ್ಯಂತರವಿಲ್ಲ. ಇದನ್ನು ದೊಡ್ಡ ವಿಷಯವನ್ನಾಗಿ ತೆಗೆದುಕೊಂಡು ರಾಜಕೀಯಗೊಳಿಸುತ್ತಿರುವುದು ಸರಿಯಲ್ಲ, ಪಠ್ಯದ ವಿಚಾರ ಇಟ್ಟುಕೊಂಡು ಹಿಂದೂ ಸಮಾಜವನ್ನು ಕಾಂಗ್ರೆಸ್ ಒಡೆಯುವ ಯತ್ನ ಮಾಡುತ್ತಿದೆ, ವೈಚಾರಿಕವಾಗಿ ಏನೂ ಇಲ್ಲದಿದ್ದಾಗ ಪೊಳ್ಳು ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ಪಠ್ಯಕ್ಕೆ ತಮ್ಮ ಬರಹ ಸೇರಿಸಲು ಕೊಟ್ಟಿದ್ದ ಅನುಮತಿ ಹಿಂಪಡೆಯುವೆ ಎಂಬ ದೇವನೂರು ಮಹಾದೇವ ಹೇಳಿಕೆಗೆ ಪ್ರತಿಕ್ರಿಯಿಸಿ, ಈಗಾಗಲೇ, ಪಠ್ಯ ಮುದ್ರಣವಾಗಿ ವಿತರಿಸಲಾಗುತ್ತಿದೆ, ಅವರು ಯಾರ ಒತ್ತಡದಿಂದ ಈ ರೀತಿ ಅನುಮತಿ ನಿರಾಕರಿಸಿದ್ದಾರೆಂದು ಗೊತ್ತಿಲ್ಲ, ಅವರ ಬುದ್ಧಿವಂತಿಕೆ, ಹೋರಾಟದ ಬಗ್ಗೆ ಅಪಾರ ಕಳಕಳಿ ಇದ್ದು ಅವರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದರು.
ಮುದ್ರಣ ತಡವಾಗಲು ಯುದ್ದ ಕಾರಣ
ಉಕ್ರೇನ್-ರಷ್ಯಾ ಯುದ್ಧದಿಂದಾಗಿ ಪೇಪರ್ ಕೊರತೆ ಉಂಟಾಗಿದ್ದರ ಪರಿಣಾಮ ಪಠ್ಯ ಮುದ್ರಣ ತಡವಾಯಿತು ಎಂದು ಮಾಹಿತಿ ನೀಡಿದರು. ಪ್ರಸ್ತುತ ಶೇ.80 ಪಠ್ಯ ಸಿದ್ಧವಾಗಿದೆ. ಇನ್ನೂ ಒಂದು ತಿಂಗಳು ಅವಕಾಶವಿದೆ, ಈಗ ಶಾಲೆಗಳಲ್ಲಿ ಕಲಿಕಾ ಚೇತರಿಕೆ ನಡೆಯುತ್ತಿದ್ದು ಪಾಠ ಆರಂಭಿಸ ಇನ್ನೂ ಸಮಯವಿದೆ. ಶೀಘ್ರ ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುವ ಪ್ರಯತ್ನದಲ್ಲಿದ್ದೇವೆ ಎಂದು ತಿಳಿಸಿದರು.
ಕುಮಾರಸ್ವಾಮಿಗೆ ತಿರುಗೇಟು
ಮಳಲಿ ಮಂದಿರದ ತಾಂಬೂಲ ಪ್ರಶ್ನೆಯು ಕೇಶವಕೃಪಾದಲ್ಲಿ ನಿರ್ಧಾರವಾಗಿದೆ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಕಿರಿಕಾರಿದ ನಾಗೇಶ್, ಒಲ್ಲದ ಗಂಡ ಮೊಸರಲ್ಲಿ ಕಲ್ಲು ಹುಡುಕುವಂತೆ ಎಚ್.ಡಿ.ಕುಮಾರಸ್ವಾಮಿ ಮಾತನಾಡುತ್ತಾರೆ. ವಾರಾಣಸಿ ಮಸೀದಿ ವಿಚಾರ ಹಾಗಾದ್ರೆ ನಾಗಪುರದಲ್ಲಿ ನಿರ್ಧಾರವಾಯಿತೇ..? ಸರ್ವೇ ಪ್ರಕಾರ ಮುಸ್ಲಿಂರು ಕೂಡ ಬಿಜೆಪಿ ಯತ್ತ ಬರುತ್ತಿರುವುದರಿಂದ ದಳ ಮತ್ತು ಕಾಂಗ್ರೆಸ್ ವಿಚಲಿತರಾಗಿದ್ದಾರೆ. ಆರ್ಎಸ್ಎಸ್ ವಿರುದ್ಧ ಮಾತನಾಡಿದರೇ ಮುಸ್ಲಿಂ ಮತ ಬಲಪಡಿಸಿಕೊಳ್ಳಬಹುದೆಂಬ ಭ್ರಮೆಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.
Recommended Video
ವಿಜಯೇಂದ್ರಗೆ ಪಕ್ಷ ಸಂಘಟಿಸುವ ಜವಾಬ್ದಾರಿ
ಬಿ.ವೈ.ವಿಜಯೇಂದ್ರಗೆ ಟಿಕೆಟ್ ನಿರಾಕರಿಸಿರುವುದು ಪಕ್ಷದ ಒಳಗಿನ ನಿರ್ಣಯ, ಅದರ ಬಗ್ಗೆ ಹೆಚ್ಚು ಮಾಹಿತಿ ಇಲ್ಲಾ, ಈಗಾಗಲೇ ಸಂಘಟನೆಯ ಜವಾಬ್ದಾರಿಯನ್ನು ಅವರಿಗೆ ಕೊಡಲಾಗಿದೆ. ಮುಂಬರುವ ಚುನಾವಣೆಯಲ್ಲಿ ಅವರು ಸ್ಪರ್ಧಿಸುವ ಬಗ್ಗೆ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಪ್ರತಿಕ್ರಿಯಿಸಿದರು.