ಕೊಳ್ಳೇಗಾಲದಲ್ಲಿ ಕಾಂಗ್ರೆಸ್ಸಿಗರಿಗೆ ಬಿಎಸ್ಪಿಯ ಎನ್. ಮಹೇಶ್ ರದ್ದೇ ಚಿಂತೆ
Recommended Video
ಚಾಮರಾಜನಗರ, ಮೇ 7: ಈ ಬಾರಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಗೆಲುವಿಗಾಗಿ ಭಾರೀ ಪೈಪೋಟಿ ಕಂಡು ಬರುತ್ತಿದೆ. ಬಿಜೆಪಿಯಿಂದ ಕಾಂಗ್ರೆಸ್ಗೆ ಸೇರ್ಪಡೆಗೊಂಡ ಎ.ಆರ್.ಕೃಷ್ಣಮೂರ್ತಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೆ, ಬಿಜೆಪಿಯಿಂದ ಜಿ.ಎನ್.ನಂಜುಂಡಸ್ವಾಮಿ ಅವರು ಕಣಕ್ಕಿಳಿದಿದ್ದಾರೆ. ಇವರಿಬ್ಬರಿಗೂ ಇದೀಗ ಸಿಂಹಸ್ವಪ್ನವಾಗಿ ಜೆಡಿಎಸ್ ಬೆಂಬಲಿತ ಬಿಎಸ್ಪಿ ಅಭ್ಯರ್ಥಿ ಎನ್.ಮಹೇಶ್ ಕಾಡುತ್ತಿದ್ದಾರೆ.
ಕಳೆದ ಹಲವು ವರ್ಷಗಳಿಂದ ಕರ್ನಾಟಕದಲ್ಲಿ ಬಿಎಸ್ಪಿ ಸಂಘಟನೆಗಾಗಿ ಶ್ರಮಿಸುತ್ತಿರುವ ಬಿಎಸ್ಪಿ ರಾಜ್ಯಾಧ್ಯಕ್ಷ ಎನ್.ಮಹೇಶ್ರವರು ಈ ಬಾರಿ ಕೊಳ್ಳೇಗಾಲ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಅಷ್ಟೇ ಅಲ್ಲದೆ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಮತ ಭಿಕ್ಷೆ ಬೇಡುತ್ತಿದ್ದಾರೆ.
ಕ್ಷೇತ್ರ ಪರಿಚಯ: ಕೊಳ್ಳೇಗಾಲದಲ್ಲಿ ಬಿಜೆಪಿ, ಬಿಎಸ್ಪಿ, ಕಾಂಗ್ರೆಸ್ ತ್ರಿಕೋನ ಸ್ಪರ್ಧೆ
ಮಹೇಶ್ ಬಗ್ಗೆ ಒಲವು
ಹಾಗೆ ನೋಡಿದರೆ ಒಂದಷ್ಟು ಮಂದಿ ಮಹೇಶ್ ಅವರ ಬಗ್ಗೆ ಒಲವು ಹೊಂದಿದ್ದಾರೆ. ಇದೀಗ ಜೆಡಿಎಸ್ ಬೆಂಬಲವೂ ಇರುವುದರಿಂದ ಗೆಲುವು ಸಾಧಿಸಬಹುದು ಎಂಬುದು ಲೆಕ್ಕಾಚಾರ. ಬಿಎಸ್ಪಿ ಕ್ಷೇತ್ರದಲ್ಲಿ ಒಂದಷ್ಟು ಪ್ರಾಬಲ್ಯ ಹೊಂದಿರುವುದರಿಂದ ಹೆಚ್ಚಿನ ಪರಿಣಾಮ ಕಾಂಗ್ರೆಸ್ ಮೇಲಾಗುತ್ತಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
ಇಲ್ಲಿ ಕಾಂಗ್ರೆಸ್ ಮತಗಳು ಮಾತ್ರ ಹಂಚಿಹೋ ಗಲಿದ್ದು, ಬಿಜೆಪಿಗೆ ಸಿಗಬೇಕಾದ ಮತ ಸಿಕ್ಕೇ ಸಿಗುತ್ತದೆ. ಇದರಿಂದ ಅವರಿಬ್ಬರ ನಡುವಿನ ಪೈಪೋಟಿಯಲ್ಲಿ ಗೆಲುವು ನಮಗೆ ಎನ್ನುವುದು ಬಿಜೆಪಿಯ ಲೆಕ್ಕಾಚಾರ. ಹೀಗಾಗಿ ಕಾಂಗ್ರೆಸ್ಗೆ ಬಿಎಸ್ಪಿ ತೊಡರುಗಾಲಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ.
ಸಾರ್ವಜನಿಕರೇ ಶ್ರೀರಕ್ಷೆ
ಅಲ್ಪ ಸಂಖ್ಯಾತರು, ಹಿಂದುಳಿದವರು, ದಲಿತರು ಎಲ್ಲರೂ ಹೆಚ್ಚಾಗಿ ಬಿಎಸ್ಪಿಯತ್ತ ಒಲವು ತೋರುತ್ತಾರೆ. ಇದರಿಂದ ಅವರ ಮತ ಹಂಚಿಹೋಗುತ್ತದೆ ಎಂಬ ಭಯ ಕಾಂಗ್ರೆಸ್ಸಿಗರನ್ನು ಕಾಡತೊಡಗಿದೆ.
ಇನ್ನು ಬಿಎಸ್ಪಿ ಅಭ್ಯರ್ಥಿ ಎನ್.ಮಹೇಶ್ ಸಾರ್ವಜನಿಕ ವಲಯದಲ್ಲಿ ಉತ್ತಮ ಒಡನಾಟವನ್ನು ಹೊಂದಿದ್ದು, ಜನರ ಕಷ್ಟ ಸುಖಕ್ಕೆ ನೇರವಾಗಿ ಸ್ಪಂದಿಸುತ್ತಾರೆ. ಜೊತೆಗೆ ಸೋಲನ್ನೇ ಕಂಡಿರುವ ಅವರಿಗೆ ಅನುಕಂಪದಿಂದ ಮತ ನೀಡುತ್ತಾರೆ. ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಅದು ಕೂಡ ಇಲ್ಲಿ ಪ್ಲಸ್ಪಾಯಿಂಟ್ ಆಗುತ್ತದೆ ಎಂಬ ಮಾತಿದೆ.
'ಜೆಡಿಎಸ್-ಬಿಎಸ್ಪಿ ಮಹಾಮೈತ್ರಿಗೆ ಬಹುಮತ ನೀಡಿ ಎಚ್ಡಿಕೆಯನ್ನು ಸಿಎಂ ಮಾಡಿ'
ಕಳೆದ ಬಾರಿ 10 ಸಾವಿರ ಮತಗಳಿಂದ ಸೋಲು
ಕಳೆದ ಚುನಾವಣೆಯಲ್ಲಿ ಬಿಎಸ್ಪಿಯಿಂದ ಸ್ಪರ್ಧಿಸಿದ್ದ ಅವರು ಕಾಂಗ್ರೆಸಿನ ಎಸ್. ಜಯಣ್ಣ ವಿರುದ್ಧ ಸುಮಾರು 10 ಸಾವಿರ ಮತಗಳ ಅಂತರದಿಂದಷ್ಟೇ ಸೋಲಿಸಿದ್ದರು. ಈ ಚುನಾವಣೆಯಲ್ಲಿ ಅವರು 37,209 ಮತಗಳನ್ನು ಪಡೆದಿದ್ದರು.
ಸದ್ಯ ಕ್ಷೇತ್ರದಲ್ಲಿರುವ ಪರಿಸ್ಥಿತಿ ಗಮನಿಸಿದ ಮೇಲೆ ಕಾಂಗ್ರೆಸ್ಗೆ ಭಯ ಆರಂಭವಾಗಿದ್ದು, ಮತದಾರರನ್ನು ಸೆಳೆಯುವುದರ ಜೊತೆಗೆ ತಂತ್ರ ಮಾತ್ರವಲ್ಲ ಕುತಂತ್ರವನ್ನು ಇಲ್ಲಿ ಬಳಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಾಂಗ್ರೆಸಿನ ಟಾರ್ಗೆಟ್ ಮಹೇಶ್
ಇದೀಗ ಪ್ರಮುಖವಾಗಿ ಬಿಎಸ್ಪಿ ಅಭ್ಯರ್ಥಿ ಎನ್.ಮಹೇಶ್ ಅವರನ್ನೇ ಟಾರ್ಗೆಟ್ ಮಾಡಿಕೊಂಡಿರುವ ಕಾಂಗ್ರೆಸ್ನವರು ಅವರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುವುದರ ಜತೆಗೆ ಕೆಸ್ತೂರು ಗ್ರಾಮದ ಉಪ್ಪಾರ ಬಡಾವಣೆಯ ಮಹಿಳೆಯರಿಗೆ ಈ ಬಾರಿ ಚುನಾವಣೆಯಲ್ಲಿ ಎರಡು ಓಟು ಇದ್ದು, ಮೊದಲ ಓಟನ್ನು ಹಸ್ತದ ಗುರುತಿಗೆ ಒತ್ತಿ ನಂತರ ಎರಡನೇ ಓಟನ್ನು ಆನೆ ಗುರುತಿಗೆ ನೀಡಿ ಎಂದು ದಿಕ್ಕುತಪ್ಪಿಸುತ್ತಿದ್ದಾರಂತೆ.
ಈ ಬಗ್ಗೆ ಖುದ್ದು ಎನ್.ಮಹೇಶ್ ಅವರೇ ಅಳಲು ತೋಡಿಕೊಂಡಿದ್ದು, ಕಾಂಗ್ರೆಸ್ನವರ ಕುತಂತ್ರಕ್ಕೆ ಬಲಿಯಾಗಬೇಡಿ ಎಂದು ಜನರನ್ನು ಎಚ್ಚರಿಸುತ್ತಿದ್ದಾರೆ.
ಮಹೇಶ್ ಗೆ ಜನರೇ ಆರ್ಥಿಕ ಶಕ್ತಿ
ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಎದುರು ಸ್ಪರ್ಧಿಸಿರುವ ಮಹೇಶ್ ಅವರಿಗೆ ಗ್ರಾಮಸ್ಥರೇ ಹಣ ನೀಡಿ ಚುನಾವಣೆಗೆ ಸಹಕರಿಸುತ್ತಿರುವ ದೃಶ್ಯ ಕಂಡು ಬರುತ್ತಿವೆ. ಇದುವರೆಗೆ ಬಿಎಸ್ಪಿಯಿಂದ ಮಹೇಶ್ ಅವರು ಸ್ಪರ್ಧಿಸುತ್ತಿದ್ದರೂ ತಲೆಕೆಡಿಸಿಕೊಳ್ಳದ ಇತರೆ ಪಕ್ಷಗಳ ನಾಯಕರು ಇದೀಗ ಜೆಡಿಎಸ್ ಬೆಂಬಲದಿಂದ ಸ್ಪರ್ಧಿಸಿರುವುದರಿಂದ ಗಂಭೀರವಾಗಿ ತೆಗೆದುಕೊಂಡಿದ್ದಾರೆ.
ಇಲ್ಲಿ ಎನ್ ಮಹೇಶ್ ಕಾಂಗ್ರೆಸ್ ಗೆ ತೊಡರುಗಾಲಾಗುವುದಷ್ಟೇ ಅಲ್ಲ, ಗೆಲ್ಲುವ ಪ್ರಬಲ ಅಭ್ಯರ್ಥಿಯಾಗಿ ಕಾಣಿಸುತ್ತಿದ್ದಾರೆ. ಹಾಗಾಗಿ ಗೆಲುವಿಗಾಗಿ ಹೋರಾಟ ಮಾಡುತ್ತಿದ್ದಾರೆ.