ದಲಿತ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ: ಎರಡೂ ಕಡೆ ದೂರು
ಚಾಮರಾಜನಗರ, ಜೂನ್ 12: ದಲಿತ ವ್ಯಕ್ತಿಯೋರ್ವ ದೇವಸ್ಥಾನ ಪ್ರವೇಶಿಸಿದನೆಂಬ ಕಾರಣಕ್ಕೆ ಆತನ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಬೆತ್ತಲೆ ಮೆರವಣಿಗೆ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕಬ್ಬೆಕಟ್ಟೆ ಗ್ರಾಮದಲ್ಲಿ ನಡೆದಿತ್ತು. ಗುಂಡ್ಲುಪೇಟೆ ತಾಲೂಕಿನ ಶ್ಯಾನಾಡ್ರಹಳ್ಳಿ ಪ್ರತಾಪ್ ದೌರ್ಜನ್ಯಕ್ಕೆ ಒಳಗಾಗಿರುವ ವ್ಯಕ್ತಿ. ಈ ಕೃತ್ಯದ ಬಗ್ಗೆ ಪ್ರತಾಪ್ ಅವರ ಚಿಕ್ಕಪ್ಪನ ಮಗ ಕಾಂತರಾಜು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ವಿವಿಧ ಪ್ರಕರಣಗಳಡಿ ದೂರು ದಾಖಲು: ಕಬ್ಬೆಕಟ್ಟೆ ಶನೇಶ್ವರ ದೇವಸ್ಥಾನದ ಅರ್ಚಕ ಶಿವಪ್ಪ, ಗ್ರಾಮಸ್ಥರಾದ ಬಸವರಾಜು, ಮಾಣಿಕ್ಯ, ಸತೀಶ್, ಮೂರ್ತಿ ಮತ್ತು ಪುಟ್ಟಸ್ವಾಮಿ ವಿರುದ್ಧ ಪರಿಶಿಷ್ಟ ಜಾತಿ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿ, ಅನುಮತಿ ಇಲ್ಲದೆ ಗುಂಪು ಸೇರುವುದು, ದೊಂಬಿ, ದರೋಡೆ, ಹಲ್ಲೆ ಹಾಗೂ ಅಕ್ರಮ ಬಂಧನ, ಉದ್ದೇಶಪೂರ್ವಕವಾಗಿ ಶಾಂತಿ ಕದಡುವುದು ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಪೊಲೀಸರು ಅರ್ಚಕ ಶಿವಪ್ಪ ಹಾಗೂ ಪುಟ್ಟಸ್ವಾಮಿ ಅವರನ್ನು ಬಂಧಿಸಿದ್ದು ಉಳಿದ ನಾಲ್ವರು ಕಾಣೆಯಾಗಿದ್ದಾರೆ.
ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆ ಮಾಡಿರುವುದು ಅಮಾನವೀಯ: ಕುಮಾರಸ್ವಾಮಿ
ಜೂನ್ 2ರಂದು ರಾತ್ರಿ ಸುಮಾರು 12 ಗಂಟೆಗೆ ಮೈಸೂರಿನಿಂದ ಶಾನಡ್ರಹಳ್ಳಿಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ದುಷ್ಕರ್ಮಿಗಳು ಅವರನ್ನು ತಡೆದು ಹಣ, ಕತ್ತಿನಲ್ಲಿದ್ದ ಚಿನ್ನದ ಸರ ಹಾಗೂ ಮೊಬೈಲ್ ಫೋನ್ ಕಸಿದುಕೊಂಡು ಹಲ್ಲೆ ನಡೆಸಿದ್ದಾರೆ. ಆಗ ರಕ್ಷಣೆಗಾಗಿ ಪ್ರತಾಪ್ ಪಕ್ಕದಲ್ಲಿದ್ದ ತೋಟಕ್ಕೆ ತೆರಳಿದ್ದಾರೆ. ಹೀಗೆ ಸಾಗುತ್ತಾ ರಾತ್ರೋರಾತ್ರಿ ಕಾಲ್ನಡಿಗೆಯಲ್ಲಿ ಮಾಡ್ರಹಳ್ಳಿ ಹತ್ತಿರವಿರುವ ಕೆಬ್ಬೆಕಟ್ಟೆ ಪಕ್ಕದ ಶನೀಶ್ವರ ದೇವಸ್ಥಾನದ ಆವರಣದಲ್ಲಿ ವಿಶ್ರಾಂತಿ ಪಡೆದಿದ್ದಾರೆ. ಜೂನ್ 3ರಂದು ಬೆಳಗ್ಗೆ 6ಕ್ಕೆ ದೇವಸ್ಥಾನಕ್ಕೆ ಆಗಮಿಸಿದ ಅರ್ಚಕ ಶಿವಪ್ಪ ಅವರು ಪ್ರತಾಪ್ ನನ್ನು ವಿಚಾರಿಸಿದ ವೇಳೆ ತಾನೊಬ್ಬ ದಲಿತ ಎಂದು ತಿಳಿಸಿದ್ದಕ್ಕಾಗಿ ಇವರನ್ನು ಬೆತ್ತಲೆಗೊಳಿಸಿ ತೆಂಗಿನ ಮರಕ್ಕೆ ಕಟ್ಟಿ ಹಾಕಿ ಹೊಡೆಯಿರಿ ಎಂದು ಹೇಳಿದ್ದಾರೆ. ಉಳಿದವರು ಪ್ರತಾಪ್ ಗೆ ಹೊಡೆದು ಹಲ್ಲೆ ನಡೆಸಿದ್ದಾರೆ. ಬಸವರಾಜು ಅವರು ಪ್ರತಾಪ್ ಅವರ ಎರಡು ಕೈಗಳನ್ನು ಹಿಂದಕ್ಕೆ ಸೇರಿಸಿ ಹಗ್ಗದಿಂದ ಕಟ್ಟಿ ಹಲ್ಲೆ ನಡೆಸಿದ್ದಾರೆ. ಬೆತ್ತಲೆ ಮೆರವಣಿಗೆ ನಡೆಸಿ ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ ಎಂದು ಕಾಂತರಾಜ್ ದೂರಿನಲ್ಲಿ ತಿಳಿಸಿದ್ದಾರೆ.
ದೇವಸ್ಥಾನದ ಆಡಳಿತ ಮಂಡಳಿಯಿಂದಲೂ ದೂರು: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ 38 ವರ್ಷದ ಪ್ರತಾಪ್ ಅವರನ್ನು ಮೈಸೂರಿನ ಆಸ್ಪತ್ರೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ದೇವಸ್ಥಾನದಲ್ಲಿ ವಿಗ್ರಹಗಳನ್ನು ಪ್ರತಾಪ್ ಧ್ವಂಸ ಮಾಡಿದ್ದಾರೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಸ್ವಾಮಿಗೌಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೇವಸ್ಥಾನದಲ್ಲಿ ಪ್ರತಾಪ್ ವಿಗ್ರಹವನ್ನು ಧ್ವಂಸ ಮಾಡಿದ್ದಾರೆ. ಅವರು ವಿವಸ್ತ್ರವಾಗಿಯೇ ಇದ್ದರು, ನಾವೆಲ್ಲರೂ ಬಟ್ಟೆ ನೀಡಲು ಯತ್ನಿಸಿದರೆ ಗ್ರಾಮಸ್ಥರಿಗೆ ಹೊಡೆಯಲು ಮುಂದಾಗಿದ್ದಲ್ಲದೆ ಕೆಳಕ್ಕೆ ತಳ್ಳಿದ್ದಾರೆ. ಎಲ್ಲರ ಮೇಲೂ ರೇಗಾಡಿದಾಗ ಕೈಯನ್ನು ಹಗ್ಗದಲ್ಲಿ ಕಟ್ಟಿ ಒಂದು ಕಡೆ ಕೂರಿಸಿ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದು ಸ್ವಾಮಿಗೌಡ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ಪೊಲೀಸ್ ಠಾಣೆಯಲ್ಲಿದ್ದಾಗಲೇ ಪ್ರತಾಪ್ ಅವರ ತಂದೆ ಶಿವಯ್ಯ ಆಗಮಿಸಿ ಪ್ರತಾಪ್ ಮಾನಸಿಕ ಅಸ್ವಸ್ಥ, ದೂರು ಕೊಡುವುದು ಬೇಡ ದೇವಾಲಯಕ್ಕೆ ಆಗಿರುವ ಹಾನಿಯನ್ನು ಸರಿಪಡಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದರಿಂದ ದೂರು ಕೊಟ್ಟಿಲ್ಲ. ಆದರೆ ಇದುವರೆಗೂ ದುರಸ್ತಿ ಮಾಡಲಾಗಿಲ್ಲ ಎಂದು ದೂರಿನಲ್ಲಿ ವಿವರಿಸಿದ್ದಾರೆ ಎನ್ನಲಾಗಿದೆ.