ಬಂಡೀಪುರ; ನಾಡಿಗೆ ಬರುವ ಹುಲಿಯನ್ನು ತಡೆಯುವುದೇ ದೊಡ್ಡ ಸವಾಲು
ಚಾಮರಾಜನಗರ, ಸೆಪ್ಟೆಂಬರ್ 4: ಆಹಾರ ಅರಸಿ ಅರಣ್ಯದಿಂದ ನಾಡಿಗೆ ಬರುವ ಹುಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ತಿಂದು ಹಾಕುತ್ತಿರುವ ಪ್ರಕರಣಗಳು ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಮೇಲಿಂದ ಮೇಲೆ ನಡೆಯುತ್ತಲೇ ಇರುತ್ತದೆ.
ಹುಲಿಗಳು ಕಾಡಿನಿಂದ ನಾಡಿಗೆ ಬರದಂತೆ ಶಾಶ್ವತವಾಗಿ ತಡೆಯುವ ಯಾವ ಕ್ರಮಗಳನ್ನು ಇದುವರೆಗೆ ಮಾಡದ ಕಾರಣ ಕಾಡಂಚಿನ ಜನ ಭಯದಲ್ಲಿಯೇ ಬದುಕುವಂತಹ ಪರಿಸ್ಥಿತಿ ಮುಂದುವರೆದುಕೊಂಡೇ ಬರುತ್ತಿದೆ. ಇದೀಗ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಹೆಡಿಯಾಲ ಉಪವಿಭಾಗದ ಎನ್.ಬೇಗೂರು ವಲಯದ ಕಾಡಂಚಿನ ಗ್ರಾಮಗಳಲ್ಲಿ ಹುಲಿಯೊಂದು ಆಟಾಟೋಪ ಮರೆಯುತ್ತಿದ್ದು, ಇದನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಮಾಡುತ್ತಿರುವ ಎಲ್ಲ ಪ್ರಯತ್ನಗಳು ವಿಫಲವಾಗಿವೆ.
Recommended Video
ಹುಲಿಯನ್ನು ಸೆರೆ ಹಿಡಿಯುವುದೇ ಸವಾಲು
ಕಳೆದ ಕೆಲವು ದಿನಗಳಿಂದ ಸಾಕಾನೆಗಳ ಸಹಕಾರದೊಂದಿಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದ್ದರೂ ಹುಲಿ ಮಾತ್ರ ಕಣ್ಣಿಗೆ ಕಾಣಿಸಿಕೊಳ್ಳದೆ ತಪ್ಪಿಸಿಕೊಳ್ಳುತ್ತಿದೆ. ಈಗಾಗಲೇ ಈ ಹುಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದಿದೆ. ಈ ಹುಲಿ ಸೆರೆಗೆ ಅರಣ್ಯ ಇಲಾಖೆ 25 ಕ್ಯಾಮೆರಾ ಹಾಗೂ ಹುಲಿ ಸಂಚರಿಸಿದ ಪ್ರದೇಶಗಳಲ್ಲಿ ಎರಡು ಬೋನು ಅಳವಡಿಸಿ ಸೆರೆ ಹಿಡಿಯಲು ಮುಂದಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಗೋಪಾಲಸ್ವಾಮಿ ಬೆಟ್ಟ ವಲಯ ವ್ಯಾಪ್ತಿಯ ಇಬ್ಬರು ರೈತರನ್ನು ಹುಲಿ ಬಲಿ ಪಡೆದಿತ್ತು. ನಂತರ ಸುಮಾರು 15 ದಿನಗಳ ಕಾರ್ಯಾಚರಣೆ ನಡೆಸಿ ಮಗುವಿನ ಹಳ್ಳದ ಸಮೀಪ ಸೆರೆಹಿಡಿದು, ಮೈಸೂರಿನ ಕೂರ್ಗಳ್ಳಿಯಲ್ಲಿ ರಕ್ಷಣೆ ಮಾಡಲಾಗಿತ್ತು.
ಗ್ರಾಮಗಳಲ್ಲಿ ಹುಲಿ ಹೆಜ್ಜೆ; ಬೇಗೂರಿನಲ್ಲಿ 6 ದಿನಗಳಿಂದ ಕಾರ್ಯಾಚರಣೆ
ಹುಲಿಗಳ ಉಪಟಳ ಮುಂದುವರಿಕೆ
ಮೇ ತಿಂಗಳಿನಲ್ಲಿ ಕುಂದಕೆರೆ ವಲಯ ವ್ಯಾಪ್ತಿಯ ಕುಂದಕೆರೆ, ಕಡಬೂರು, ಚಿರಕನಹಳ್ಳಿ, ಉಪಕಾರ ಕಾಲೋನಿ, ಇನ್ನೂ ಹಲವು ಗ್ರಾಮಗಳಲ್ಲಿ ಸುಮಾರು ಇಪ್ಪತ್ತು ಜಾನುವಾರು ಮೇಕೆಗಳನ್ನು ಹುಲಿ ಬಲಿ ಪಡೆದಿತ್ತು. ಈ ವೇಳೆ ಘಟನಾ ಸ್ಥಳಕ್ಕೆ ಅರಣ್ಯ ಸಚಿವ ಆನಂದ ಸಿಂಗ್ ಭೇಟಿ ನೀಡಿ, ಶಾಶ್ವತವಾಗಿ ಕಾಡು ಪ್ರಾಣಿಗಳು ಕಾಡಿನಿಂದ ನಾಡಿಗೆ ಬರದಂತೆ ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಅದ್ಯಾವುದೂ ಸದ್ಯಕ್ಕೆ ಅನುಷ್ಠಾನಗೊಳ್ಳದ ಕಾರಣ ಹುಲಿಯ ಉಪಟಳ ಮುಂದುವರೆಯುತ್ತಲೇ ಇದೆ.
ಸಾಕಾನೆಗಳಿಂದ ಕಾರ್ಯಾಚರಣೆ
ಇದೀಗ ಎನ್.ಬೇಗೂರು ವಲಯದ ಕಾಡಂಚಿನ ಗ್ರಾಮಕ್ಕೆ ಬರುವ ಹುಲಿಗಳನ್ನು ಕಾಡಿಗಟ್ಟಲು ಇಲ್ಲವೇ ಬೋನಿಗೆ ಬಿದ್ದರೆ ಸೆರೆಹಿಡಿದು ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. ಅರಣ್ಯ ಇಲಾಖೆ ಕಳೆದ ಕೆಲವು ದಿನಗಳಿಂದ ರಾಂಪುರ ಶಿಬಿರದಿಂದ ಜಯಪ್ರಕಾಶ, ಪಾರ್ಥಸಾರಥಿ, ಗಣೇಶ ಎಂಬ ಮೂರು ಸಾಕಾನೆಗಳನ್ನು ಕರೆತಂದು ಅದರ ನೆರವಿನಿಂದ ಕೂಂಬಿಂಗ್ ಮುಂದುವರೆಸಲಾಗಿದೆ.
ಶಾಶ್ವತ ಯೋಜನೆ ರೂಪಿಸಿ
ಈ ಕುರಿತಂತೆ ಪ್ರತಿಕ್ರಿಯಿಸಿರುವ ಜಿಲ್ಲಾ ಹಸಿರು ಸೇನೆ ಸಂಚಾಲಕ ಕಡಬೂರು ಮಂಜುನಾಥ ಅವರು, ಮೂರು ತಿಂಗಳ ಹಿಂದೆ ಅರಣ್ಯ ಸಚಿವ ಆನಂದ ಸಿಂಗ್ ಕಡಬೂರು ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಕಾಡಿನಿಂದ ಪ್ರಾಣಿಗಳು ನಾಡಿಗೆ ಬರದಂತೆ ಶಾಶ್ವತವಾಗಿ ಮೆಸ್ ನಿರ್ಮಾಣ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದ್ದರು. ಈಗ ನಿರಂತರವಾಗಿ ಕಾಡು ಪ್ರಾಣಿಗಳು ನಾಡಿನತ್ತ ಬರುತ್ತಿದ್ದರೂ ಇದುವರೆಗೆ ನೀಡಿದಂತಹ ಭರವಸೆ ಭರವಸೆಯಾಗಿಯೇ ಉಳಿದಿದೆ. ಸಚಿವರಿಗೆ ರೈತರ ಮೇಲೆ ಕಾಳಜಿ ಇದ್ದರೆ ಕಾಡಿನಿಂದ ನಾಡಿಗೆ ಪ್ರಾಣಿಗಳು ಬರದಂತೆ ಯೋಜನೆ ರೂಪಿಸಲಿ ಎಂದು ಆಗ್ರಹಿಸಿದ್ದಾರೆ.