ಮುಚ್ಚಿ ಹೋದ ಕಂದಕ: ಕುಂಟಗುಡಿ ಕಾಲೋನಿಗೆ ವನ್ಯ ಪ್ರಾಣಿಗಳ ಲಗ್ಗೆ
ಚಾಮರಾಜನಗರ ಜೂನ್ 03: ಅರಣ್ಯದಿಂದ ನಾಡಿನತ್ತ ವನ್ಯಪ್ರಾಣಿಗಳು ಮುಖ ಮಾಡುತ್ತಿರುವ ಪರಿಣಾಮ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳೆಲ್ಲವೂ ನಾಶವಾಗುತ್ತಿವೆ. ರೈತರು ಅರಣ್ಯ ಇಲಾಖೆಯತ್ತ ಬೊಟ್ಟು ಮಾಡಿ ತೋರಿಸುತ್ತಿದ್ದು, ವನ್ಯಪ್ರಾಣಿಗಳ ಹಾವಳಿಯಿಂದ ಪಾರು ಮಾಡಿ ಎಂದು ಬೇಡಿಕೊಳ್ಳುವುದು ಮುಂದುವರೆಯುತ್ತಲೇ ಇದೆ.
ಇಷ್ಟಕ್ಕೂ ವನ್ಯಪ್ರಾಣಿಗಳು ನಾಡಿನತ್ತ ಬರಲು ಕಾರಣವೇನು ಎಂಬುದನ್ನು ಗಮನಿಸಿದರೆ, ಅರಣ್ಯ ಇಲಾಖೆಯ ನಿರ್ಲಕ್ಷ್ಯ, ಜತೆಗೆ ಆಡಳಿತಾರೂಢರು ರೈತರ ಹಿತಕಾಯುವ ಬಗ್ಗೆ ಚಿಂತಿಸದಿರುವುದು, ಸೂಕ್ತ ಕ್ರಮಗಳನ್ನು ಕೈಗೊಳ್ಳದಿರುವುದು ಎದ್ದು ಕಾಣುತ್ತಿವೆ. ಬಹಳಷ್ಟು ಅರಣ್ಯ ಪ್ರದೇಶಗಳಲ್ಲಿ ಮರ ಗಿಡಗಳಿದ್ದರೂ ಅಲ್ಲಿ ವಾಸಿಸುವ ಸಸ್ಯಾಹಾರಿ ಪ್ರಾಣಿಗಳಿಗೆ ಹಸಿರು ಮೇವಿನ ಕೊರೆತೆಯೂ ಇಲ್ಲದಿಲ್ಲ. ಅರಳಿ, ಹಲಸು, ಮಾವು ಸೇರಿದಂತೆ ಇನ್ನಿತರ ಮರಗಳ ಬದಲಿಗೆ ತೇಗ, ನೀಲಗಿರಿ, ಸಿಲ್ವರ್ ಮೊದಲಾದ ಮರಗಳನ್ನು ನೆಟ್ಟು ಹಸಿರು ಕ್ರಾಂತಿಯನ್ನು ಮಾಡಿದರಾದರೂ ಪ್ರಾಣಿಗಳಿಗೆ ಮೇವು ಒದಗಿಸುವ ಕಾರ್ಯವನ್ನು ಮಾಡದಿರುವುದರಿಂದ ಪ್ರಾಣಿಗಳು ರೈತರ ಜಮೀನಿನ ಕಡೆಗೆ ಬರುವಂತಾಗಿದೆ.
ಬಂಡೀಪುರದಲ್ಲಿ ಹೊಸ ಸಫಾರಿ ಜೋನ್ಗೆ ಗ್ರೀನ್ ಸಿಗ್ನಲ್
ಈ ನಡುವೆ ಅರಣ್ಯ ಇಲಾಖೆ ವನ್ಯಪ್ರಾಣಿಗಳು ಅರಣ್ಯದಿಂದ ಆಚೆಗೆ ಹೋಗದಂತೆ ಮಾಡಿರುವ ಕಂದಕಗಳು, ಸೋಲಾರ್ ಬೇಲಿ ಮೊದಲಾದವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದು ರೈತರು ಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ತಾಲೂಕಿನ ಕುಂಟಗುಡಿ ಕಾಲೋನಿ ಸುತ್ತಮುತ್ತ ಕಾಡುಪ್ರಾಣಿಗಳ ಹಾವಳಿ ತಡೆಯಲು ಕಾಡಂಚಿನಲ್ಲಿ ನಿರ್ಮಾಣ ಮಾಡಲಾಗಿದ್ದ ಕಂದಕ ಮುಚ್ಚಿ ಹೋಗಿದ್ದು, ನಿವಾಸಿಗಳು ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ.
ಕೆ.ಗುಡಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಕುಟುಂಬಗಳನ್ನು, ಅರಣ್ಯ ಪ್ರದೇಶದಿಂದ ಹೊರಗೆ ಸೇರಿಸುವ ಹಿನ್ನೆಲೆಯಲ್ಲಿ, 10 ವರ್ಷಗಳ ಹಿಂದೆ ಅರಣ್ಯ ಇಲಾಖೆ ವತಿಯಿಂದ ನವೋದಯ ಶಾಲೆ ಸಮೀಪವಿರುವ ಕುಂಟಗುಡಿ ಕಾಲೋನಿಗೆ ನಿವಾಸಿಗಳನ್ನು ಸ್ಥಳಾಂತರ ಮಾಡಲಾಯಿತು. ನಿವಾಸಿಗಳಿಗೆ ಜೀವನ ನಿರ್ವಹಣೆಗೆ ಜಮೀನು ನೀಡಲಾಗಿದೆ. ಇಲ್ಲಿ ಇವರು ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಜೊತೆಗೆ ಅರಣ್ಯ ಸಮೀಪವಿರುವ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳಿಂದ ತೊಂದರೆಯಾಗದಂತೆ 10 ವರ್ಷಗಳ ಹಿಂದೆ ದೊಡ್ಡ ಕಂದಕ ನಿರ್ಮಾಣ ಮಾಡಲಾಗಿತ್ತು. ಆ ವೇಳೆ ಯಾವುದೇ ಕಾಡು ಪ್ರಾಣಿಗಳು ಗ್ರಾಮದ ಕಡೆಗೆ ಸುಳಿಯುತ್ತಿರಲಿಲ್ಲ.
ಚಾಮರಾಜನಗರದ ಒಂಟಿಗುಡ್ಡದಲ್ಲಿ ಹುಲಿ- ಚಿರತೆಯ ಕಳೇಬರಗಳು ಪತ್ತೆ
ಆದರೆ ಕಳೆದ 2 ವರ್ಷಗಳಿಂದ ಕಂದಕವು ಸಂಪೂರ್ಣವಾಗಿ ಮುಚ್ಚಿ ಹೋಗಿರುವ ಪರಿಣಾಮ ಆನೆಗಳು ಸೇರಿದಂತೆ ವನ್ಯ ಪ್ರಾಣಿಗಳು ರಾತ್ರಿ ವೇಳೆ ಲಗ್ಗೆಯಿಡುತ್ತಿವೆ. ಮನೆಗಳ ಸಮೀಪ ಬರುವುದರಿಂದ ರಾತ್ರಿ ವೇಳೆ ಸಂಚಾರ ಮಾಡುವುದೇ ಕಷ್ಟವಾಗುತ್ತಿದೆ.
ಸಾವಿರಾರು ರೂಪಾಯಿ ಖರ್ಚು ಮಾಡಿ ಯಾವುದೇ ಬೆಳೆ ಬೆಳೆದರೂ ಅದು ಫಸಲು ಬಿಡುವ ವೇಳೆಗೆ ವನ್ಯಪ್ರಾಣಿಗಳು ಜಮೀನಿಗೆ ಲಗ್ಗೆಯಿಟ್ಟು ಅದನ್ನು ತಿಂದು ತುಳಿದು ನಾಶ ಮಾಡುತ್ತಿರುವುದರಿಂದ ಬೆಳೆ ರೈತರ ಕೈ ಸೇರುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಿವಾಸಿಗಳು ಕಾಡುಪ್ರಾಣಿಗಳನ್ನು ಓಡಿಸಲು ತಮ್ಮ ಜಮೀನಿನಲ್ಲಿ ಅಟ್ಟಣಿಗೆ ಹಾಕಿಕೊಂಡು ಕಾಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಈ ಸಂಬಂಧ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಮುಚ್ಚಿ ಹೋಗಿರುವ ಕಂದಕವನ್ನು ದುರಸ್ತಿಗೊಳಿಸುವ ಮೂಲಕ ವನ್ಯಪ್ರಾಣಿಗಳ ಹಾವಳಿ ತಪ್ಪಿಸಬೇಕಾಗಿದೆ.
ಚಾಮರಾಜನಗರ: ಹುಚ್ಚಪ್ಪನಕಟ್ಟೆಯಲ್ಲಿ ಹರಿದಿದೆ ಜಲಧಾರೆ
ಕಾಲೋನಿ ಸುತ್ತಮುತ್ತಲೂ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವ ಸಂಬಂಧವಾಗಿ ನಿರ್ಮಾಣ ಮಾಡಲಾಗಿರುವ ಕಂದಕ ಈಗ ಸಂಪೂರ್ಣವಾಗಿ ಮುಚ್ಚಿ ಹೋಗಿದೆ. ಇದರ ಪರಿಣಾಮ, ರಾತ್ರಿ ವೇಳೆಯಲ್ಲಿ ಕಾಡು ಪ್ರಾಣಿಗಳು ಮನೆಗಳ ಸಮೀಪವೇ ಬರುತ್ತಿವೆ ಎಂದು ಅಳಲು ತೋಡಿಕೊಂಡಿದ್ದಾರೆ ಕಾಲೋನಿಯ ನಿವಾಸಿ ಬಸವೇಗೌಡ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೆ.ಗುಡಿ ಆರ್ ಎಫ್ ಓ ನಾಗೇಂದ್ರನಾಯಕ್, ಕುಂಟಗುಡಿ ಕಾಲೋನಿ ಸುತ್ತಮುತ್ತಲೂ 10 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿರುವ ಕಂದಕ ಈಗ ಮುಚ್ಚಿ ಹೋಗಿರುವ ವಿಚಾರ ಗಮನಕ್ಕೆ ಬಂದಿದೆ. ಆ ಭಾಗದಲ್ಲಿ 3 ಮೀಟರ್ ಮುಚ್ಚಿಹೋಗಿದ್ದು, ಮತ್ತೆ ಹೊಸದಾಗಿ ಕಂದಕ ನಿರ್ಮಾಣ ಮಾಡುವ ಸಂಬಂಧ ಕ್ರಿಯಾ ಯೋಜನೆ ತಯಾರಿಸಿ ಇಲಾಖೆಗೆ ವರದಿ ಕಳುಹಿಸಲಾಗಿದೆ. ಅನುದಾನ ಬಂದ ಕೂಡಲೇ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.