ಚಾಮರಾಜನಗರ; ಬಿಷಪ್ ವಿರುದ್ಧ ದೂರು ಸಲ್ಲಿಸಿದ್ದ ಫಾದರ್ ನಾಪತ್ತೆ?
ಚಾಮರಾಜನಗರ, ಆಗಸ್ಟ್ 28: ಕೆಲವು ದಿನಗಳಿಂದ ಇಲ್ಲಿನ ಚರ್ಚ್ ಫಾದರ್ ನಾಪತ್ತೆಯಾಗಿದ್ದು, ಇದುವರೆಗೆ ಅವರ ಸುಳಿವು ದೊರಕದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
Recommended Video
ಹನೂರು ತಾಲೂಕಿನ ಕೌದಳ್ಳಿ ಗ್ರಾಮದ ಚರ್ಚ್ನ ಫಾದರ್ ಸಂತೋಷ್ ಜೋಷಿ ಎಂಬುವರು ಕಳೆದ ಹನ್ನೊಂದು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಇವರು ಮೂಲತಃ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿ ಗ್ರಾಮದವರಾಗಿದ್ದು, ಅಲ್ಲಿಯೇ ಅವರ ಪೋಷಕರು ನೆಲೆಸಿದ್ದಾರೆ. ಫಾ. ಸಂತೋಷ್ ಜೋಷಿ ಅವರು ಆ.16 ರಂದು ಭಾನುವಾರ ಚರ್ಚ್ನಲ್ಲಿ ಪೂಜೆ ಸಲ್ಲಿಸಿದ ಬಳಿಕ ಕಾಣೆಯಾಗಿದ್ದು, ಎಲ್ಲಿಗೆ ಹೋದರು ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.
ವಿವಾಹ ವಾರ್ಷಿಕೋತ್ಸವ ದಿನದಂದೇ ಪೊಲೀಸ್ ಪೇದೆ ಸಾವು
ನಾಪತ್ತೆಯಾಗಿ ಸುಮಾರು ಹನ್ನೊಂದು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಜತೆಗೆ ಇವರು ಉಪಯೋಗಿಸುತ್ತಿದ್ದ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ. ಫಾದರ್ ಬಳಕೆ ಮಾಡಲಾಗುತ್ತಿದ್ದ ಕಾರು ಚರ್ಚ್ ಆವರಣದಲ್ಲೇ ನಿಂತಿರುವುದು ಹಲವಾರು ಅನುಮಾನಗಳಿಗೆ ಪುಷ್ಟಿ ನೀಡಿದಂತಾಗಿದೆ. ಅಂದು ಪೂಜೆ ಮುಗಿಸಿ ಬೈಕ್ ನಲ್ಲಿ ಹೊರ ಹೋದರು ಎಂದು ಕೆಲವರು ಹೇಳುತ್ತಿದ್ದು, ಅವರು ಬಳಕೆ ಮಾಡುತ್ತಿದ್ದ ಮೊಬೈಲ್ ಕಾಮಗೆರೆ ಬಳಿ ಸ್ವಿಚ್ ಆಫ್ ಆಗಿದೆ.
ಬಳಿಕ ಅವರ ಮೊಬೈಲ್ ಟವರ್ ಸಿಗ್ನಲ್ ಹಾಸನದಲ್ಲಿ ಚಾಲನೆಯಾಗಿದ್ದು, ಅಲ್ಲಿ ವಿಚಾರಣೆ ನಡೆಸಿದಾಗ ಕೌದಳ್ಳಿ ಫಾದರ್ ಹಾಸನದ ಲಾಡ್ಜ್ ನಲ್ಲಿ ಆ.19ರ ತನಕ ಒಬ್ಬರೇ ಕೊಠಡಿ ಪಡೆದು ತಂಗಿದ್ದರು ಎನ್ನುವ ಅಂಶವೂ ಬೆಳಕಿಗೆ ಬಂದಿದ್ದು ಚರ್ಚೆಗೆ ಗ್ರಾಸವಾಗಿದೆ.
ಕೆಲವು ತಿಂಗಳ ಹಿಂದೆ ಮೈಸೂರು ಕ್ರೈಸ್ತ ಧರ್ಮಾಧ್ಯಕ್ಷ ವಿಲಿಯಂ ಅವರ ಮೇಲೆ 34 ಪಾದ್ರಿಗಳು ಗಂಭೀರ ಆರೋಪ ಮಾಡಿದ್ದ ಪತ್ರವನ್ನು ರೋಂನಲ್ಲಿರುವ ಪೋಪ್ರವರಿಗೆ ಕಳುಹಿಸಿದ್ದರು. ಆ ಪಾದ್ರಿಗಳ ಪೈಕಿ ಕೌದಳ್ಳಿ ಗ್ರಾಮದ ಫಾದರ್ ಸಂತೋಷ್ ಜೋಷಿಯವರು ಇದ್ದರೆಂದು ಹೇಳಲಾಗುತ್ತಿದೆ. ಚರ್ಚ್ ಫಾದರ್ ಯಾವ ಕಾರಣಕ್ಕೆ ನಾಪತ್ತೆಯಾಗಿದ್ದಾರೆ ಎಂಬುದು ತನಿಖೆಯ ಬಳಿಕವಷ್ಟೆ ತಿಳಿದು ಬರಬೇಕಾಗಿದೆ.