ದೇಗುಲದ ಟ್ರಸ್ಟ್-ಅರ್ಚಕರ ನಡುವಿನ ಜಗಳದಲ್ಲಿ ಬಡವಾದ ಭಕ್ತರು
ಚಾಮರಾಜನಗರ, ಸೆಪ್ಟೆಂಬರ್ 15 : "ಅಪ್ಪ-ಅಮ್ಮ ಜಗಳದಲ್ಲಿ ಕೂಸು ಬಡವಾಯಿತು" ಎನ್ನುವಂತೆ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಸಿದ್ದಪ್ಪಾಜಿ ದೇಗುಲದ ಆಡಳಿತ ಮಂಡಳಿ ಹಾಗೂ ಅರ್ಚಕರ ನಡುವಿನ ಒಳಜಗಳದಿಂದಾಗಿ ದೇವಾಲಯಕ್ಕೆ ಬೀಗ ಬಿದ್ದಿದೆ.
ಇಬ್ಬರ ನಡುವಿನ ಜಗಳದಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಪವಾಡ ಪುರುಷ ಮಂಟೇಸ್ವಾಮಿ ಪರಂಪರೆಯುಳ್ಳ ಚಿಕ್ಕಲ್ಲೂರು ಸಿದ್ದಪ್ಪಾಜಿ ದೇವಸ್ಥಾನಕ್ಕೆ ಬೀಗ ಹಾಕಿರುವುದಕ್ಕೆ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಕೆಲವು ವರ್ಷಗಳಿಂದ ದೇಗುಲದ ವಿಷಯದಲ್ಲಿ ಟ್ರಸ್ಟ್ ಹಾಗೂ ಪ್ರಧಾನ ಅರ್ಚಕರ ನಡುವೆ ಭಿನ್ನಾಭಿಪ್ರಾಯಗಳಿದ್ದು, ಆಗಾಗ ಬೀದಿಗೆ ಬಿದ್ದು ಬಳಿಕ ಸರಿ ಹೋಗುತ್ತಿತ್ತು.
ಆದರೆ, ಕಳೆದ ನಾಲ್ಕು ದಿನಗಳ ಹಿಂದೆ ಟ್ರಸ್ಟ್ ಅಧ್ಯಕ್ಷರ ಬೆಂಬಲಿಗರು ಪ್ರಧಾನ ಅರ್ಚಕರ ಬಳಿ ಮುಂದಿನ ದಿನಗಳಲ್ಲಿ ನೀವು ಬರೀ ಪೂಜೆ ಮಾಡಬೇಕೆ ಹೊರತು ತೆಂಗಿನಕಾಯಿ ಒಡೆದು ಪೂಜೆ ಮಾಡುವಂತಿಲ್ಲ ಎಂದು ತಾಕೀತು ಮಾಡಿದ್ದರಂತೆ.
ಇದಕ್ಕೆ ಒಪ್ಪದ ಪ್ರಧಾನ ಅರ್ಚಕ ಶಿವನಂಜಪ್ಪ ನಾನು ಹಾಗೂ ನನ್ನ ಕುಟುಂಬ ಸುಮಾರು 55 ವರ್ಷಗಳಿಂದ ಶ್ರೀ ಕ್ಷೇತ್ರದಲ್ಲಿ ಅರ್ಚಕರಾಗಿ ಸೇವೆ ಮಾಡುತ್ತಿದ್ದೇವೆ.
ಹಿಂದಿನಿಂದಲು ಪೂಜೆ ಮಾಡುವ ನಮಗೆ ಕಾಯಿ ಒಡೆಯುವ ಮತ್ತು ಮಂಗಳಾರತಿ ಕೊಡುವ ಅಧಿಕಾರವಿದೆ ನಿಮ್ಮ ಬೆದರಿಕೆಗೆ ನಾವು ಬಗ್ಗುವುದಿಲ್ಲ ಎಂದು ಪೂಜಾ ಪದ್ಧತಿಯನ್ನು ಮುಂದುವರೆಸಿದ್ದರು ಎನ್ನಲಾಗಿದೆ.
ಇದರಿಂದ ಕೆರಳಿದ ಟ್ರಸ್ಟ್ ನ ಅಧ್ಯಕ್ಷರ ಬೆಂಬಲಿಗರು ಪ್ರಧಾನ ಅರ್ಚಕರ ಮೇಲೆ ದಾಳಿಗೆ ಮುಂದಾಗಿದ್ದು, ಭಯಗೊಂಡ ಅರ್ಚಕ ಶಿವನಂಜಪ್ಪ ದೇಗುಲಕ್ಕೆ ಬೀಗ ಹಾಕಿ ದೇವಸ್ಥಾನದ ಅಧಿಕಾರವಿರುವ 10 ಹಳ್ಳಿಯ ಜನರನ್ನು ಸೇರಿಸಿ, ಈ ಹಿಂದೆ ದೇವಸ್ಥಾನದಲ್ಲಿ ಪೂಜಾ ಪದ್ಧತಿಗಳನ್ನು ಕಾಲ-ಕಾಲದಿಂದ ಅರ್ಚಕರು ಮುಂದುರೆಸಿಕೊಂಡು ಬಂದಿದ್ದಾರೆ.
ಇದೀಗ ಅದನ್ನೆಲ್ಲ ನಮ್ಮಿಂದ ಟ್ರಸ್ಟ್ ನ ಅಧ್ಯಕ್ಷರು ಕಸಿದುಕೊಂಡಿದ್ದು, ಮತ್ತೆ ನಮಗೆ ನೀಡುವ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ದೇವಸ್ಥಾನಕ್ಕೆ ಹಾಕಿರುವ ಬೀಗ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಒಟ್ಟಿನಲ್ಲಿ ಟ್ರಸ್ಟ್ ಮತ್ತು ಅರ್ಚಕರ ನಡುವಿನ ಕಿತ್ತಾಟದಿಂದ ಪ್ರತಿ ದಿನ ದೇವಸ್ಥಾನಕ್ಕೆ ಬರುತ್ತಿದ್ದ ಭಕ್ತರಿಗೆ ತೊಂದರೆಯಾಗಿದೆ.
ಇನ್ನಾದರು ಸ್ಥಳೀಯ ಶಾಸಕರು ಹಾಗೂ ತಾಲೂಕು ಆಡಳಿತ ಮಧ್ಯ ಪ್ರವೇಶಿಸಿ ಅಲ್ಲಿ ನಡೆಯುತ್ತಿರುವ ಕಿತ್ತಾಟಕ್ಕೆ ಬ್ರೇಕ್ ಹಾಕಿ ದೇವಸ್ಥಾನಕ್ಕೆ ಹಾಕಿರುವ ಬೀಗವನ್ನು ತೆರವುಗೊಳಿಸಬೇಕಿದೆ.