ಚಾಮರಾಜನಗರ: ಮಲೆ ಮಹದೇಶ್ವರನೀಗ ಕೋಟಿ ಒಡೆಯ!
ಚಾಮರಾಜನಗರ, ನವೆಂಬರ್, 02: ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ಆದಿದೈವ ಮಹದೇಶ್ವರನೀಗ ಕೋಟಿ ಒಡೆಯನಾಗಿದ್ದಾನೆ. ಕಾರಣ ಇಲ್ಲಿ ಹುಂಡಿಗೆ ಬೀಳುವ ಕಾಣಿಕೆ ಕೋಟಿ ರೂ. ದಾಟುತ್ತಿದೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರವಾಸಿಗರ ಜತೆ ಡಕೋಟ ಬಸ್ಗಳ ಚೆಲ್ಲಾಟ
ಇತ್ತೀಚೆಗಿನ ದಿನಗಳಲ್ಲಿ ಮಲೆಮಹದೇಶ್ವರನ ಸನ್ನಿಧಿಗೆ ಆಗಮನಿಸುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಬರುತ್ತಿರುವುದರಿಂದಾಗಿ ತಮ್ಮ ಹರಕೆಯನ್ನು ಅರ್ಪಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ಭಕ್ತರು ತಮ್ಮ ಇಷ್ಟಾರ್ಥದಂತೆ ಕಾಣಿಕೆಯನ್ನು ಹಾಕುತ್ತಿರುವುದ ಮಹದೇಶ್ವರ ಹುಂಡಿಯ ಕಾಣಿಕೆ ಪ್ರಮಾಣವೂ ಹೆಚ್ಚಳವಾಗಿದೆ.
ಇದೀಗ ಒಟ್ಟು 1,09,10,190 ರು. (ಒಂದು ಕೋಟಿ ಒಂಭತ್ತು ಲಕ್ಷದ ಹತ್ತು ಸಾವಿರದ ನೂರತೊಂಭತ್ತು ರೂಪಾಯಿಗಳು) ಸಂಗ್ರಹವಾಗಿದ್ದು, ಇದರಲ್ಲಿ 27 ಗ್ರಾಂ ಚಿನ್ನ ಮತ್ತು 2.805 (ಎರಡು ಕೆ.ಜಿ ಎಂಟು ನೂರ ಐದು ಗ್ರಾಂ) ಬೆಳ್ಳಿ ಹುಂಡಿಯಲ್ಲಿ ಸಂಗ್ರಹವಾಗಿದೆ.
ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ಅವರ ಅಧ್ಯಕ್ಷತೆಯಲ್ಲಿ ಹಾಗೂ ಶ್ರೀ ಸಾಲೂರು ಬೃಹನ್ಮಠದ ಶ್ರೀ ಶ್ರೀ ಪಟ್ಟದ ಗುರುಸ್ವಾಮಿಗಳವರ ಉಪಸ್ಥಿತಿಯಲ್ಲಿ ಹುಂಡಿಯ ಎಣಿಕೆ ಕಾರ್ಯ ನಡೆದಿದ್ದು, ಆರಕ್ಷಕ ಸಿಬ್ಬಂದಿ ವರ್ಗ, ಎಸ್.ಬಿ.ಎಂ. ವ್ಯವಸ್ಥಾಪಕರಾದ ಸೆಂದಿಲ್ ನಾಥನ್ ಮತ್ತು ಸಿಬ್ಬಂದಿ ಹಾಜರಿದ್ದರು.