ಚಾಮರಾಜನಗರ: ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿದ ನಿರ್ದೇಶಕ ಎಸ್.ಎಸ್ ರಾಜಮೌಳಿ
ಚಾಮರಾಜನಗರ, ಸೆಪ್ಟೆಂಬರ್ 16: ತೆಲುಗು ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರು ಇಂದು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿ ಹಿಮವದ್ ಗೋಪಾಲಸ್ವಾಮಿ ಬೆಟ್ಟವಿದ್ದು, ಇಂದು ಬೆಳಿಗ್ಗೆ ನಿರ್ದೇಶಕ ರಾಜಮೌಳಿ ಅವರು ತಮ್ಮ ಪತ್ನಿಯೊಂದಿಗೆ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.
ಬಂಡೀಪುರ ಸಫಾರಿಗೆ ಹೋಗುವವರು ಇನ್ನು ಮೊಬೈಲ್ ಬಳಸುವಂತಿಲ್ಲ
ಗೋಪಾಲಸ್ವಾಮಿ ಬೆಟ್ಟದ ಪ್ರಕೃತಿ ಸೌಂದರ್ಯಕ್ಕೆ ಮನಸೋತ ರಾಜಮೌಳಿ ದಂಪತಿ, ನಂತರ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶಕ್ಕೂ ಭೇಟಿ ನೀಡಿದರು.
ಬಂಡೀಪುರ ಅರಣ್ಯ ಪ್ರದೇಶದಲ್ಲಿ ಸಫಾರಿಗೆ ಹೋಗಿದ್ದ ಅವರು ಬಂಡೀಪುರ ಅರಣ್ಯ ಪ್ರದೇಶದ ಸಿಬ್ಬಂದಿಯೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು. ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ಸೌಂದರ್ಯಕ್ಕೆ ತಲೆ ಬಾಗಿದ್ದಾರೆ. ನಂತರ ಸಿಬ್ಬಂದಿ ಜೊತೆ ಗುಂಪು ಫೋಟೋ ತೆಗೆಸಿಕೊಂಡು ವಾಪಸ್ ಹೋಗಿದ್ದಾರೆ.
ಈ ಹಿಂದೆ ಕೊರೊನಾ ವೈರಸ್ ನಿಂದ ಬಳಲುತ್ತಿದ್ದ ರಾಜಮೌಳಿ ಕುಟುಂಬ ಸದ್ಯ ಸಂಪೂರ್ಣ ಗುಣಮುಖವಾಗಿದ್ದಾರೆ. ರಾಜಮೌಳಿ ಅವರು ಮೂಲತಃ ಕರ್ನಾಟಕದವರೇ ಆಗಿದ್ದು, ಸದ್ಯ ಆಂಧ್ರಪ್ರದೇಶದಲ್ಲಿ ನೆಲೆಸಿದ್ದಾರೆ. ಮಗಧೀರ, ಈಗ, ಬಾಹುಬಲಿ, ಬಾಹುಬಲಿ-2 ನಂತಹ ಹಿಟ್ ಚಿತ್ರಗಳನ್ನು ನೀಡಿದ್ದಾರೆ.
ಸದ್ಯ ಇವರ ನಿರ್ದೇಶನದಲ್ಲಿ 'ಆರ್ಆರ್ಆರ್' ಸಿನಿಮಾ ತಯಾರಾಗುತ್ತಿದೆ. ಜೂ.ಎನ್ಟಿಆರ್ ಮತ್ತು ರಾಮ್ ಚರಣ್ ನಾಯಕತ್ವದಲ್ಲಿ ಮೂಡಿ ಬರಲಿರುವ ಈ ಸಿನಿಮಾದ ಚಿತ್ರೀಕರಣ ಕೊರೊನಾ ಲಾಕ್ ಡೌನ್ ನಿಂದಾಗಿ ನಿಂತಿತ್ತು. ಸದ್ಯದರಲ್ಲಿಯೇ ಚಿತ್ರೀಕರಣ ಪ್ರಾರಂಭವಾಗಲಿದೆ.