ಹೊಲದಲ್ಲೇ ಕೊಳೆಯುತ್ತಿದೆ ಕಲ್ಲಂಗಡಿ; ಚಾಮರಾಜನಗರ ರೈತರ ಗೋಳು
ಚಾಮರಾಜನಗರ, ಏಪ್ರಿಲ್ 03: ಬೇಸಿಗೆ ದಿನಗಳಲ್ಲಿ ಬಿಸಿಲಿನಿಂದ ಬಳಲಿದ ಜೀವಕ್ಕೆ ತಂಪು ನೀಡುತ್ತಿದ್ದ ಕಲ್ಲಂಗಡಿ ಹಣ್ಣಿನ ವ್ಯಾಪಾರ ಜೋರಾಗಿ ನಡೆಯುತ್ತಿತ್ತು. ಆದರೆ ದೇಹಕ್ಕೆ ತಂಪಿನ ಜೊತೆಗೆ ಪೋಷಕ ಶಕ್ತಿಯನ್ನು ನೀಡುತ್ತಿದ್ದ ಕಲ್ಲಂಗಡಿ ಹಣ್ಣಿನ ವ್ಯಾಪಾರ ಕೊರೊನಾ ವೈರಸ್ ನಿಂದಾಗಿ ತತ್ತರಿಸಿದೆ.
ಕೊರೊನಾ ನಿಯಂತ್ರಣದ ಕಾರಣ ಲಾಕ್ ಡೌನ್ ಆಗಿರುವುದರಿಂದ ಮಾರುಕಟ್ಟೆಗೆ ಬಾರದೆ ಕಲ್ಲಂಗಡಿ ಹಣ್ಣುಗಳು ಹೊಲದಲ್ಲಿಯೇ ಉಳಿಯುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಬೇಸಿಗೆ ಹೊತ್ತಿಗೆ ಫಸಲು ಬಂದರೆ ಒಂದಷ್ಟು ಆದಾಯ ಪಡೆದು ಆರ್ಥಿಕವಾಗಿ ಸುಧಾರಿಸಿಕೊಳ್ಳಬಹುದು ಎಂದು ನಂಬಿದ್ದ ರೈತರು ಈಗ ತಾವು ಬೆಳೆದ ಬೆಳೆ ಹೊಲದಲ್ಲಿಯೇ ಕೊಳೆತು ಹೋಗುತ್ತಿರುವುದನ್ನು ನೋಡಿ ಕಣ್ಣೀರಿಡುತ್ತಿದ್ದಾರೆ.
ಹೊಲದಲ್ಲೇ ಕೊಳೆಯುತ್ತಿರುವ ಕಲ್ಲಂಗಡಿ
ಇಂದು ರಾಜ್ಯದಾದ್ಯಂತ ಕಲ್ಲಂಗಡಿ ಬೆಳೆದ ರೈತರೆಲ್ಲರದೂ ಒಂದೇ ಸ್ಥಿತಿಯಾಗಿದೆ. ಅದರಲ್ಲೂ ಚಾಮರಾಜನಗರದಲ್ಲಿ ಹೆಚ್ಚಿನ ರೈತರು ಕಲ್ಲಂಗಡಿಯನ್ನು ಬೆಳೆದಿದ್ದು, ಅವರೆಲ್ಲರೂ ಕಲ್ಲಂಗಡಿಯನ್ನು ಮಾರುಕಟ್ಟೆಗೆ ಸಾಗಿಸಲಾಗದೆ ಹೊಲದಲ್ಲಿಯೇ ಬಿಡುವಂತಾಗಿದೆ. ಹೊಲದಲ್ಲೇ ಬಿಟ್ಟಿದ್ದರಿಂದ ಬಿಸಿಲಿಗೆ ಒಣಗಿ ಅವು ಅಲ್ಲೇ ಕೊಳೆಯುತ್ತಿವೆ. ಇತ್ತ ಫಸಲೂ ಇಲ್ಲದೇ, ಆದಾಯವೂ ಇಲ್ಲದೆ ರೈತರು ಕಂಗಾಲಾಗಿದ್ದಾರೆ.
ಕೊರೊನಾ ಎಪೆಕ್ಟ್: ಬೆಳಗಾವಿಯಲ್ಲಿ 10 ಲಕ್ಷ ಕಲ್ಲಂಗಡಿ ನಾಶ
ಐದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಲ್ಲಂಗಡಿ
ಒಂದು ವೇಳೆ ರೈತರು ಸರ್ಕಸ್ ಮಾಡಿ ಮಾರುಕಟ್ಟೆಗೆ ಅವುಗಳನ್ನು ತಂದರೂ, ಕೊಳ್ಳುವವರೂ ಇಲ್ಲದಂತಾಗಿದೆ. ಚಾಮರಾಜನಗರ ತಾಲೂಕಿನಲ್ಲೊಂದರಲ್ಲೇ ಸುಮಾರು ಐದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಪ್ರತಿ ವರ್ಷ ಕಲ್ಲಂಗಡಿ ಬೆಳೆಯಲಾಗುತ್ತದೆ. ತಾಲೂಕಿನ ಮಂಚಹಳ್ಳಿ, ಮಾಡ್ರಹಳ್ಳಿ, ಹಂಗಳ, ದೇಶೀಪುರ, ರಾಘವಾಪುರ, ಮುಂತಾದ ಗ್ರಾಮದಲ್ಲಿ ಕಲ್ಲಂಗಡಿ ಬೆಳೆದಿದ್ದಾರೆ. ಪರಿಸ್ಥಿತಿ ಎಂದಿನಂತಿದ್ದರೆ ರೈತರಿಗೆ ಒಂದಷ್ಟು ಆದಾಯ ಬರುತ್ತಿತ್ತೇನೋ ಆದರೆ ಈಗ ಎಲ್ಲವೂ ತಲೆಕೆಳಗಾಗಿದೆ.
ಹೊಲದಲ್ಲೇ ಉಳಿದ ಕಲ್ಲಂಗಡಿ
ಇಲ್ಲಿ ಬೆಳೆಯುವ ಕಲ್ಲಂಗಡಿಯನ್ನು ಕೇರಳ, ತಮಿಳುನಾಡು ಮಾರುಕಟ್ಟೆಗೆ ಅತಿ ಹೆಚ್ಚಾಗಿ ಕಳುಹಿಸಲಾಗುತ್ತಿತ್ತು. ಬೇಸಿಗೆ ಆರಂಭಗೊಳ್ಳುವ ಮೊದಲೇ ರೈತರು, ಕಲ್ಲಂಗಡಿ ಬೆಳೆದಿದ್ದು, ಬೇಸಿಗೆ ಅವಧಿಯಲ್ಲಿ ಜನರು ಹೆಚ್ಚಾಗಿ ಕಲ್ಲಂಗಡಿ ಹಣ್ಣನ್ನು ಇಷ್ಟಪಡುವ ಕಾರಣ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿತ್ತು. ಹೀಗಾಗಿ ದೇಶದ ವಿವಿಧ ಸ್ಥಳಗಳಿಗೆ ಕಳುಹಿಸಲಾಗುತ್ತಿತ್ತು. ಅಲ್ಲದೆ ಸ್ಥಳೀಯವಾಗಿಯೂ ಜ್ಯೂಸ್ ಅಂಗಡಿಯವರು ಖರೀದಿಸುತ್ತಿದ್ದರು. ಇದರಿಂದ ರೈತರಿಗೆ ಲಾಭವಾಗುತ್ತಿತ್ತು. ಈಗಿನ ಪರಿಸ್ಥಿತಿಯಲ್ಲಿ ಜ್ಯೂಸ್ ಅಂಗಡಿಯವರಾಗಲೀ, ಜನರಾಗಲೀ ಕಲ್ಲಂಗಡಿಯನ್ನು ಖರೀದಿಸದ ಕಾರಣದಿಂದಾಗಿ ಕಲ್ಲಂಗಡಿ ಹೊಲದಲ್ಲಿಯೇ ಉಳಿದಿದೆ.
ಮೆಣಸಿನ ಕಾಯಿಗೆ ಸಿಗದ ಬೆಲೆ; ಫ್ರೀಯಾಗಿ ಹಂಚಿದ ಕೊಡಗಿನ ರೈತ
ನಾಲ್ಕೈದು ಲಕ್ಷ ಆದಾಯ ತರುತ್ತಿದ್ದ ಹಣ್ಣು
ಸಾಮಾನ್ಯ ದಿನಗಳಲ್ಲಿ 2 ರಿಂದ 3 ಎಕರೆ ಕಲ್ಲಂಗಡಿ ಬೆಳೆದರೆ, ಅದು ಬೇಸಿಗೆ ಅವಧಿಯಲ್ಲಿ 4 ರಿಂದ 5 ಲಕ್ಷ ಆದಾಯ ತಂದು ಕೊಡುತ್ತಿತ್ತು. ವ್ಯಾಪಾರಸ್ಥರು ಒಂದು ಕೆ.ಜಿ. ಕಲ್ಲಂಗಡಿಯನ್ನು 10 ರಿಂದ 15 ರೂ.ಗೆ ಪಡೆದು, ಅದರಿಂದ 50 ರಿಂದ 60 ರೂ. ಲಾಭ ಮಾಡಿಕೊಳ್ಳುತ್ತಿದ್ದರು. ಅದಕ್ಕೆಲ್ಲ ಈ ಬಾರಿ ಕೊರೊನಾ ಬರೆ ಎಳೆದಿದೆ. ಇದರಿಂದಾಗಿ ಮೊದಲೇ ಸಂಕಷ್ಟದಲ್ಲಿದ್ದ ರೈತರು ಕಲ್ಲಂಗಡಿ ಬೆಳೆದು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಬೆಳೆ ಬೆಳೆದ ಎಲ್ಲ ರೈತರದ್ದೂ ಒಂದೇ ಕಥೆಯಾಗಿದೆ. ಒಂದಷ್ಟು ಮಂದಿ ಸ್ಥಳೀಯವಾಗಿ ಮನೆಮನೆಗಳಿಗೆ ತೆರಳಿ ಮಾರಾಟ ಮಾಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆದರೆ ಅದು ಯಶಸ್ಸಾಗುವಂತೆ ಕಾಣುತ್ತಿಲ್ಲ. ಒಟ್ಟಾರೆ ಕಲ್ಲಂಗಡಿ ಬೆಳೆದ ರೈತನ ಕಥೆ ಚಿಂತಾಜನಕವಾಗಿರುವುದಂತು ಸತ್ಯ.
ಲಾಕ್ ಡೌನ್: ರೈತರಿಂದ ನೇರವಾಗಿ ಹಣ್ಣುಗಳನ್ನು ಖರೀದಿಸಲು ಸರ್ಕಾರ ತೀರ್ಮಾನ