ವಿಷ ಪ್ರಸಾದ ಪ್ರಕರಣ : ಮೃತರ ಸಂಖ್ಯೆ 14, ನಾಲ್ವರು ಶಂಕಿತರು ವಶಕ್ಕೆ
ಚಾಮರಾಜನಗರ, ಡಿಸೆಂಬರ್ 17 : ಚಾಮರಾಜನಗರದ ಹನೂರು ತಾಲೂಕಿನ ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ವಿಷ ಪ್ರಸಾದ ಸೇವನೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪ್ರಸಾದ ಸೇವಿಸಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಮೈಲಿ ಬಾಯಿ ಸೋಮವಾರ ಮುಂಜಾನೆ ಮೃತಪಟ್ಟಿದ್ದಾರೆ. ವಿಷ ಪ್ರಸಾದ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲು ಮಾಡಲಾಗಿದ್ದಾರೆ.
ದೇವಾಲಯದ ಪ್ರಸಾದದಲ್ಲಿ ವಿಷ ಹೆಚ್ಚಿನ ಪ್ರಮಾಣದಲ್ಲಿ ಬೆರೆಸಿದ್ದಾರೆ: ವೈದ್ಯಾಧಿಕಾರಿ
ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಪ್ಪಿ, ಮಾದೇಶ ಅವರನ್ನು ಪೊಲೀಸರು ಬಂಧಿಸಿದ್ದರು. ಈಗ ಈರಣ್ಣ, ಲೋಕೇಶ, ಪೂಜಾರಿ ಮಾದೇವ, ಪುಟ್ಟಸ್ವಾಮಿ, ಮಹಾದೇವಸ್ವಾಮಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪ್ರಸಾದ ದುರಂತಕ್ಕೆ ಸಂಬಂಧಿಸಿದಂತೆ ಎಫ್ಐಆರ್ ಸಿದ್ದಗೊಳಿಸಲಾಗಿದೆ. ಘಟನೆ ನಡೆದ ದಿನ ಪ್ರತ್ಯಕ್ಷ ದರ್ಶಿಯಾಗಿದ್ದ ರಾಜಮ್ಮ ಎಂಬುವವರ ಹೇಳಿಕೆ ಅನ್ವಯ ಎಫ್ಐಆರ್ ದಾಖಲು ಮಾಡಲಾಗಿದ್ದು, ಆರು ಆರೋಪಿಗಳನ್ನು ಉಲ್ಲೇಖಿಸಲಾಗಿದೆ.
ವಿಷಪ್ರಸಾದ ಸೇವನೆ: ಹುಟ್ಟುಹಬ್ಬದಂದೇ ಸಾವನ್ನಪ್ಪಿದ ಬಾಲಕ
ಐಪಿಸಿ ಸೆಕ್ಷನ್ 304 (ಹತ್ಯೆ ಉದ್ದೇಶವಿಲ್ಲದೇ ಸಂಭವಿಸಿದ ಸಾವು) ಅಡಿ ಪ್ರಕರಣ ದಾಖಲಾಗಿದೆ. ಸುಳವಾಡಿ ದೇವಾಲಯದ ಟ್ರಸ್ಟಿ ಚಿನ್ನಪ್ಪಿ, ಮಹಾದೇವಸ್ವಾಮಿ, ಈರಣ್ಣ, ಲೋಕೇಶ, ಪೂಜಾರಿ ಮಾದೇವ, ಪುಟ್ಟಸ್ವಾಮಿ ಆರೋಪಿಗಳಾಗಿದ್ದಾರೆ.
ವಕಾಲತ್ತು ವಹಿಸುವುದಿಲ್ಲ : ವಿಷ ಪ್ರಸಾದ ಸೇವನೆ ಪ್ರಕರಣದಲ್ಲಿ ಆರೋಪಿಗಳ ಪರ ವಕಾಲತ್ತು ವಹಿಸದಿರಲು ವಕೀಲರು ನಿರ್ಧರಿಸಿದ್ದಾರೆ. ಚಾಮರಾಜನಗರದ ವಕೀಲರ ಸಂಘ ಈ ಕುರಿತು ತೀರ್ಮಾನವನ್ನು ಕೈಗೊಂಡಿದೆ.
4 ತಂಡಗಳ ರಚನೆ : ವಿಷ ಪ್ರಸಾದ ಸೇವನೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ತನಿಖಾಧಿಕಾರಿಯಾಗಿ ಕೊಳ್ಳೇಗಾಲ ಡಿವೈಎಸ್ಪಿ ಪುಟ್ಟ ಮಾದಯ್ಯ ಅವರನ್ನು ನೇಮಿಸಲಾಗಿದೆ. 20 ಮಂದಿ ಅಧಿಕಾರಿಗಳ ತಂಡವನ್ನು ರಚನೆ ಮಾಡಲಾಗಿದೆ.