ಕಾಡಂಚಿನ ಉಪಕಾರ ಗ್ರಾಮಕ್ಕೆ ಉಪಕಾರ ಮಾಡೋರೇ ಇಲ್ಲ!
ಚಾಮರಾಜನಗರ, ಜುಲೈ 14: ಬಂಡೀಪುರ ಕಾಡಂಚಿನಲ್ಲಿರುವ ಗ್ರಾಮಗಳ ಸರ್ಕಾರಿ ಶಾಲೆಗಳ ಸ್ಥಿತಿ ಶೋಚನೀಯವಾಗಿದ್ದು, ಇಲ್ಲಿರುವ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿ ಭಯದಲ್ಲೇ ಪಾಠ ಕೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂತಹ ಶಾಲೆಗಳಿಗೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಕುಂದಕೆರೆ ವಲಯದ ಕಾಡಂಚಿನಲ್ಲಿರುವ ಉಪಕಾರ ಗ್ರಾಮದ ಶಾಲೆ ನಿದರ್ಶನವಾಗಿದೆ. ಇಲ್ಲಿ ಪರಿಶಿಷ್ಟ ಜನಾಂಗದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಗ್ರಾಮವು ಹಿಂದುಳಿದ ಕಾರಣ ಶಾಲೆಯೂ ಯಾವುದೇ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವುದು ಗೋಚರಿಸುತ್ತಿದೆ.
ಮಳೆ ಬಂದರೆ ಕೆರೆಯಾಗುವ ಗುಂಡ್ಲುಪೇಟೆ ಬಸ್ ನಿಲ್ದಾಣ!
ಗ್ರಾಮದ ಹೆಸರು ಉಪಕಾರವಾಗಿದ್ದರೂ ಇಲ್ಲಿನ ಜನತೆಗೆ ಮತ್ತು ಮಕ್ಕಳಿಗೆ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ಉಪಕಾರ ಮಾಡಬೇಕೆನ್ನುವ ಮನೋಭಾವ ಜನಪ್ರತಿನಿಧಿಗಳಿಗಾಗಲೀ ಅಧಿಕಾರಿಗಳಿಗಾಗಲೀ ಬಾರದ ಕಾರಣ ಮೂಲೆಗುಂಪಾಗಿದ್ದು, ಮಕ್ಕಳು ಸಂಕಷ್ಟದಲ್ಲಿ ಪಾಠ ಕಲಿಯುವಂತಾಗಿದೆ.
ಇಲ್ಲಿನ ರಸ್ತೆಗಳಿಗೆ ಚರಂಡಿಗಳೇ ಇಲ್ಲ. ಇರುವ ಚರಂಡಿಗಳನ್ನು ಅಭಿವೃದ್ಧಿಗೊಳಿಸದ ಕಾರಣದಿಂದಾಗಿ ಹೂಳು ತುಂಬಿ ತ್ಯಾಜ್ಯ ಹರಿಯದಂತಾಗಿದೆ. ಶಾಲೆಯ ಸ್ಥಿತಿ ಅಯೋಮಯವಾಗಿದ್ದು, ಇದಕ್ಕೆ ಯಾವುದೇ ಕಾಂಪೌಂಡ್ ಇಲ್ಲದೆ ಭಯದಲ್ಲೇ ಮಕ್ಕಳು ಪಾಠ ಕಲಿಯಬೇಕಾಗಿದೆ. ಕಾರಣ ಕಾಡಂಚಿನ ಗ್ರಾಮವಾಗಿರುವ ಕಾರಣ ಯಾವಾಗ ಬೇಕಾದರೂ ಕಾಡುಪ್ರಾಣಿಗಳು ಇತ್ತ ಬರುವ ಸಾಧ್ಯತೆಯಿದೆ. ಶಾಲೆಗೆ ಯಾವುದೇ ರೀತಿಯ ಶೌಚಾಲಯವಿಲ್ಲ. ಶೌಚಕ್ಕೆ ವಿದ್ಯಾರ್ಥಿಗಳು ಶಾಲೆಯ ಎದುರಿನ ಕಟ್ಟಡಕ್ಕೆ ಹೋಗಬೇಕಾಗಿದೆ. ಇಲ್ಲಿರುವ ಅಂಗನವಾಡಿಗೂ ಶೌಚಾಲಯದ ವ್ಯವಸ್ಥೆಯಿಲ್ಲವಾಗಿದೆ.
ಗ್ರಾಮದ ರಸ್ತೆಗೆ ಡಾಂಬರೀಕರಣ ಮಾಡಿದ್ದರೂ ಬೆಳಗ್ಗೆ ಮತ್ತು ರಾತ್ರಿ ಹೊರತು ಪಡಿಸಿ ಉಳಿದ ಸಮಯದಲ್ಲಿ ಬಸ್ಸು ವ್ಯವಸ್ಥೆಯಿಲ್ಲದೆ ಕಾಡು ಪ್ರಾಣಿಗಳ ಭಯದಲ್ಲೇ ಗ್ರಾಮದ ಜನ ನಡೆದುಕೊಂಡು ಹೋಗಬೇಕಾಗಿದೆ. ಯಾರಾದರೂ ಅನಾರೋಗ್ಯಕ್ಕೀಡಾದರೆ ಹೊತ್ತುಕೊಂಡು ಹೋಗಬೇಕಾದ ಪರಿಸ್ಥಿತಿಯೂ ಇಲ್ಲಿನವರದ್ದಾಗಿದೆ. ಇಲ್ಲಿರುವ ಡಿಪಿಇಪಿ ಕಟ್ಟಡವು ಉಪಯೋಗಕ್ಕೆ ಬಾರದೆ ದನಗಳ ದೊಡ್ಡಿಯಾಗಿದ್ದು, ಆನೆಗಳ ದಾಳಿಯಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಗ್ರಾಮಸ್ಥರು ಈ ಕಟ್ಟಡದ ಛಾವಣಿಯ ಮೇಲೆ ಹುರುಳಿ ಮೇವನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಗ್ರಾಮದಲ್ಲಿ ಎಸ್ಇಪಿ ಎಸ್ಟಿಪಿ ಯೋಜನೆಯಲ್ಲಿ ಪರಿಶಿಷ್ಟ ಜನಾಂಗದ ಬಡಾವಣೆಗಳಿಗೆ ಕಾಂಕ್ರಿಟ್ ರಸ್ತೆ ಹಾಗೂ ಚರಂಡಿಗಳ ನಿರ್ಮಾಣ ಮಾಡಬೇಕಾಗಿದ್ದರೂ ಇನ್ನೂ ಮಾಡಿಲ್ಲ. ಆದ್ದರಿಂದ ಗ್ರಾಮದ ಚರಂಡಿಗಳಲ್ಲಿ ಹೂಳು ತುಂಬಿ ಕೊಳಚೆ ನೀರು ಮಡುಗಟ್ಟಿ ನಿಲ್ಲುತ್ತಿದೆ. ಸಮೀಪದ ಮನೆಗಳವರು ಈ ದುರ್ವಾಸನೆಯನ್ನು ಸಹಿಸಿಕೊಂಡು ದಿನಕಳೆಯುವುದು ಅನಿವಾರ್ಯವಾಗಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಬೇಕಾಗಿದೆ.