ಚಾಮರಾಜನಗರ: ದಕ್ಷ ಅಧಿಕಾರಿ ವರ್ಗಾವಣೆಯಲ್ಲಿ ರಾಜಕೀಯ?
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸರಸ್ವತಿ ಅವರನ್ನು ತಮ್ಮ ಪ್ರಭಾವ ಬೀರಿ ಪದೇ ಪದೇ ವರ್ಗಾವಣೆ ಮಾಡಿಸಿದ್ದಾರೆಂದು ಚಾಮರಾಜ ನಗರ ಶಾಸಕ ಪುಟ್ಟರಂಗ ಶೆಟ್ಟಿಯವರ ಬಗ್ಗೆ ಕ್ಷೇತ್ರದ ಜನರು ಸಂಶಯದಿಂದ ನೋಡುವಂತಾಗಿದೆ.
ಚಾಮರಾಜನಗರ, ಮೇ 23: ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸರಸ್ವತಿಯವರನ್ನು ಪದೇ ಪದೇ ವರ್ಗಾವಣೆ ಮಾಡುತ್ತಿರುವುದು ಜಿಲ್ಲೆಯ ರಾಜಕೀಯ ಚದುರಂಗದಾಟದ ಮತ್ತೊಂದು ಮುಖ ಎಂದೇ ಪರಿಗಣಿಸಲಾಗುತ್ತಿದೆ.
ಕೆಲವು ತಿಂಗಳುಗಳ ಹಿಂದಷ್ಟೇ ವರ್ಗಾವಣೆಗೊಂಡಿದ್ದ ಸರಸ್ವತಿ ಅವರನ್ನು ಕಳೆದ ವರ್ಷ ಜುಲೈನಲ್ಲಿ ಎತ್ತಂಗಡಿ ಮಾಡಲಾಗಿತ್ತು. ಆದರೆ, ಇವರ ದಕ್ಷತೆಯನ್ನ ಗುರುತಿಸಿದ್ದ ಕ್ಷೇತ್ರದ ಸಂಸದ ಧ್ರುವನಾರಾಯಣ್ ಹಾಗೂ ಅಂದಿನ ಉಸ್ತುವಾರಿ ಸಚಿವರಾಗಿದ್ದ ದಿ.ಮಹದೇವ್ರಸಾದ್ರವರು ಈ ಆದೇಶ ರದ್ದುಗೊಳಿಸಿ ಅವರನ್ನು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಯನ್ನಾಗಿ ಮುಂದುವರಿಸಿದರು.
ಆದರೀಗ ಮತ್ತೆ ಅವರ ವರ್ಗಾವಣೆಯಾಗಿದ್ದು, ಇದು ಅವರ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ನಡುವಿನ ಶೀತಲ ಸಮರ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ವರ್ಗಾವಣೆಗೆ ಸಂಬಂಧಿಸಿದಂತೆ ಈ ಹಿಂದೆ ಆರೋಪ ಪ್ರತ್ಯಾರೋಪಗಳು ನಡೆದಿದ್ದನ್ನೂ ಇಲ್ಲಿ ಸ್ಮರಿಸಬಹುದಾಗಿದೆ.
ಇದರ ಹಿಂದಿನ ರಾಜಕೀಯ ಆಟಗಳೇನೇ ಇದ್ದರೂ, ದಕ್ಷ ಅಧಿಕಾರಿಯೊಬ್ಬರ ವಿಚಾರದಲ್ಲಿ ಕೊನೆಗೂ ರಾಜಕೀಯವೇ ಮೇಲುಗೈ ಸಾಧಿಸಿದೆ.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸರಸ್ವತಿ ಅವರು ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು. ಖುದ್ದು ಹಾಡಿಗೆ ಹೋಗಿ ಅಲ್ಲಿಯ ಪರಿಸ್ಥಿತಿಯನ್ನು ಅವಲೋಕಿಸಿ ಸೌಲಭ್ಯಗಳನ್ನು ನೀಡುವ ಕಾರ್ಯವನ್ನು ಮಾಡಿದ್ದರು. ಅವರ ಕೆಲಸ ಕಾರ್ಯಗಳು ಕೆಲವರ ಕಣ್ಣನ್ನು ಕೆಂಪಾಗಿಸಿತ್ತು.
ಇದರ ಪರಿಣಾಮವಾಗಿ, ಶಾಸಕ ಪುಟ್ಟರಂಗಶೆಟ್ಟರ ಒತ್ತಡಕ್ಕೆ ಮಣಿದ ಸರ್ಕಾರ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾದಿಕಾರಿ ಸರಸ್ವತಿ ಅವರನ್ನು 2016ರ ಜುಲೈ 29ರಂದು ಚಾಮರಾಜನಗರದಿಂದ ಮೈಸೂರಿನ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರನ್ನಾಗಿ ವರ್ಗಾಯಿಸಿ ಆದೇಶ ಹೊರಡಿಸಿತ್ತು. ಇವರಿಂದ ತೆರವಾದ ಸ್ಥಾನಕ್ಕೆ ಮಡಿಕೇರಿಯಲ್ಲಿ ಟಿಎಸ್ಡಬ್ಲ್ಯು ಆಗಿ ಕರ್ತವ್ಯನಿರ್ವಹಿಸುತ್ತಿದ್ದ ಕೆ.ಎಚ್.ಸತೀಶ್ ಅವರನ್ನು ನೇಮಿಸಿಆದೇಶ ನೀಡಿತ್ತು.
ಈ ನಡುವೆ ಶಾಸಕ ಪುಟ್ಟರಂಗಶೆಟ್ಟಿ ಮತ್ತು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಸರಸ್ವತಿ ಅವರ ನಡುವೆ ಶೀತಲ ಸಮರ ಆರಂಭವಾಗಿತ್ತು. ಶಾಸಕರ ಮಾತಿಗೆ ಅವರು ಸೊಪ್ಪು ಹಾಕುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಹೀಗಾಗಿ ಸರಸ್ವತಿ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲು ಶಾಸಕರು ಪ್ರಯತ್ನ ಮುಂದುವರೆಸಿದ್ದರು.
ಪ್ರಭಾವ ಬಳಸಿದ ಶಾಸಕರು, ಕಳೆದ ವರ್ಷ ಮುಖ್ಯಮಂತ್ರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಸರಸ್ವತಿ ವಿರುದ್ಧ ದೂರು ಸಲ್ಲಿಸಿದ ಹಿನ್ನಲೆಯಲ್ಲಿ ವಿಚಾರಣೆ ನಡೆಸಿ ವರದಿ ನೀಡುವಂತೆ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ, ಅಂದಿನ ಸಮಾಜಕಲ್ಯಾಣ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್ರವರಿಗೆ ಸೂಚಿಸಿದ್ದರು.
ಹಾಗಾಗಿ, ಇದೇ ವರ್ಷ ಮಾರ್ಚ್ 15 ರಂದು, ಮಣಿವಣ್ಣನ್ ಅವರು ವರದಿ ಸಲ್ಲಿಸಿದ್ದರು. ತನಿಖೆ ನಿಮಿತ್ತ ತಾವು ಮೂರು ಬಾರಿಚಾಮರಾಜನಗರಕ್ಕೆ ಭೇಟಿ ನೀಡಿ ಇಲಾಖಾ ತಪಾಸಣಾ ನಡೆಸಿದ್ದು, ಕಲ್ಯಾಣಾಧಿಕಾರಿ ಸರಸ್ವತಿಯವರ ಕರ್ತವ್ಯ ನಿರ್ವಹಣೆ ಸಮರ್ಪಕವಾಗಿದೆ. ಅವರ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಸರಸ್ವತಿಯವರು ದಕ್ಷಅಧಿಕಾರಿಯಾಗಿದ್ದಾರೆ ಎಂದು ಸರ್ಕಾರಕ್ಕೆ ಇವರ ವರದಿ ನೀಡಿದ್ದರು. ಇದು ಶಾಸಕರಿಗೆ ಹಿನ್ನಡೆಯನ್ನುಂಟು ಮಾಡಿತ್ತು.
ಸರಸ್ವತಿ ಅವರು ದಕ್ಷ ಅಧಿಕಾರಿ ಎಂಬುದನ್ನು ಮನಗಂಡಿದ್ದ ಚಾಮರಾಜನಗರ ಸಂಸದ ಧ್ರುವನಾರಾಯಣ್ ಹಾಗೂ ಅಂದಿನ ಉಸ್ತುವಾರಿ ಸಚಿವರಾಗಿದ್ದ ದಿ. ಮಹದೇವ್ರಸಾದ್ರವರು ಸರಸ್ವತಿಯವರ ವರ್ಗಾವಣೆಯನ್ನು ರದ್ದುಗೊಳಿಸಿ ಚಾಮರಾಜನಗರದಲ್ಲೇ ಮುಂದುವರೆಯುವಂತೆ ಮಾಡಿದ್ದರು.
ಇದು ಶಾಸಕ ಪುಟ್ಟರಂಗಶೆಟ್ಟಿ ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ಅವರನ್ನು ವರ್ಗಾವಣೆಗೊಳಿಸಲಾಗಿರುವುದು ಜನರಲ್ಲಿ ಶಾಸಕರ ಮೇಲೆ ಅಸಮಾಧಾನಕ್ಕೆ ಕಾರಣವಾಗಿದೆ.