ನೆರೆ ಸಂತ್ರಸ್ತರಿಗೆ ಚಾಮರಾಜನಗರದಿಂದ 1 ಲಕ್ಷ ಚಪಾತಿ
ಚಾಮರಾಜನಗರ, ಆಗಸ್ಟ್ 19: ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹ ಈ ಬಾರಿ ಸಂಭವಿಸಿದೆ. ಇದರ ಹೊಡೆತಕ್ಕೆ ಸಿಲುಕಿರುವ ಉತ್ತರ ಕರ್ನಾಟಕದ ಜನರ ಸಂಕಷ್ಟಕ್ಕೆ ರಾಜ್ಯಾದ್ಯಂತ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಈ ನಡುವೆ ಚಾಮರಾಜನಗರ ಜನತೆ ಕೂಡ ನಾವು ನಿಮ್ಮೊಂದಿಗಿದ್ದೇವೆ ಎಂಬ ಅಭಿಯಾನದಡಿ ಒಂದು ಲಕ್ಷ ಒಣ ಚಪಾತಿ ರವಾನಿಸಲು ತಯಾರಿ ನಡೆಸಿದ್ದಾರೆ.
ಈಗಾಗಲೇ ನಗರದ ಗಾನಕವಿ ಫೌಂಡೇಷನ್ ಸಂಸ್ಥೆ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ವರ್ತಕರ ಸಂಘದ ಸಹಯೋಗದಲ್ಲಿ ನಗರದ ಶಂಕರಪುರ ಬಡಾವಣೆಯ ರಾಮಮಂದಿರದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಹಿಳೆಯರು ಒಣ ಚಪಾತಿ ತಯಾರಿಕೆಯಲ್ಲಿ ತೊಡಗಿದ್ದು, 50ಕ್ಕೂ ಹೆಚ್ಚು ಮಂದಿ ಚಪಾತಿ ತಯಾರಿಸಲು ಕೈಜೋಡಿಸಿದ್ದಾರೆ. ಎಲ್ಲರ ಸಹಕಾರದೊಂದಿಗೆ ಚಪಾತಿ ತಯಾರಿ ಕೆಲಸ ಭರದಿಂದ ಸಾಗುತ್ತಿದೆ. ಕೆಲವರು ಚಪಾತಿ ಹದ ಮಾಡಿಕೊಟ್ಟರೆ, ಎರಡು ಒಲೆಗಳಲ್ಲಿ ಚಪಾತಿಯನ್ನು ಬೇಯಿಸಿಕೊಡುವ ಕೆಲಸವನ್ನು ಮತ್ತೆ ಕೆಲವರು ಮಾಡುತ್ತಿದ್ದಾರೆ.
ನೆರೆ ಪರಿಹಾರ ನಿಧಿಗೆ ಧರ್ಮಸ್ಥಳದಿಂದ 25 ಕೋಟಿ ರೂಪಾಯಿ
ಮಂದಿರದ ಎರಡು ಕಡೆ ಬೇಯಿಸಿದ ಚಪಾತಿಯನ್ನು ಸಂಗ್ರಹಿಸಿಡಲಾಗುತ್ತಿದ್ದು, ಬಳಿಕ ಕವರ್ ನಲ್ಲಿ ಪ್ಯಾಕ್ ಮಾಡಿ ರವಾನಿಸಲು ಚಿಕ್ಕ ಚಿಕ್ಕ ಬಾಕ್ಸ್ ಗಳನ್ನು ಇಡಲಾಗಿದೆ. ಇಂದು ವರ್ತಕರ ಸಹಕಾರದೊಂದಿಗೆ ಉತ್ತರ ಕರ್ನಾಟಕಕ್ಕೆ ರವಾನಿಸುವ ಕಾರ್ಯ ನಡೆಯಲಿದೆ.
ಈ ಕುರಿತಂತೆ ಮಾತನಾಡಿರುವ ಗಾನಕವಿ ಫೌಂಡೇಷನ್ ಅಧ್ಯಕ್ಷ ವಿಶ್ವಕುಮಾರ್ ಅವರು, "ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಶಾಲಾ, ಕಾಲೇಜು ಹಾಗೂ ಸಾರ್ವಜನಿಕರ ನೆರವಿನಿಂದ ಒಂದು ಲಕ್ಷ ಒಣ ಚಪಾತಿಗಳನ್ನು ಸಂಗ್ರಹಿಸಿ ಉತ್ತರ ಕರ್ನಾಟಕದ ಜನತೆಗೆ ರವಾನಿಸಲಾಗುವುದು" ಎಂದು ಹೇಳಿದ್ದಾರೆ.
ಕೊಪ್ಪಳ : ವಿದ್ಯಾರ್ಥಿಗಳ ಕುಟುಂಬಕ್ಕೆ 5 ಲಕ್ಷ ಪರಿಹಾರ
ಗಾನಕವಿ ಫೌಂಡೇಷನ್ ಅಧ್ಯಕ್ಷ ವಿಶ್ವಕುಮಾರ್, ವರ್ತಕರ ಸಂಘದ ಅಧ್ಯಕ್ಷ ಕೆ.ಎಸ್.ರವಿಶಂಕರ್, ಕಾರ್ಯದರ್ಶಿ ಕೆ.ಎಸ್.ಚಿದಾನಂದ ಗಣೇಶ್, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ನಿಜಗುಣ ಮೊದಲಾದವರು ಸ್ಥಳದಲ್ಲಿದ್ದು ಚಪಾತಿ ತಯಾರಿಕೆ ಕಾರ್ಯವನ್ನು ನೋಡಿಕೊಳ್ಳುತ್ತಿದ್ದಾರೆ.