ಕಾಡಾನೆ ಉಪಟಳ ತಡೆಗೆ ರೈಲ್ವೆ ಕಂಬಿಯ ಬ್ಯಾರಿಕೇಡ್
ಚಾಮರಾಜನಗರ, ಆಗಸ್ಟ್ 4: ಈಗಾಗಲೇ ಬಂಡೀಪುರ ಸೇರಿದಂತೆ ಹಲವು ಅರಣ್ಯಗಳಲ್ಲಿ ಕಾಡಾನೆಗಳು ನಾಡಿಗೆ ಹೋಗುವುದನ್ನು ತಡೆಯಲು ರೈಲ್ವೆ ಕಂಬಿಯ ಬ್ಯಾರಿಕೇಡ್ ಗಳನ್ನು ಅರಣ್ಯದಂಚಿನಲ್ಲಿ ಅಳವಡಿಸಲಾಗುತ್ತಿದ್ದು, ಇದಕ್ಕೆ ಬೇಕಾಗುವ ರೈಲ್ವೆ ಕಂಬಿಗಳನ್ನು ಕಡಿಮೆ ದರದಲ್ಲಿ ನೀಡುವಂತೆ ಚಾಮರಾಜನಗರ ಸಂಸದ ಧ್ರುವನಾರಾಯಣ್ ಅವರು ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಮನವಿ ಸಲ್ಲಿಸಿದ್ದಾರೆ.
ನವದೆಹಲಿಯಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿ ಮಾಡಿದ ಸಂಸದ ಧ್ರುವನಾರಾಯಣ್, ಕರ್ನಾಟಕದಲ್ಲಿ ಕಾಡಾನೆಗಳ ಸಂತತಿ ಹೆಚ್ಚಳವಾಗಿದೆ. ಕಾಡಾನೆಗಳು ಅರಣ್ಯದಿಂದ ಹೊರ ಬಂದು ರೈತರು ಬೆಳೆದ ಫಸಲಿನ ಮೇಲೆ ದಾಳಿ ಮಾಡಿ ನಷ್ಟವನ್ನುಂಟು ಮಾಡುತ್ತಿವೆ. ಇದನ್ನು ತಡೆಗಟ್ಟಲು ಅರಣ್ಯ ಇಲಾಖೆ ಕಾಡಂಚಿನಲ್ಲಿ ರೈಲ್ವೆ ಕಂಬಿಗಳನ್ನು ಬಳಸಿ ಬ್ಯಾರಿಕೇಡ್ ಗಳನ್ನು ನಿರ್ಮಿಸಿ ಆನೆಗಳು ರೈತರ ಜಮೀನಿನತ್ತ ಹೊಗುವುದನ್ನು ತಡೆಯಲಾಗುತ್ತಿದೆ.
ಈ ಬ್ಯಾರಿಕೇಡ್ ಗಳ ನಿರ್ಮಾಣಕ್ಕೆ ಅರಣ್ಯ ಇಲಾಖೆಯು ರೈಲ್ವೆ ಇಲಾಖೆಯಿಂದ ಅನುಪಯುಕ್ತ ರೈಲ್ವೆ ಕಂಬಿಗಳನ್ನು ಖರೀದಿಸುತ್ತಿದ್ದು, ಈ ಕಂಬಿಗಳಿಗೆ ರೈಲ್ವೆ ಇಲಾಖೆ ಹೆಚ್ಚಿನ ದರ ವಿಧಿಸುತ್ತಿದೆ. ಪರಿಣಾಮ ಅರಣ್ಯ ಇಲಾಖೆಗೆ ಹೆಚ್ಚಿನ ಹೊರೆ ಬೀಳುತ್ತಿದೆ. ಆದ್ದರಿಂದ ಅರಣ್ಯ ಇಲಾಖೆ ಬ್ಯಾರಿಕೇಡ್ ಗಳನ್ನು ನಿರ್ಮಾಣ ಮಾಡಲು ಅನುಕೂಲವಾಗುವಂತೆ ರೈಲ್ವೆ ಇಲಾಖೆಯ ಅನುಪಯುಕ್ತ ರೈಲ್ವೆ ಕಂಬಿಗಳನ್ನು ರಿಯಾಯಿತಿ ದರದಲ್ಲಿ ನೀಡುವಂತೆ ಅವರು ಮನವಿ ಮಾಡಿದ್ದಾರೆ.
ಅರಣ್ಯ ಇಲಾಖೆಯು ಈ ಸಂಬಂಧ ರೈಲ್ವೆ ಇಲಾಖೆಗೆ ಪತ್ರ ಬರೆದಿದ್ದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂಬುದನ್ನು ಜ್ಞಾಪಿಸಿದ ಸಂಸದರು ಈ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಬೇಕೆಂದು ರೈಲ್ವೆ ಸಚಿವ ಅವರನ್ನು ಒತ್ತಾಯಿಸಿದ್ದಾರೆ. ಸಂಸದ ಆರ್.ಧ್ರುವನಾರಾಯಣ್ ಅವರ ಮನವಿಯನ್ನು ಸ್ವೀಕರಿಸಿರುವ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ.