ಇಬ್ಬರನ್ನು ಬಲಿ ಪಡೆದಿದ್ದ ನರಭಕ್ಷಕ ಹುಲಿ ಕೊನೆಗೂ ಸೆರೆ
ಚಾಮರಾಜನಗರ, ಅಕ್ಟೋಬರ್ 13: ಒಂದು ತಿಂಗಳ ಅವಧಿಯಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ನರಭಕ್ಷಕ ಹುಲಿಗೆ ಭಾನುವಾರ ಮದ್ಯಾಹ್ನ 2.45ರ ಹೊತ್ತಿಗೆ ಅರಿವಳಿಕೆ ಮದ್ದನ್ನು ಯಶಸ್ವಿಯಾಗಿ ಹೊಡೆಯಲಾಯಿತು. ಗುಂಡ್ಲುಪೇಟೆ ಸಮೀಪದ ಮೇಲಕಾಮನಹಳ್ಳಿಯ ಸಿದ್ದಿಕಿ ಎಂಬುವವರ ಜಮೀನಿನಲ್ಲಿ ಅಡಗಿ ಕುಳಿತಿದ್ದ ಹುಲಿಯನ್ನು ಪೊಲೀಸ್ ಇಲಾಖೆಯ ನಾಯಿ ರಾಣಾ ಪತ್ತೆ ಹಚ್ಚಿದ್ದು, ಕೊನೆಗೂ ಹುಲಿ ಸೆರೆಯಾಗಿದೆ.
ಕಳೆದ ಐದು ದಿನಗಳಿಂದಲೂ ಅರಣ್ಯ ಇಲಾಖೆಯು ಹುಲಿ ಸೆರೆ ಹಿಡಿಯಲು ಭಾರೀ ಕಾರ್ಯಾಚರಣೆ ನಡೆಸುತ್ತಿತ್ತು. ಮೂರು ಆನೆಗಳ ಸಹಿತ ನೂರಾರು ಸಿಬ್ಬಂದಿ ಪ್ರಯತ್ನ ನಡೆಸಿದ್ದರು. ಆದರೆ ಐದು ದಿನಗಳಿಂದ ಯಾರ ಕಣ್ಣಿಗೂ ಬಿದ್ದಿಲ್ಲದ ಹುಲಿಯು ಶನಿವಾರ ಕೂಡ ಕರುವೊಂದನ್ನು ಹೊತ್ತೊಯ್ದಿತ್ತು.
ನರಭಕ್ಷಕ ಹುಲಿ ಸೆರೆಯಾಗುತ್ತಾ, ಗುಂಡಿಗೆ ಬಲಿಯಾಗುತ್ತಾ...?
ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರದಂದು ಹುಲಿಗೆ ಅರಿವಳಿಕೆ ನೀಡುವಲ್ಲಿ ಯಶಸ್ವಿ ಆದರು. ಅರಿವಳಿಕೆ ಚುಚ್ಚು ಮದ್ದು ನೀಡಿ ಅರ್ಧ ಗಂಟೆಯಾದರೂ ಹುಲಿಯ ಪ್ರಜ್ಞೆ ತಪ್ಪಿರಲಿಲ್ಲ. ಸಿದ್ದಿಕಿ ಎಂಬುವರ ಜಮೀನಿನ ಬಳಿಯ ಅರಣ್ಯದಲ್ಲಿ ಹುಲಿ ಇತ್ತು.
ಸುಮಾರು ಏಳು ವರ್ಷದ ಹುಲಿಗೆ ವೈದ್ಯರು ಅರಿವಳಿಕೆ ಚುಚ್ಚು ಮದ್ದು ನೀಡಿದ್ದರು. ಸಾಮಾನ್ಯವಾಗಿ ಅರಿವಳಿಕೆ ಚುಚ್ಚು ಮದ್ದು ನೀಡಿದ ಐದು ನಿಮಿಷದಲ್ಲಿ ಹುಲಿ ಪ್ರಜ್ಞೆ ಕಳೆದುಕೊಳ್ಳುತ್ತದೆ. ಆದರೆ ಪ್ರಜ್ಞೆ ಕಳೆದುಕೊಳ್ಳದ ಹುಲಿ ಅರಣ್ಯದಲ್ಲಿ ಓಡಾಡುತ್ತಿತ್ತು. ಅರಿವಳಿಕೆ ವೈದ್ಯರು, ಗುರಿಕಾರರು ಮತ್ತು ಸಿಬ್ಬಂದಿ ಹುಲಿಯನ್ನೇ ಹಿಂಬಾಲಿಸುತ್ತಿದ್ದರು.
ಬಲೆ, ಬೋನ್ ನೊಂದಿಗೆ ವೈದ್ಯರು ಕಾಯ್ದ ಕುಳಿತಿದ್ದರು. ಅರಿವಳಿಕೆ ವೈದ್ಯ ನಾಗರಾಜು, ಗುರಿಕಾರ ಅಸ್ಗರ್ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದರು. ಅಭಿಮನ್ಯು ಆನೆಯ ಮೇಲೆ ವೈದ್ಯರು ಮತ್ತು ಗುರಿಕಾರರು ಕಾಯ್ದು ಕುಳಿತಿದ್ದರು. ಅಭಿಮನ್ಯುಗೆ ಗೋಪಾಲಸ್ವಾಮಿ, ರೋಹಿತ್, ಗಜೇಂದ್ರ ಆನೆಗಳು ಸಾಥ್ ನೀಡಿದ್ದವು.
ನರಭಕ್ಷಕ ಹುಲಿ ಸೆರೆಗಾಗಿ ಸಾಕಾನೆಯಿಂದ ಕಾರ್ಯಾಚರಣೆ
ಸಾಮಾನ್ಯವಾಗಿ ಬೇಟೆ ಆಡಲು ಸಾಧ್ಯವಿಲ್ಲದ ಗಾಯಗೊಂಡ ಹುಲಿ ಅಥವಾ ವಯಸ್ಸಾಗಿರುವಂಥದ್ದು, ಕಣ್ಣಿನ ಸಮಸ್ಯೆ ಅಥವಾ ಅನಾರೋಗ್ಯ ಕಾರಣಕ್ಕೆ ಸುಲಭ ಬೇಟೆಯನ್ನು ಹುಡುಕಲು ಶುರು ಮಾಡುತ್ತದೆ. ಅಂಥ ನರಭಕ್ಷಕ ಹುಲಿಗಳನ್ನು ಕೊಲ್ಲುವುದೇ ಮೊದಲ ಆಯ್ಕೆ ಆಗಿರುತ್ತದೆ.