ಸಂಪರ್ಕ ಕಲ್ಪಿಸುವ ಮುನ್ನವೇ ನೆಲಕ್ಕುರುಳಿದ ವಿದ್ಯುತ್ ಕಂಬ
ಚಾಮರಾಜನಗರ, ಮೇ 07: ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಚಾಮರಾಜನಗರ ಜಿಲ್ಲೆಗೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೇಂದ್ರದ ನಿರಂತರ ಜ್ಯೋತಿ ವಿದ್ಯುತ್ ಯೋಜನೆಯ ಬಗ್ಗೆ ಮಾತನಾಡಿದ್ದರು. ಅವರು ಬಂದು ಹೋದ ಬೆನ್ನಲ್ಲೇ ಸುರಿದ ಮಳೆಗೆ ಗುಂಡ್ಲುಪೇಟೆ ತಾಲೂಕಿನ ಹಲವೆಡೆ ಅಳವಡಿಸಲಾಗಿದ್ದ ವಿದ್ಯುತ್ ಕಂಬಗಳು ಕಳಪೆ ಕಾಮಗಾರಿಯಿಂದ ನೆಲಕ್ಕುರುಳಿವೆ.
ಗುಂಡ್ಲುಪೇಟೆ ತಾಲೂಕಿನ ದಾರಿಬೇಗೂರು ಹಾಗೂ ಕಡತಾಳಕಟ್ಟೆಹುಂಡಿ ನಡುವೆ ಸುಮಾರು ಹತ್ತಕ್ಕೂ ಹೆಚ್ಚಿನ ಕಂಬಗಳು ನೆಲಕ್ಕುರುಳಿವೆ. ಆದರೆ ಕಂಬಗಳಿಗೆ ವಿದ್ಯುತ್ ತಂತಿ ಎಳೆದು ಸಂಪರ್ಕ ನೀಡದೆ ಇದ್ದದುರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಕಳಪೆ ಕಾಮಗಾರಿ ಎಂಬುದಕ್ಕೆ ಮಾತ್ರ ಇದು ಸಾಕ್ಷಿಯಾಗಿದೆ.
ಬಿದ್ದ ಮರಗಳ ತೆರವಿಗೆ ಬಿಬಿಎಂಪಿ ಸಿಬ್ಬಂದಿಗಳ ಹರಸಾಹಸ
ಹಾಗೆನೋಡಿದರೆ ಈಗ ತರಾತುರಿಯಲ್ಲಿ ಮಾಡುತ್ತಿರುವ ಕಾಮಗಾರಿ ಇವತ್ತು ನಿನ್ನೆಯದಲ್ಲ. ಕೆಲವು ವರ್ಷಗಳ ಹಿಂದೆಯೇ ಇದನ್ನು ಆರಂಭಿಸಲಾಗಿತ್ತಾದರೂ ಆಮೆನಡಿಗೆಯಲ್ಲಿ ಸಾಗಿತ್ತು. ನಮ್ಮ ಮನೆಗೆ ಇವತ್ತು ಬರುತ್ತೆ ನಾಳೆ ವಿದ್ಯುತ್ ಬರುತ್ತೆ ಎಂದು ಕಾದವರೆಲ್ಲ ಈ ಯೋಜನೆಯನ್ನೇ ಮರೆತು ಬಿಟ್ಟಿದ್ದರು. ಆದರೆ ಇದೀಗ ಚುನಾವಣೆ ಬರುತ್ತಿರುವುದರಿಂದ ಅಷ್ಟೇ ಅಲ್ಲ ಲೋಕಸಭಾ ಚುನಾವಣೆಯೂ ಹತ್ತಿರದಲ್ಲೇ ಇರುವುದರಿಂದಾಗಿ ಇದೀಗ ಇದಕ್ಕೆ ಸ್ವಲ್ಪಮಟ್ಟಿಗಿನ ವೇಗ ದೊರೆತಿದ್ದು, ಕಂಬ ನೆಟ್ಟು ಮುಗಿಸಿ ಬಿಡುವ ಜರೂರಲ್ಲಿ ಮಾಡಿದ ಕೆಲಸದಿಂದಾಗಿ ಅದು ಸಣ್ಣ ಮಳೆಗೆ ಮುರಿದು ಬೀಳುವಂತಾಗಿದೆ.
ಇನ್ನೊಂದೆಡೆ ಗ್ರಾಮಸ್ಥರು ವಿದ್ಯುತ್ ತಂತಿ ಎಳೆಯಲು ನೆಟ್ಟಿರುವ ಕಂಬಗಳ ಬಗ್ಗೆ ಅನುಮಾನ ಪಡುತ್ತಿದ್ದು ಅಡ್ಡಾದಿಡ್ಡಿಯಾಗಿ ನೆಡಲಾಗಿದೆ ಎಂಬ ಆರೋಪವನ್ನು ಕೂಡ ಮಾಡುತ್ತಿದ್ದಾರೆ. ಈ ಕಾಮಗಾರಿ ಕುರಿತಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಮಸ್ಥರು ಹೇಳುವ ಪ್ರಕಾರ ಕಳೆದ ಲೋಕಸಭಾ ಚುನಾವಣೆಯ ವೇಳೆಗೆ ಎಲ್ಲ ಗ್ರಾಮಗಳಿಗೂ ನಿರಂತರ ಜ್ಯೋತಿ ಸಂಪರ್ಕ ಕಲ್ಪಿಸಲು ಉದ್ದೇಶಿಸಿ, ಗುತ್ತಿಗೆದಾರನಿಗೆ ಒಂದು ವರ್ಷದ ಕಾಲಮಿತಿಯನ್ನು ನೀಡಲಾಗಿತ್ತು. ಆದರೆ ಐದು ವರ್ಷಗಳ ಹಿಂದೆಯೇ ಕಾಮಗಾರಿ ಪ್ರಾರಂಭವಾಗಿದ್ದರೂ ಇನ್ನೂ ಮುಗಿದಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ಕಾಮಗಾರಿ ಆರಂಭವಾದಾಗಿನಿಂದಲೂ ಆಯಾ ಫೀಡರುಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಬೆಳಗಿನಿಂದ ಸಂಜೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದಾಗಿ ಈ ಅವಧಿಯಲ್ಲಿ ವಿದ್ಯುತ್ ಅವಲಂಬಿತ ಯಾವುದೇ ಕೆಲಸಕಾರ್ಯಗಳನ್ನು ಮಾಡಲಾಗುತ್ತಿಲ್ಲ. ಕಂಬ ನೆಟ್ಟ ಬಳಿಕ ಅದರ ಸುತ್ತಲೂ ಕಾಂಕ್ರೀಟ್ ನಿಂದ ಮುಚ್ಚಿ ಭದ್ರಗೊಳಿಸಬೇಕು ಆದರೆ ಇದ್ಯಾವುದನ್ನೂ ಮಾಡುತ್ತಿಲ್ಲ ಇದರಿಂದ ಕಂಬಗಳು ನೆಲಕ್ಕುರುಳುತ್ತಿವೆ ಎನ್ನುವುದು ಇಲ್ಲಿನವರ ದೂರು.
ಐದು ವರ್ಷಗಳ ಹಿಂದೆ 19 ಕೋಟಿ ರೂಪಾಯಿಗಳ ವೆಚ್ಚದಲ್ಲಿ ತಾಲೂಕಿನ ಎಲ್ಲ್ಲ 134 ಗ್ರಾಮಗಳಿಗೂ ನಿರಂತರವಾಗಿ ಗುಣಮಟ್ಟದ ವಿದ್ಯುತ್ ಪೂರೈಸಲು ಯೋಜನೆ ರೂಪಿಸಿ, ಕಾಮಗಾರಿ ಆರಂಭಿಸಿದ್ದು, ಬೇಗೂರು ಹಾಗೂ ಗುಂಡ್ಲುಪೇಟೆ ಉಪ ವಿಭಾಗಗಳಲ್ಲಿ ಒಟ್ಟು 14 ಫೀಡರುಗಳನ್ನು ನಿರ್ಮಿಸಿ ವಿದ್ಯುತ್ ಪೂರೈಕೆ ಮಾಡಬೇಕಾಗಿದೆ. ಆದರೆ ಸದ್ಯ 11 ಕಾರ್ಯಾರಂಭ ಮಾಡಿವೆ. ಇನ್ನು ಹೊಸಪುರ-ಹೊರೆಯಾಲ, ಶೀಲವಂತಪುರ, ಚಿರಕನಹಳ್ಳಿ, ಕಗ್ಗಳ, ಚನ್ನಂಜಯ್ಯನಹುಂಡಿಗೆ ಸೇರುವ ಮೂರು ಫೀಡರುಗಳ ಕಾಮಗಾರಿ ನಡೆಸಲಾಗುತ್ತಿದೆ.
ಒಟ್ಟಾರೆ ಚುನಾವಣೆ ಬರುತ್ತಿದ್ದಂತೆಯೇ ಕೆಲಸ ಮಾಡಿ ಮತದಾರರ ಮತ ಸೆಳೆಯುವ ತಂತ್ರದಿಂದಾಗಿ ಇಂತಹ ಅವಘಡಗಳಾಗುತ್ತಿದ್ದು, ಇನ್ನು ಮುಂದೆಯಾದರೂ ಸಂಬಂಧಿಸಿದವರು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕಾಗಿದೆ.