ಬಂಡೀಪುರ ಶಿಬಿರದಿಂದ ಸಾಕಾನೆಗಳ ಸ್ಥಳಾಂತರ?
ಚಾಮರಾಜನಗರ, ಫೆಬ್ರವರಿ 06: ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ರಾಂಪುರ ಶಿಬಿರದಲ್ಲಿರುವ ಸಾಕಾನೆಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಸಾಕಾನೆಗಳಿಗೆ ದುಬಾರಿ ಖರ್ಚು ಬೀಳುತ್ತಿದ್ದು, ಅವುಗಳನ್ನು ಪೋಷಿಸುವುದೇ ಕಷ್ಟದ ಕೆಲಸವಾಗಿ ಮಾರ್ಪಟ್ಟಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಕೆಲವು ದಿನಗಳ ಹಿಂದೆ ಇಲ್ಲಿನ ಶಿಬಿರಗಳಲ್ಲಿ ಸಾಕಾನೆಗಳಿಗೆ ಆಹಾರವಿಲ್ಲದೆ ಕಾಡಿಗೆ ಬಿಡುವಂತಾಗಿತ್ತು. ಈ ಸಾಕಾನೆಗಳ ಆಹಾರಕ್ಕೆ ವರ್ಷಕ್ಕೆ ಸುಮಾರು 20ಲಕ್ಷ ರೂ.ಗಿಂತ ಹೆಚ್ಚು ಖರ್ಚಾಗುತ್ತಿದೆ ಜತೆಗೆ ಕಾವಾಡಿ, ಮಾವುತರಿಗೂ ವೇತನ ನೀಡಬೇಕಾಗಿದೆ.
ಬಂಡೀಪುರ ಅರಣ್ಯ: ತಿಂಗಳಲ್ಲಿ ನಾಲ್ಕು ಹುಲಿ ಸಾವು
ಇದೆಲ್ಲಕ್ಕಿಂತ ಹೆಚ್ಚಾಗಿ ಈ ಸಾಕಾನೆಗಳಿಗೆ ಯಾವುದೇ ತರಬೇತಿ ನೀಡದ ಕಾರಣ ಹುಲಿ ಕಾರ್ಯಾಚರಣೆಗಾಗಲೀ, ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಕ್ಕೂ ಬಳಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಲ್ಲಿರುವ ಸಾಕಾನೆಗಳ ಪೈಕಿ ಕೆಲವು ಆನೆಗಳನ್ನು ಬಿಹಾರ, ಜಾರ್ಖಂಡ್ ಮತ್ತು ದುಬಾರೆಗೆ ಸ್ಥಳಾಂತರಿಸಿ ಬಳಿಕ ಶಿಬಿರವನ್ನು ಮುಚ್ಚಲಾಗುತ್ತಿದೆ ಎಂಬ ವದಂತಿ ಅರಣ್ಯ ಇಲಾಖೆ ಮೂಲಗಳಿಂದಲೇ ಹೊರಬಂದಿದೆ.
ಬಂಡೀಪುರದ ಕಲ್ಕೆರೆ ವಲಯಕ್ಕೆ ಸೇರಿದ ರಾಂಪುರ ಸಾಕಾನೆ ಶಿಬಿರದಲ್ಲಿದ್ದ 17 ಸಾಕಾನೆಗಳ ಪೈಕಿ ಭಾಸ್ಕರ, ನಯನ, ನಿಸರ್ಗ ಮತ್ತು ಐಶ್ವರ್ಯ ಎಂಬ ನಾಲ್ಕು ಸಾಕಾನೆಗಳನ್ನು ಜಾರ್ಖಂಡ್ ರಾಜ್ಯಕ್ಕೆ ಕಳುಹಿಸುವ ಸಲುವಾಗಿ ಈಗಾಗಲೇ ಮೈಸೂರು ಮೃಗಾಲಯಕ್ಕೆ ಕಳುಹಿಸಲಾಗಿದೆ. ಈ ನಡುವೆ ಬಿಹಾರದಿಂದಲೂ ಮೂರು ಆನೆಗಳಿಗೆ ಬೇಡಿಕೆ ಬಂದಿದೆ ಎನ್ನಲಾಗಿದೆ. ಇದೆಲ್ಲವನ್ನು ಗಮನಿಸಿದರೆ ಬಂಡೀಪುರ ಅರಣ್ಯದಲ್ಲಿರುವ ಶಿಬಿರಗಳಿಂದ ಸಾಕಾನೆಗಳನ್ನು ಸ್ಥಳಾಂತರಿಸಿ ಮುಚ್ಚುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ.
ರಾಂಪುರ ಸಾಕಾನೆ ಶಿಬಿರವು ಬಂಡೀಪುರದ ಮೂಲೆಹೊಳೆ ಹಾಗೂ ಕಲ್ಕೆರೆ ಅರಣ್ಯ ವಲಯಗಳ ಮಧ್ಯೆಯಿದ್ದು, ಮೂಲೆಹೊಳೆ ದಡದಲ್ಲಿದೆ. ಇಲ್ಲಿಗೆ ತೆರಳಬೇಕಾದರೆ ಮುಖ್ಯ ರಸ್ತೆಯಿಂದ 10 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ತೆರಳಬೇಕಾಗಿದೆ. ಸಾಕಾನೆಗಳನ್ನು ನೋಡಿಕೊಳ್ಳಲು ಇಲ್ಲಿಯೇ ಮಾವುತರು ಮತ್ತು ಕಾವಾಡಿಗಳ ಕುಟುಂಬಗಳು ನೆಲೆಸಿದ್ದು, ಇವು ಮೂಲ ಸೌಕರ್ಯವಿಲ್ಲದೆ ಪರದಾಡುವಂತಾಗಿದೆ.
ಇಲ್ಲಿರುವ ಸಮಸ್ಯೆಗಳನ್ನು ಗಮನಿಸಿದರೆ ಸಾಕಾನೆಗಳ ಶಿಬಿರವನ್ನು ಸ್ಥಳಾಂತರಿಸುವ ಅನಿವಾರ್ಯತೆ ಎದ್ದು ಕಾಣುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.