ಚಾಮರಾಜನಗರ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆ; ಜಮೀನುಗಳು ಜಲಾವೃತ
ಚಾಮರಾಜನಗರ, ಮೇ.14: ದೇವರ ದಯೆಯೋ, ವರುಣನ ಕೃಪೆಯೋ..ಅಂತೂ ಬಂಡೀಪುರಕ್ಕೆ ಧಾರಾಕಾರವಾಗಿ ಮಳೆಯಾಗಿದೆ. ಇದರಲ್ಲಿ ಮಿಂದೆದ್ದ ವನ್ಯಸಂಪತ್ತು ಸಂತುಷ್ಟಗೊಂಡಿದೆ.
ಫೆಬ್ರವರಿ ತಿಂಗಳಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿ ಇಡೀ ಅರಣ್ಯವನ್ನೇ ಸುಟ್ಟು ಹಾಕಿತ್ತು. ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಸಣ್ಣಪುಟ್ಟ ಗಿಡಮರಗಳು, ಜೀವಸಂತುಗಳು ಭಸ್ಮಗೊಂಡಿದ್ದವು.
ಇಡೀ ಅರಣ್ಯದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿತ್ತು. ಎಲ್ಲರೂ ದೇವರೇ ಮಳೆ ಬರಲಿ ಎಂದು ಪ್ರಾರ್ಥನೆ ಮಾಡುವಂತಾಗಿತ್ತು. ದೇವರಿಗೆ ಮೂಕಪ್ರಾಣಿಗಳ ಆರ್ತನಾದ, ಜನರ ಪ್ರಾರ್ಥನೆ ಕೇಳಿಸಿತೋ ಏನೋ ಮಾರ್ಚ್ ತಿಂಗಳಲ್ಲಿ ಸ್ವಲ್ಪ ಮಟ್ಟಿಗೆ ಮಳೆಯಾಗಿತ್ತು. ಇದು ಮುಳುಗುವಾತನಿಗೆ ಹುಲುಕಡ್ಡಿಯ ನೆರವು ಎಂಬಂತಾಗಿತ್ತು.
ಈ ಬಾರಿ ಮುಂಗಾರು ಕ್ಷೀಣ, ಜೂನ್ 08ಕ್ಕೆ ರಾಜ್ಯಕ್ಕೆ ಪ್ರವೇಶ
ಅದಾದ ನಂತರ ಸಾಧಾರಣ ಮಳೆ ಸುರಿದಿತ್ತು. ಇದು ಸ್ವಲ್ಪ ಮಟ್ಟಿಗಿನ ನೆಮ್ಮದಿಯನ್ನು ತಂದಿತ್ತು. ಇದೀಗ ಧಾರಾಕಾರವಾಗಿ ಮಳೆ ಸುರಿದಿದ್ದು, ಎಲ್ಲರೂ ಸಂತೋಷಪಡುವಂತಾಗಿದೆ.
ಮಳೆಯಿಂದ ರೈತರಿಗೆ ಜನರಿಗೆ ಸ್ವಲ್ಪ ಮಟ್ಟಿಗೆ ತೊಂದರೆ, ನಷ್ಟವಾಗಿದ್ದರೂ ಬಹಳಷ್ಟು ಅನುಕೂಲವೇ ಆಗಿದೆ ಎಂದರೆ ತಪ್ಪಾಗಲಾರದು.
ಮಂಗಳೂರಿನಲ್ಲಿ ನೀರಿನ ಸಮಸ್ಯೆ: ಮಳೆಗಾಗಿ ದೇವರ ಮೊರೆ ಹೋದ ಜನರು
ಇದೀಗ ಸುರಿದ ಮಳೆಗೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಕೆರೆ ಕಟ್ಟೆಗಳಲ್ಲಿ ನೀರು ಕಾಣಿಸಿಕೊಳ್ಳುವಂತಾಗಿದೆ. ಬೆಂಕಿ ಕಾಣಿಸಿಕೊಂಡಿದ್ದ ಮೇಲುಕಾಮನಹಳ್ಳಿ ಪಶ್ಚಿಮ ಭಾಗದ ಅರಣ್ಯದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಮಳೆ ಸುರಿದಿದ್ದರಿಂದ ತಗ್ಗು ಪ್ರದೇಶದ ಕಡೆಗೆ ನೀರು ಹರಿದಿದೆ.
ಇದರಿಂದ ಹಂಗಳ ಮತ್ತು ಮೇಲುಕಾಮನಹಳ್ಳಿ ಗ್ರಾಮದ ನಡುವಿನ ಗಾಳಿ ಆಂಜನೇಯಸ್ವಾಮಿ ದೇವಾಲಯದ ಬಳಿಯ ದೊಡ್ಡ ಸೇತುವೆ ಮತ್ತು ಬಂಡೀಪುರ ಪ್ಲಾಜಾ ಬಳಿಯ ಚಿಕ್ಕ ಸೇತುವೆ ಮೂಲಕ ಮಳೆ ನೀರು ಹಂಗಳ ಮತ್ತು ಕಲೀಗೌಡನಹಳ್ಳಿ ಕೆರೆಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದೆ.
ಬೆಂಗಳೂರಲ್ಲಿ ಒಂದೆರೆಡು ಮಳೆಗೆ ಈ ಅವಸ್ಥೆ, ಮಳೆಗಾಲ ಕಳೆಯೋದ್ಹೇಗೆ?
ಮಳೆಯ ರಭಸ ಹೆಚ್ಚಾಗಿ ನೀರು ಅಧಿಕ ಪ್ರಮಾಣದಲ್ಲಿ ಹರಿದು ಬಂದಿದ್ದರಿಂದ ಇಲ್ಲಿನ ರೆಸಾರ್ಟ್, ಹೋಟೆಲ್, ನರ್ಸರಿ ತೋಟಗಳೂ ಜಲಾವೃತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದ ಮಾಲೀಕರು ಮತ್ತು ನೌಕರರು ಆತಂಕಪಡುವಂತಾಯಿತು. ನೀರು ಹರಿದ ಪರಿಣಾಮ ಹಳ್ಳದ ಎರಡು ಬದಿಯ ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಜಲಾವೃತವಾಗಿ ಹಾನಿಗೊಳಗಾದರೆ, ಕೆಲವು ಬೆಳೆಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿವೆ.
ಮೇಲುಕಾಮನಹಳ್ಳಿ ಭಾಗದ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದಲ್ಲಿ ಮಳೆಯಿಂದಾಗಿ ಹೊಳೆಯಂತೆ ನೀರು ಹರಿಯುತ್ತಿರುವುದನ್ನು ನೋಡಲು ಜನರು ತಂಡೋಪತಂಡವಾಗಿ ಆಗಮಿಸಿದ್ದು ಕಂಡು ಬಂತು.